ಶಿರಸಿ (ಉತ್ತರ ಕನ್ನಡ): ಕಾರಾಗೃಹದಲ್ಲಿ ಆರೋಪಿಗಳಾಗಿ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಶಿರಸಿಯಲ್ಲಿ ಭಗವದ್ಗೀತೆಯ ಬೋಧನೆಯನ್ನು ಮಾಡುವ ಮೂಲಕ ಮನಃ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ.
ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದಿಂದ ನಡೆಸುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ನಗರದ ಉಪವಿಭಾಗದ ಕಾರಾಗೃಹದಲ್ಲಿರುವ ಕೈದಿಗಳಿಗೆ 7 ದಿನಗಳ ಕಾಲ ಗೀತೆಯ ಬೋಧನೆ ನಡೆಯಲಿದ್ದು, ಅಪರಾಧದ ಮನಸ್ಥಿತಿಯಿಂದ ಹೊರತರಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಸೋಮವಾರ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಕೈದಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದ್ರೀಯ, ಮನಸ್ಸು ಹಾಗೂ ಬುದ್ಧಿಯನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಅತಿಯಾದ ಕಾಮ ಅಥವಾ ಆಸೆ ಮತ್ತು ಅತಿಯಾದ ಕ್ರೋಧದಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇವರೆಡೂ ತಪ್ಪು ಮಾಡಲು ಮೂಲ ಕಾರಣ. ಅದನ್ನು ತೆಗೆದು ಹಾಕಿದಲ್ಲಿ ಜೀವನದಲ್ಲಿ ಅಪರಾಧಗಳು ಆಗುವುದಿಲ್ಲ ಎಂದರು.