ಕರ್ನಾಟಕ

karnataka

By

Published : Sep 27, 2021, 5:58 AM IST

ETV Bharat / state

ಪ್ರವಾಸೋದ್ಯಮ ದಿನ ವಿಶೇಷ: ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಮಾಹಿತಿ..

ತುಮಕೂರು ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ನಿಮಗಾಗಿ..

Tumkur district tourist places information
ಪ್ರವಾಸೋದ್ಯಮ ದಿನಾಚರಣೆ ವಿಶೇಷ

ತುಮಕೂರು:ಕಲ್ಪತರು ನಾಡು ಪ್ರಸಿದ್ಧಿಯ ತುಮಕೂರು ಜಿಲ್ಲೆ ಕೇವಲ ತೆಂಗು ಬೆಳೆಗೆ ಮಾತ್ರ ಸೀಮಿತವಾಗಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದೆ. ವೀಕೆಂಡ್ ಬಂತೆಂದರೆ ಅಪಾರ ಸಂಖ್ಯೆಯ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುತ್ತಾರೆ.

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಉಪಯುಕ್ತ ಮಾಹಿತಿ

ಸಿದ್ದಗಂಗಾ ಮಠ:

ಧಾರ್ಮಿಕ ಕ್ಷೇತ್ರ ಸಿದ್ದಗಂಗಾ ಮಠ ಜಿಲ್ಲೆಯಲ್ಲಿಯೇ ಹೆಚ್ಚಿನ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುವ ಕ್ಷೇತ್ರ. ತ್ರಿವಿಧ ದಾಸೋಹದ ಸಿದ್ದಗಂಗಾ ಮಠವು ಸುಮಾರು 88 ವರ್ಷ ಸುದೀರ್ಘ ಕಾಲ ಸಮಾಜ ಸೇವೆಗೈದ ಮಹಾನ್ ಸಂತ ಶಿವಕುಮಾರಸ್ವಾಮೀಜಿಯವರ ಹೆಜ್ಜೆ ಗುರುತುಗಳಿಂದ ಕೂಡಿದೆ. ಮಠಕ್ಕೆ ಹೊಂದಿಕೊಂಡಂತೆ ಬೃಹತ್ ಬೆಟ್ಟವಿದ್ದು, 58 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಮತ್ತು ಶ್ರೀಸಿದ್ದಗಂಗಮ್ಮ ಗುಹ ದೇವಾಲಯವಿದೆ.

ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ

ಸಿದ್ದರಬೆಟ್ಟ:

ಶತಮಾನಗಳಿಂದಲೂ ಸಿದ್ದರಬೆಟ್ಟ ಹಲವು ಔಷಧೀಯ ಗುಣಗಳ ಸಸ್ಯಗಳನ್ನು ತನ್ನ ಗರ್ಭದಲ್ಲಿ ಕಾಪಾಡಿಕೊಂಡು ಬಂದಿದೆ. ಇಲ್ಲಿ 900ಕ್ಕೂ ಅಧಿಕ ಔಷಧೀಯ ಸಸ್ಯಗಳಿದ್ದು, ಸುಮಾರು 6,600 ಅಡಿ ಎತ್ತರದವರೆಗೂ ಚಾಚಿಕೊಂಡಿದೆ. ಇದು ಸಂಜೀವಿನಿ ಬೆಟ್ಟ ಮತ್ತು ರಸ ಸಿದ್ದರಬೆಟ್ಟ ಎಂಬ ನಾಮಾಂಕಿತದಿಂದ ಪ್ರಚಲಿತಗೊಂಡಿದೆ.

