ಕರ್ನಾಟಕ

karnataka

By

Published : Jan 7, 2023, 9:24 AM IST

Updated : Jan 7, 2023, 9:53 AM IST

ETV Bharat / state

ಪ್ರಪ್ರಥಮ ಬಾರಿಗೆ ಹೆಜ್ಜೇನು ದಾಳಿಗೆ ಎರಡು ಕುದುರೆಗಳು ಬಲಿ.. ಕೋಟ್ಯಾಂತರ ರೂಪಾಯಿ ನಷ್ಟ

ಹೆಜ್ಜೇನು ದಾಳಿಗೆ ಕುದುರೆಗಳು ಬಲಿ- ತುಮಕೂರಿನ ಕುಣಿಗಲ್ ಸ್ಟಡ್ ಫಾರ್ಮ್​ನಲ್ಲಿ ಘಟನೆ- ಕೋಟ್ಯಾಂತರ ರೂಪಾಯಿ ನಷ್ಟ

horses died in honey bees attack  horses died in honey bees attack in Tumkur  sanus per aquam horse died  Air support horse died  ಹೆಜ್ಜೇನು ದಾಳಿಗೆ ಎರಡು ಕುದುರೆಗಳು ಬಲಿ  ಮಾಲೀಕನಿಗೆ ಕೋಟ್ಯಾಂತರ ರೂಪಾಯಿ ನಷ್ಟ  ತುಮಕೂರಿನ ಕುಣಿಗಲ್ ಸ್ಟಡ್ ಫಾರ್ಮ್  ಕುದುರೆ ದಾರುಣವಾಗಿ ಮೃತ  ಐರ್ಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್  ಏರ್ ಸಫೋರ್ಟ್ ಕುದುರೆ ಹೆಜ್ಜೇನು ದಾಳಿ
ಪ್ರಪ್ರಥಮ ಬಾರಿಗೆ ಹೆಜ್ಜೇನು ದಾಳಿಗೆ ಎರಡು ಕುದುರೆಗಳು ಬಲಿ

ತುಮಕೂರು: ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐರ್ಲ್ಯಾಂಡ್ ಹಾಗೂ ಅಮೆರಿಕದ ಎರಡು ಗಂಡು ಕುದುರೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ಸ್ಟಡ್ ಫಾರಂನಲ್ಲಿ ನಡೆದಿದೆ. ಐರ್ಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಹಾಗೂ ಅಮೆರಿಕದ 15 ವರ್ಷದ ಏರ್ ಸಪೋರ್ಟ್ ಕುದುರೆ ಹೆಜ್ಜೇನು ದಾಳಿಗೆ ಸಾವನ್ನಪ್ಪಿವೆ.

ಎಂದಿನಂತೆ ಬುಧವಾರ ಏರ್ ಸಪೋರ್ಟ್, ಸನಸ್ ಪರ್ ಅಕ್ಚಮ್ ಈ ಎರಡು ಕುದುರೆಗಳನ್ನು ಸ್ಟಾಲಿನ್ ಪ್ಯಾಡಕ್‌ಗೆ ಮೇಯಲು ಬಿಡಲಾಗಿತ್ತು. ಆದರೆ ಮಧ್ಯಾಹ್ನ ಸುಮಾರು ಒಂದು ಗಂಟೆ ಸಮಯದಲ್ಲಿ ದಿಢೀರನೇ ಸಾವಿರಾರು ಹೆಜ್ಜೇನುಗಳು ಎರಡು ಕುದುರೆಗಳ ಮೇಲೆ ಏಕಾ ಏಕಿ ದಾಳಿ ಮಾಡಿದವು. ಜೇನು ಹುಳುಗಳ ದಾಳಿಗೆ ಎರಡು ಕುದುರೆಗಳು ಕಿರುಚುತ್ತ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದವು. ಇದನ್ನು ಗಮನಿಸಿದ ಇಲ್ಲಿನ ಕಾರ್ಮಿಕರು ವೈದ್ಯರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ವೈದ್ಯರ ತಂಡ ದಾಳಿಯಲ್ಲಿ ಗಾಯಗೊಂಡ ಕುದುರೆಗಳಿಗೆ ಸ್ಟಡ್ ಫಾರಂನಲ್ಲಿ ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 10 ಗಂಟೆ ವೇಳೆ ಸನಸ್ ಪರ್ ಅಕ್ಚಮ್ ಕೊನೆಯುಸಿರೆಳೆದರೆ. ಏರ್ ಸಪೋರ್ಟ್ ಕುದುರೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದೆ.

