ಕರ್ನಾಟಕ

karnataka

By

Published : Oct 8, 2020, 7:19 PM IST

Updated : Oct 8, 2020, 7:56 PM IST

ETV Bharat / state

ಆನ್​ಲೈನ್ ಕ್ಲಾಸ್​ಗೆ ಸಿಗದ ನೆಟ್​​ವರ್ಕ್: ಬಸ್ ನಿಲ್ದಾಣವೇ ವಿದ್ಯಾರ್ಥಿಗಳಿಗೆ ಪಾಠಶಾಲೆ

ಕೋವಿಡ್ ಕಾರಣಕ್ಕೆ ಬಂದಾದ ಶಾಲಾ- ಕಾಲೇಜುಗಳು ಈವರೆಗೂ ಓಪನ್ ಆಗಿಲ್ಲ. ಆದರೆ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವುದನ್ನು ತಪ್ಪಿಸಲು ಆನ್​​ಲೈನ್​​ ಕ್ಲಾಸ್ ಮೂಲಕ ಭೋಧಿಸಲಾಗುತ್ತದೆ. ಆದರೆ ನೆಟ್​ವರ್ಕ್​ ಬಾರದ ಇಲ್ಲೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಮೂರು ಹಳ್ಳಿಯ ವಿದ್ಯಾರ್ಥಿಗಳು ಅಲ್ಪಸ್ವಲ್ಪ ನೆಟ್​​ವರ್ಕ್​ ಸಿಗುವ ಬಸ್ ನಿಲ್ದಾಣವನ್ನೆ ಆನ್​ಲೈನ್​​​ ಪಾಠಶಾಲೆಯನ್ನಾಗಿಸಿಕೊಂಡಿದ್ದಾರೆ.

ಬಸ್ ನಿಲ್ದಾಣವೇ ವಿದ್ಯಾರ್ಥಿಗಳಿಗೆ ಪಾಠಶಾಲೆ
ಬಸ್ ನಿಲ್ದಾಣವೇ ವಿದ್ಯಾರ್ಥಿಗಳಿಗೆ ಪಾಠಶಾಲೆ

ಕಾರವಾರ:ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಗೆ, ಶಿರ್ವೆ ಹಾಗೂ ಕೋವೆ ಗ್ರಾಮದಲ್ಲಿ ಇನ್ನೂ ಕೂಡ ಸರಿಯಾದ ನೆಟ್​ವರ್ಕ್​ ಸಂಪರ್ಕ ಇಲ್ಲ. ಇರುವ ಬಿಎಸ್ಎನ್ಎಲ್ ನೆಟ್​​ವರ್ಕ್​ ಕೂಡ ಲೆಕ್ಕಕ್ಕುಂಟು ಆಟಕ್ಕಿಲ್ಲದ ಹಾಗಾಗಿದೆ. ಆನ್​ಲೈನ್​​ ತರಗತಿಗಾಗಿ ಈ ಭಾಗದ ವಿದ್ಯಾರ್ಥಿಗಳು ಹಾಗೂ ನಿತ್ಯ ಬಳಕೆಗೆ ಗ್ರಾಮಸ್ಥರು, ಪ್ರವಾಸಿಗರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಸ್ ನಿಲ್ದಾಣವೇ ವಿದ್ಯಾರ್ಥಿಗಳಿಗೆ ಪಾಠಶಾಲೆ

ಕಾರವಾರ ತಾಲೂಕಿನಿಂದ 28 ಕಿ.ಮೀ. ದೂರ ಇರುವ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಗ್ರಾಮಗಳು ಇವೆ. ಅದರಲ್ಲಿ 5 ಗ್ರಾಮದಲ್ಲಿ ನೆಟ್​​ವರ್ಕ್​ ಸಂಪರ್ಕ ಸಿಗಲಿದ್ದು, ಉಳಿದ ನಗೆ, ಶಿರ್ವೆ, ಕೋವೆ ಗ್ರಾಮದಲ್ಲಿ ನೆಟ್ವರ್ಕ್ ಸಂಪರ್ಕವೇ ಇಲ್ಲದಂತಾಗಿದೆ. ಸದ್ಯ ಕೋವಿಡ್ ಕಾರಣದಿಂದಾಗಿ ಶಾಲೆಗಳು ಓಪನ್ ಆಗದ ಹಿನ್ನೆಲೆ ಆನ್​​ಲೈನ್​​ ಮೂಲಕ ಪಾಠಗಳನ್ನು ಕಳುಹಿಸಲಾಗುತ್ತದೆ. ಆದರೆ ದೆವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಮೂರು ಹಳ್ಳಿಯಲ್ಲಿ ನೆಟ್​ವರ್ಕ್​ ಬಾರದ ಕಾರಣ ಅನಿವಾರ್ಯ ಅದನ್ನು ಹುಡುಕಿಕೊಂಡು ದೇವಳಮಕ್ಕಿ ಗ್ರಾಮಕ್ಕೆ ಆಗಮಿಸುತ್ತಿದ್ದು, ಇಲ್ಲಿನ ಬಸ್ ನಿಲ್ದಾಣವನ್ನೆ ಪಾಠಶಾಲೆಯನ್ನಾಗಿಸಿಕೊಂಡಿದ್ದಾರೆ.

ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿ ವಾಸ ಮಾಡುವ ನಗೆ, ಶಿರ್ವೆ, ಕೋವೆ ಗ್ರಾಮದಲ್ಲಿ ಪ್ರೌಢಶಾಲೆ, ಪಿಯು ಹಾಗೂ ಪದವಿ ಸೇರಿ ಸುಮಾರು 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಾಗಿ ಪ್ರತಿನಿತ್ಯ ನಾಲ್ಕೈದು ಕಿ.ಮೀ ನಡೆದುಕೊಂಡು ಬಸ್ ನಿಲ್ದಾಣಕ್ಕೆ ಬರುತ್ತಾರೆ. ಇನ್ನು ಕೆಲವರು ಅಂಗಡಿ ಹಾಗೂ ತಮ್ಮ ಸ್ನೇಹಿತರ ಮನೆಯಲ್ಲಿ ಹೋಗಿ ಕುಳಿತುಕೊಂಡು ಶಿಕ್ಷಣ ಕಲಿಯುವಂತಾಗಿದೆ. ಅಲ್ಲದೆ ಇದ್ದ ಬಿಎಸ್ಎನ್ಎಲ್ ಕೂಡ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಆನ್​ಲೈನ್​​ ಶಿಕ್ಷಣ ತೊಡಕಾಗುತ್ತಿದ್ದು, ನಮಗೆ ತರಗತಿಯನ್ನೇ ಆರಂಭಿಸಲಿ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳ ಒತ್ತಾಯವಾಗಿದೆ.

ಬಸ್ ನಿಲ್ದಾಣವೇ ವಿದ್ಯಾರ್ಥಿಗಳಿಗೆ ಪಾಠಶಾಲೆ

ವಿದ್ಯಾರ್ಥಿಗಳು ಮಾತ್ರವಲ್ಲದೆ ಈ ಭಾಗದ ಜನರು ಕೂಡ ನೆಟ್​​ವರ್ಕ್​ ಸಿಗದ ಕಾರಣ ಪರದಾಡಬೇಕಾಗಿದೆ. ಅನಾರೋಗ್ಯ ಇಲ್ಲವೇ ಯಾರನ್ನಾದರೂ ಸಂಪರ್ಕಿಸಬೇಕೆಂದಲ್ಲಿ ನಾಲ್ಕೈದು ಕಿ.ಮೀ ನಡೆದು ನೆಟ್​​ವರ್ಕ್ ಹುಡುಕಬೇಕಾಗಿದೆ. ಗ್ರಾಮದಲ್ಲಿ ಸುಂದರವಾದ ಪ್ರವಾಸಿ ತಾಣಗಳೂ ಇದ್ದು, ಹೊರ ರಾಜ್ಯ, ಜಿಲ್ಲೆ, ತಾಲೂಕಿನಿಂದ ಪ್ರವಾಸಿಗರು ಸಹ ಬಂದು ಇಲ್ಲಿನ ರಮಣೀಯ ಪ್ರದೇಶ, ಚಾರಣ ಸ್ಥಳವನ್ನು ನೋಡಿ ಮನ ಮೆಚ್ಚಿದ್ದಾರೆ. ಆದರೆ ಇಲ್ಲಿ ಇರುವ ನೆಟ್​ವರ್ಕ್​ ಸಮಸ್ಯೆಯನ್ನು ಆದಷ್ಟೂ ಬೇಗ ಬಗೆಹರಿಸಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Last Updated : Oct 8, 2020, 7:56 PM IST

ABOUT THE AUTHOR

...view details