ಕರ್ನಾಟಕ

karnataka

By

Published : Oct 21, 2022, 9:12 AM IST

ETV Bharat / state

ತಮ್ಮದಲ್ಲದ ತಪ್ಪಿಗೆ ಎಂಡೋಸಲ್ಫಾನ್ ಪೀಡಿತರ ಪರದಾಟ: ಸೌಲಭ್ಯಕ್ಕಾಗಿ ಮರು ಸಮೀಕ್ಷೆಗೆ ಆಗ್ರಹ

ಉತ್ತರ ಕನ್ನಡ ಜಿಲ್ಲಾದ್ಯಂತ ಈವರೆಗೆ ಸುಮಾರು 2 ಸಾವಿರ ಮಂದಿ ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ. ಆದರೆ, 2013-14 ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ ಕೇವಲ ಶೇ. 4 ರಷ್ಟು ಪೀಡಿತರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗಿದೆ. ಅಸಲಿಯಾಗಿ ಜಿಲ್ಲೆಯಲ್ಲಿ ಇನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾದ ಎಂಡೋಸಲ್ಫಾನ್ ಪೀಡಿತರಿದ್ದು, ಅವರು ಶಿಬಿರದಿಂದ ಹೊರಗುಳಿದಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

Endosulfan sufferers demand for facility
ಎಂಡೋಸಲ್ಫಾನ್ ಪೀಡಿತರು

ಕಾರವಾರ: ಅವರೆಲ್ಲರೂ ತಮ್ಮದಲ್ಲದ ತಪ್ಪಿಗೆ ರೋಗಬಾಧೆಗೆ ಒಳಗಾದವರು. ಮಾತ್ರವಲ್ಲದೇ ಅಂಗಾಂಗ ವೈಕಲ್ಯಕ್ಕೊಳಗಾಗಿ ನಿತ್ಯದ ಬದುಕು ನಡೆಸುವುದಕ್ಕೂ ಸಂಕಷ್ಟ ಅನುಭವಿಸುತ್ತಿರುವವರು.‌ ಆದರೆ, ಇಂತಹವರನ್ನು ಗುರುತಿಸುವಲ್ಲಿ ಆದ ಪ್ರಮಾದದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಮಂದಿಗೆ ಸಿಗಬೇಕಿದ್ದ ಸೌಲಭ್ಯಗಳು ಸಿಗದೇ ಸಂಕಷ್ಟದ ಬದುಕು ನಡೆಸುವಂತಾಗಿದೆ.

ಕಳೆದ ಎರಡು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್ ಮೂಲಕ ಉಡುಪಿ, ಮಂಗಳೂರು, ಉತ್ತರಕನ್ನಡ ಭಾಗದ ಗೇರು ಮರಗಳಿರುವ ಪ್ರದೇಶದಲ್ಲಿ ಎಂಡೋಸಲ್ಫಾನ್ ಔಷಧ ಸಿಂಪಡಿಸಲಾಗಿತ್ತು. ಆದರೆ, ಇದು ಗೇರು ಗಿಡದ ರೋಗ ವಾಸಿಗಿಂತ ಇದರ ವಿಷ ವರ್ತುಲ ಮನುಷ್ಯರ ಮೇಲೆ ಗಂಭೀರ ಪರಿಣಾಮ‌ ಬೀರಿತ್ತು. ವಿಷದಿಂದಾಗಿ ಹುಟುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ದಿ ಮಾಂದ್ಯತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿತು.

ಸೌಲಭ್ಯಕ್ಕಾಗಿ ಎಂಡೋಸಲ್ಫಾನ್ ಪೀಡಿತರ ಆಗ್ರಹ..

