ಕಾರವಾರ (ಉತ್ತರ ಕನ್ನಡ): ಹಳಿಯಾಳ ಅರಣ್ಯ ವಿಭಾಗದ ದಿನಗೂಲಿ ನೌಕರ, ಹವ್ಯಾಸಿ ಉರಗ ಸಂರಕ್ಷಕ ಪರಶುರಾಮ ನಾರಾಯಣ ತೋರಸ್ಕರ ಎಂಬವರನ್ನು ಹಳಿಯಾಳ ತಾಲೂಕಿನ ಕರ್ಲಕಟ್ಟಾ ಗ್ರಾಮ ವ್ಯಾಪ್ತಿಯಲ್ಲಿರುವ ಹೊಲದಲ್ಲಿ ಎರಡೂ ಕಾಲುಗಳನ್ನು ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೃಷಿ ಜಮೀನಿನ ವ್ಯಾಜ್ಯವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.
ಕರ್ಲಕಟ್ಟಾ ಗ್ರಾಮದಲ್ಲಿ ಮೂರು ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಕೊಲೆಯಾದ ಪರಶುರಾಮ ತೋರಸ್ಕರ ಹಾಗೂ ಸಹದೇವ ಹನುಮಂತ ದಡ್ಡಿಕರ ಎಂಬವರ ಮಧ್ಯೆ ಗಲಾಟೆ ಆರಂಭಗೊಂಡಿತ್ತು. ಜಮೀನು ವ್ಯಾಜ್ಯದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಗುರುವಾರ ಇದೇ ವಿವಾದಿತ ಕೃಷಿ ಜಮೀನಿನಲ್ಲಿಯೇ ಪರಶುರಾಮರ ಕಾಲು ಕತ್ತರಿಸಿದ್ದು ತೀವ್ರ ರಕ್ತಸ್ರಾವವಾಗಿ ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಕರಣದ ಕುರಿತು ಮೃತರ ಸಹೋದರ ತುಕಾರಾಮ ನಾರಾಯಣ ತೋರಸ್ಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸ್.ಪಿ.ವಿಷ್ಣುವರ್ದನ.ಎಸ್. ಹಳಿಯಾಳ ಠಾಣೆಗೆ ಸಂಜೆ ಭೇಟಿ ನೀಡಿ ಮಾಹಿತಿ ಪಡೆದು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ದಾಂಡೇಲಿ ಡಿವೈಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಸುರೇಶ ಶಿಂಗಿಯವರ ಮುಂದಾಳತ್ವದಲ್ಲಿ ಪಿಎಸೈ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸೈ ಅಮಿತ ಅತ್ತಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ತಂಡ ಆರೋಪಿಗಳಿಗೆ ಬಲೆ ಬೀಸಿದ್ದಾರೆ.