ವಿಜಯಪುರ: "ನನ್ನ ಮಗ ಭಗತ್ನನ್ನೂ ಸಹ ಸೇನೆಗೆ ಕಳುಹಿಸುವೆ" ಅನ್ನೋದು ಹುತಾತ್ಮ ಯೋಧ ಕಾಶಿರಾಯ ಬೊಮ್ಮನಳ್ಳಿ ಪತ್ನಿ ಸಂಗೀತಾ ಹೇಳುವ ಕೆಚ್ಚೆದೆಯ ಮಾತು. ಹುತಾತ್ಮ ಯೋಧನ ಪತ್ನಿಯ ಆಡಿದ ಮಾತುಗಳು ಅಂತಿಮ ದರ್ಶನಕ್ಕೆ ಬಂದಿದ್ದ ಜನರ ಆತ್ಮವಿಶ್ವಾಸ, ಧೈರ್ಯ ಹಾಗು ದೇಶಪ್ರೇಮವನ್ನು ನೂರ್ಮಡಿಗೊಳಿಸಿತು.
'ಮಗ ಭಗತ್ನನ್ನೂ ಸೇನೆಗೆ ಕಳುಹಿಸುವೆ': ವೀರಯೋಧನ ಶವದೆದುರು ಪತ್ನಿಯ ಶಪಥ
ರಕ್ಷಕ್ ಕಾರ್ಯಾಚರಣೆ ವೇಳೆ ಶತ್ರುಗಳ ಗುಂಡೇಟಿಗೆ ವೀರಮರಣವನ್ನಪ್ಪಿರುವ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ರಕ್ಷಕ್ ಕಾರ್ಯಾಚರಣೆ ವೇಳೆ ಶತ್ರುಗಳ ಗುಂಡೇಟಿಗೆ ವೀರಮರಣವನ್ನಪ್ಪಿರುವ ಕಾಶಿರಾಯ ಬೊಮ್ಮನಹಳ್ಳಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಸ್ ನಿಲ್ದಾಣ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಿತು.
ಇದಕ್ಕೂ ಮುನ್ನ ಬೆಳಗಾವಿಯಿಂದ ಆಗಮಿಸಿದ ಯೋಧ ಕಾಶಿರಾಯ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಉಕ್ಕಲಿಗೆ ತರಲಾಯಿತು. ಮೊದಲು ಸರ್ಕಾರಿ ಶಾಲೆ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಜನತೆ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದರು. ನಂತರ ಗ್ರಾಮದ ಬಸ್ ನಿಲ್ದಾಣದ ಬಳಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.