ಶೇ. 4 ರಷ್ಟು ಮಂದಿಗೆ ಸೌಲಭ್ಯ:ಉತ್ತರ ಕನ್ನಡ ಜಿಲ್ಲಾದ್ಯಂತ ಈವರೆಗೆ ಸುಮಾರು 2 ಸಾವಿರ ಮಂದಿ ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ. ಆದರೆ 2013-14 ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ ಕೇವಲ ಶೇ. 4 ರಷ್ಟು ಪೀಡಿತರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗಿದೆ. ಅಸಲಿಯಾಗಿ ಜಿಲ್ಲೆಯಲ್ಲಿ ಇನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾದ ಎಂಡೋಸಲ್ಫಾನ್ ಪೀಡಿತರಿದ್ದು, ಅವರು ಶಿಬಿರದಿಂದ ಹೊರಗುಳಿದಿದ್ದಾರೆ. ಅಲ್ಲದೇ ವಿಷಯ ತಿಳಿಯದೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾಮಟ್ಟದ ಸಮಗ್ರ ವಿಕಲಚೇತನರ ವಿಆರ್​​ಡಬ್ಲ್ಯೂ, ಯುಆರ್​​ಡಬ್ಲ್ಯೂ ಹಾಗೂ ಎಂಆರ್​​ಡಬ್ಲ್ಯೂ ನೌಕರರ ಒಕ್ಕೂಟ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಇನ್ನು ಎಂಡೋಸಲ್ಫಾನ್ ಸಮಸ್ಯೆಗೊಳಗಾದ ಪಕ್ಕದವರನ್ನು ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನವರೆಗೂ ಗುರುತಿಸಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವಿಕೆ ಆಗುತ್ತಿದೆ. ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರವಾಗಿ 5 ಎಕರೆ ಸ್ಥಳ ಮಂಜೂರು ಮಾಡಲಾಗಿದೆ. ಜೊತೆಗೆ ಮರಣದ ನಂತರ ಪರಿಹಾರ ನೀಡಲಾಗುತ್ತಿದೆ. 25 ರಿಂದ 58 ವರ್ಷದ ಒಳಗಿರುವ ಎಂಡೋಸಲ್ಫಾನ್ ಫಲಾನುಭವಿಗಳಿಗೆ 31 ತಿಂಗಳು 2 ಸಾವಿರ ರೂ. ಹಾಗೂ 59 ಮೇಲ್ಮಟ್ಟ ಫಲಾನುಭವಿಗಳಿಗೆ 4 ಸಾವಿರ ರೂ ನೀಡುತ್ತಿದ್ದಾರೆ.

ಆದರೆ ಉತ್ತರ ಕನ್ನಡದಲ್ಲಿ 25 ರಿಂದ 60 ವರ್ಷದ ರವರೆಗಿನ ಎಂಡೋಸಲ್ಫಾನ್ ಫಲಾನುಭವಿಗಳಿಗೆ 2‌ ಸಾವಿರ ರೂ ಮಾತ್ರ ಹಾಗೂ 61 ಮೇಲ್ಪಟ್ಟ ಫಲಾನುಭವಿಗಳಿಗೆ 4 ಸಾವಿರ ರೂ. ನೀಡಿ ತಾರತಮ್ಯ ಮಾಡಲಾಗುತ್ತಿದೆ. ಜೊತೆಗೆ ಕಳೆದ ಒಂದು ವರ್ಷದಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಕೂಡಲೇ ಈ ಹಿಂದಿನಂತೆ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ಒದಗಿಸುವ ವ್ಯವಸ್ಥೆ ಜಾರಿಯಾಗಬೇಕು ಎಂದು ಎಂಡೋಸಲ್ಫಾನ್ ಪೀಡಿತೆ ಪ್ರವೀಣಾ ನಾಯ್ಕ ಒತ್ತಾಯಿಸಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡನೆಗೊಳಗಾಗಿರುವವರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕಿದೆ.

ಇದನ್ನೂ ಓದಿ:ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎಂಡೋಸಲ್ಫಾನ್ ಪೀಡಿತರು

ABOUT THE AUTHOR

...view details