ಅಮೆರಿಕದ ಏರ್ ಸಪೋರ್ಟ್ ಕುದುರೆಯು ವರ್ಜಿನಿಯಾ ಡರ್ಬಿಯಲ್ಲಿ ಭಾಗಿಯಾಗಿದೆ. ಪಿಲ್ಗ್ರಮಾ ಸ್ಟೇಕ್ಸ್, ಟ್ರಾನ್ಸ್ಲೇನಿಯಾ ಸ್ಟೇಕ್ಸ್, ಎರಡನೇ ಯುನೈಟೆಡ್ ನೇಷನ್ಸ್ ಸ್ಟೇಕ್ಸ್, ಮೂರನೇ ಅಮೆರಿಕನ್ ಟರ್ಫ್ ಸ್ಟೇಕ್ಸ್, ಎರಡನೇ ಹಿಲ್ ಪ್ರಿನ್ಸ್ ಸ್ಟೇಕ್ಸ್ ರೇಸಿನಲ್ಲಿ ಜಯಗಳಿಸಿ ಕೋಟ್ಯಾಂತ ರೂಪಾಯಿ ಸಂಪಾದಿಸಿದೆ ಎಂದು ತಿಳಿದುಬಂದಿದೆ. ಐರಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಐದು ಸ್ಟಾರ್ ಕುದುರೆ ರೇಸ್‌ನಲ್ಲಿ ಮೂರು ಬಾರಿ ಜಯಭೇರಿ ಸಾಧಿಸಿ ಲಾಭ ತಂದು ಕೊಟ್ಟಿದೆ. ಕುದುರೆ ರೇಸಿನಲ್ಲಿ ಉತ್ತಮ ಸಾಧನೆ ಮಾಡಿರುವ ಈ ಎರಡು ಕುದುರೆಗಳನ್ನು ಅಮೆರಿಕ ಹಾಗೂ ಐರ್ಲ್ಯಾಂಡ್ ದೇಶಗಳಿಂದ ಕಳೆದ ಆರು ವರ್ಷದ ಹಿಂದೆ ಯುಆರ್‌ಬಿಬಿ ತಲಾ ಒಂದು ಕೋಟಿ ರೂ.ಗಳಂತೆ ಎರಡು ಕೋಟಿ ರೂಗಳಿಗೆ ಖರೀದಿಸಿ ತರಲಾಗಿತ್ತು. ಇನ್ನು ಈ ಬ್ರೀಡ್​ ತಳಿಯ ಕುದುರೆಗಳಿಂದ ಕುದುರೆ ಮರಿ ತಳಿಗಳನ್ನು ಉತ್ಪಾದಿಸಲಾಗುತ್ತಿತ್ತು ಎಂದು ಫಾರ್ಮ ನ ವ್ಯವಸ್ಥಾಪಕ ಲೋಕೇಶ್ ತಿಳಿಸಿದ್ದಾರೆ.

ಪ್ರಪ್ರಥಮ ಬಾರಿಗೆ ಹೆಜ್ಜೇನು ದಾಳಿಗೆ ಎರಡು ಕುದುರೆಗಳು ಬಲಿ

ಈ ಕುದುರೆಗಳು ನೂರಾರು ಕುದುರೆ ಮರಿಗಳ ಜನನಕ್ಕೆ ಕಾರಣವಾಗಿವೆ. ಈ ಕುದುರೆ ಮರಿಗಳನ್ನು ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಂದ ಬಂದು ಲಕ್ಷಾಂತರ ರೂಪಾಯಿಗೆ ಖರೀದಿ ಮಾಡಿ ರೇಸ್‌ಗೆ ಬಳಸಿಕೊಳ್ಳುತ್ತಿದ್ದರು. ಸರ್ಕಾರವು 30 ವರ್ಷಗಳ ಅವಧಿಗೆ ಯುಆರ್‌ಬಿಬಿಗೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಅವಧಿ ಕಳೆದ ಸೆಪ್ಟಂಬರ್‌ಗೆ ಮುಗಿದಿತ್ತಾದರೂ ಮತ್ತೆ ಯುಆರ್‌ಬಿಬಿ ಸ್ವಲ್ಪ ದಿವಸ ಕಾಲಾವಕಾಶ ತೆಗೆದುಕೊಂಡಿತ್ತು. ಇದೇ ವೇಳೆ ಈ ಎರಡು ಕುದುರೆಗಳು ಹೆಜ್ಜೇನು ದಾಳಿಗೆ ತುತ್ತಾಗಿದ್ದು, ಸ್ಟಡ್ ಫಾರಂಗೆ ಏಕ ಕಾಲದಲ್ಲಿ ಎರಡು ಅಘಾತಗಳು ಉಂಟಾಗಿದೆ.

ಟಿಪ್ಪು ಸುಲ್ತಾನ್ ಸುಮಾರು 260 ವರ್ಷಗಳ ಹಿಂದೆ ತನ್ನ ಕುದುರೆ ಸೈನ್ಯಕ್ಕೆ ಹುಲಿಯೂರುದುರ್ಗ, ಸಾವನದುರ್ಗ ಮತ್ತು ದೇವರಾಯನದುರ್ಗ ಸೇರಿದಂತೆ ಈ ಮೂರು ಪ್ರದೇಶಗಳಿಗೆ ಕುಣಿಗಲ್ ಅನ್ನು ಪ್ರಮುಖ ಕೇಂದ್ರವಾಗಿಸಿಕೊಂಡು ಸೈನಿಕರಿಗೆ ಯುದ್ದದ ತರಬೇತಿ, ಕುದುರೆ ಸಾಕಾಣಿಕೆ ಮತ್ತು ವಂಶಾಭಿವೃದ್ದಿಗಾಗಿ ಸ್ಟಡ್ ಫಾರಂ(ಕುದುರೆ ಗಾವಲ್) ಅನ್ನು ಇಲ್ಲಿ ಸ್ಥಾಪಿಸಿದ್ದರು ಎನ್ನಲಾಗಿದೆ. ಅಲ್ಲಿಂದ ಇಲ್ಲಿವರೆಗೂ ಯಾವುದೇ ತರಹ ಇಂತಹ ಘಟನೆಯಿಂದ ಕುದುರೆಗಳು ಮೃಪಟ್ಟಿರಲಿಲ್ಲ. ಇದೇ ಪ್ರಥಮ ಬಾರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಓದಿ:ತೆರೆಮರೆಗೆ ಸರಿಯಲಿದೆ ಐತಿಹಾಸಿಕ ಕುಣಿಗಲ್ ಕುದುರೆ ಫಾರಂ?

Last Updated : Jan 7, 2023, 9:53 AM IST

ABOUT THE AUTHOR

...view details