ಉಡುಪಿ:ಯುವ ಕಲಾವಿದ ವಿಘ್ನೇಶ್.ಆರ್.ಜಿ ಸದ್ದಿಲ್ಲದೆ ಸಾಧನೆಯೊಂದನ್ನು ಮಾಡಿದ್ದಾರೆ. ಚಿತ್ರಕಲೆಯಲ್ಲಿ ಎಲೆಮರೆ ಕಾಯಿಯಂತಿದ್ದ ಇವರು 2022ರಲ್ಲಿ ನಡೆದ ಇಂಟರ್ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100 ವಿಜೇತ ಸ್ಪರ್ಧಿಗಳಲ್ಲಿ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಗುರುವಿಲ್ಲದ ಕಲಾವಿದ:ಉಡುಪಿಯ ಲಕ್ಷ್ಮೀ ನಗರದ ಪೂರ್ಣಿಮಾ ಮತ್ತು ರಾಘವೇಂದ್ರ ದಂಪತಿ ಪುತ್ರ ವಿಘ್ನೇಶ್. ಇವರು ಇಲ್ಲಿನ ಪೂರ್ಣಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಇವರು ಗುರುವಿಲ್ಲದ ಕಲಾವಿದ. ಕೇವಲ ಒಂದು ವರ್ಷ ಚಿತ್ರಕಲೆ ತರಬೇತಿ ಪಡೆದದ್ದು ಬಿಟ್ಟರೆ ಸ್ವತಃ ಯೂಟ್ಯೂಬ್ ನೋಡಿಯೇ ಕಲಿತವರು.
ಅಕ್ರಿಲಿಕ್, ವಾಟರ್ ಕಲರ್, ಚಾರ್ಕೊಲ್, ಗ್ರಾಫೈಟ್ ಮತ್ತು ಆವೆ ಮಣ್ಣಿನ ಮಾಧ್ಯಮಗಳಲ್ಲಿ ಹಲವು ಚಿತ್ರಗಳನ್ನು ರಚಿಸಿದ್ದಾರೆ. ರೆಯಾನ್ಶ್ ರಾಹುಲ್ ಆರ್ಟ್ ಯೂನಿವರ್ಸಿಟಿ ಇತ್ತೀಚೆಗೆ ಆನ್ಲೈನ್ ಮೂಲಕ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಪೈಕಿ ವಿಘ್ನೇಶ್ ಟಾಪ್ 100 ಕಲಾವಿದರ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.