ಗುಡ್ಡ ಬೆಟ್ಟಗಳಿಂದ ಕಂಗೊಳಿಸುವ ತುಮಕೂರು ಜಿಲ್ಲೆ

ಜೈನ ಯಾತ್ರಾ ಸ್ಥಳ ಮಂದರಗಿರಿ:

ಈ ಯಾತ್ರಾಸ್ಥಳ ತುಮಕೂರು ನಗರದಿಂದ ಬೆಂಗಳೂರು ಕಡೆಗೆ 10 ಕಿಮೀ. ಅಂತರದಲ್ಲಿದೆ. ಜೈನ ಧರ್ಮದ ಪವಿತ್ರ ಯಾತ್ರಾ ಸ್ಥಳವಿದು. ಜೈನ ದಿಗಂಬರ ಮುನಿಗಳು ಬಳಸಲ್ಪಡುವ ಪಿಂಚಿ ಆಕಾರದ ಗುರು ಮಂದಿರ ಇಲ್ಲಿ ಬಹು ಆಕರ್ಷಣೆಯ ಕೇಂದ್ರ ಬಿಂದು. ಇಲ್ಲಿ 81 ಅಡಿ ಎತ್ತರದ ಗುರು ಮಂದಿರವಿದೆ. ಜೈನ ದಿಗಂಬರರ ಮೊದಲ ಆಚಾರ್ಯ ಶ್ರೀಶಾಂತಿಸಾಗರ ಮುನಿಗಳ ಜೀವನ ಚರಿತ್ರೆಯನ್ನು ಚಿತ್ರಗಳ ಮೂಲಕ ಮಂದಿರದಲ್ಲಿ ವಿವರಿಸಲಾಗಿದೆ. 21 ಅಡಿ ಎತ್ತರದ ಚಂದ್ರನಾಥ ತೀರ್ಥಂಕರರ ಬೃಹತ್ ಮೂರ್ತಿಯನ್ನು ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ನಿತ್ಯ ಪಾದ ಪೂಜೆ ನಡೆಯುತ್ತದೆ.

ದೇವರಾಯನ ದುರ್ಗ :

ನಗರದಿಂದ ಈಶಾನ್ಯಕ್ಕೆ 15 ಕಿ.ಮೀ. ದೂರದಲ್ಲಿದೆ ದೇವರಾಯನದುರ್ಗ. ಇದನ್ನು ಕರಿಗಿರಿ(ಕರಿಗಿರಿಕ್ಷೇತ್ರ) ,ಆನೆಬಿದ್ದಸರಿ ಮತ್ತು ಜಡಕನದುರ್ಗ ಎಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಭೌಗೋಳಿಕ ಲಕ್ಷಣಗಳಿಗೆ ಬೆಸೆದುಕೊಂಡಿರುವ ಮಾನವನ ಇತಿಹಾಸವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಲು ಬೆಟ್ಟಗಳು ಪ್ರಮುಖ ಪಾತ್ರವಹಿಸಿರುವುದನ್ನು ಕಾಣಬಹುದು. ದೇವರಾಯನದುರ್ಗದಲ್ಲಿ ನರಸಿಂಹಸ್ವಾಮಿಯನ್ನು ಆರಾಧಿಸಲಾಗುತ್ತಿದೆ. ಇಲ್ಲಿನ ದೇವಾಲಯಗಳ ಪೈಕಿ ಊರಿನ ಒಳಗಿರುವ ಭೋಗಲಕ್ಷ್ಮಿ ನರಸಿಂಹಸ್ವಾಮಿ ಮತ್ತು ಬೆಟ್ಟದ ಮೇಲ್ಭಾಗದಲ್ಲಿರುವ ಯೋಗಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಗಳು ಪ್ರಸಿದ್ಧಿ ಪಡೆದಿವೆ. ಇದೊಂದು ವೈಷ್ಣವ ಧಾರ್ಮಿಕ ಕ್ಷೇತ್ರವಾಗಿದ್ದು, ಸುಮಾರು 264 ಮೀ ಎತ್ತರವಿದೆ. ಅತ್ಯಂತ ಎತ್ತರದ ಬೆಟ್ಟವಾಗಿದೆ. ಇಲ್ಲಿ ನೈಸರ್ಗಿಕ ನೀರಿನ ಚಿಲುಮೆಗಳನ್ನು ಬೆಟ್ಟದ ಹಲವು ಭಾಗಗಳಲ್ಲಿ ಕಾಣಬಹುದು. ಇವುಗಳನ್ನು ತೀರ್ಥಗಳೆಂದು ಹೆಸರಿಸಲಾಗಿದೆ.

ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ:

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ವರಮಹಾಲಕ್ಷ್ಮಿ ದೇಗುಲದಲ್ಲಿ ನಿತ್ಯ ವಿಶೇಷ ಪೂಜೆ ನಡೆಯುತ್ತಿದೆ. ಭರತ ಅರಸು ವಂಶಸ್ಥರಾದ ಅಬ್ಬಯ್ಯನ ಕುಟುಂಬ ಹಿರೇಗುಂಡಗಲ್​​​ನಿಂದ ಗೊರವನಹಳ್ಳಿ ಬಳಿಯ ನರಸಯ್ಯನಪಾಳ್ಯಕ್ಕೆ ಬಂದು ನೆಲೆಸಿದ ನಂತರ ಅಬ್ಬಯ್ಯ ಅರಸನಿಗೆ ಕೆರೆಯ ನೀರಿನಲ್ಲಿ ದೊರೆತ ಶಂಖ, ಚಕ್ರ, ಪದ್ಮ, ನಾಮಗಳಿಂದ ಶೋಭಿಸುವ ಲಕ್ಷ್ಮಿ ಇರುವ ಶಿಲೆಯನ್ನು ಅರಸ ಮನೆಗೆ ತಂದು ನಿತ್ಯ ಪೂಜೆ ಮಾಡಿದ ಸ್ಥಳವೇ ಇಂದು ಗೊರವನಹಳ್ಳಿ ಪುಣ್ಯ ಕ್ಷೇತ್ರವಾಗಿದೆ.

ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯ:

ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯ

ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಾಗಿನಿ ತಟದಲ್ಲಿ ಪುರಾಣ ಪ್ರಸಿದ್ಧ ಎಡೆಯೂರುಇದೆ. ಕುಣಿಗಲ್​​​ನಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ. ವಚನಕಾರರು, ತತ್ವ ಜ್ಞಾನಿಗಳು, ಶಿವಯೋಗಿಗಳು, ಮಠಾಧ್ಯಕ್ಷರೂ ಆಗಿದ್ದ ಸಿದ್ದಲಿಂಗೇಶ್ವರ ಗದ್ದಿಗೆಯನ್ನು ಇಲ್ಲಿ ಕಾಣಬಹುದಾಗಿದೆ. ಇದು ದ್ರಾವಿಡ ಶೈಲಿಯಲ್ಲಿದ್ದು, ಇತ್ತೀಚೆಗೆ ನವೀಕರಿಸಲಾಗಿದೆ.

ಕೃಷ್ಣಮೃಗ ಸಂರಕ್ಷಿತ ವನ್ಯಧಾಮ:

ಕೃಷ್ಣಮೃಗ ಸಂರಕ್ಷಣಾ ವನ್ಯಧಾಮ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮೈದನಹಳ್ಳಿಯಲ್ಲಿದೆ. ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ವನ್ಯಧಾಮದ ವ್ಯಾಪ್ತಿಯಲ್ಲಿ 400ರಿಂದ 450ಕ್ಕೂ ಅಧಿಕ ಕೃಷ್ಣಮೃಗಗಳಿವೆ. ಹುಲ್ಲುಗಾವಲಿನಿಂದ ಕೂಡಿರುವ ಈ ಪ್ರದೇಶ ಸುಮಾರು 323 ಹೆಕ್ಟೇರ್ ಪ್ರದೇಶದಲ್ಲಿದೆ. ರಾಜ್ಯದಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿರುವ ಕೃಷ್ಣಮೃಗ ಅಭಯಾರಣ್ಯ ಹೊರತುಪಡಿಸಿದರೆ ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ವನ್ಯಧಾಮ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: 'ಸುಳ್ಳಿನ ಶೂರ ಸಿದ್ದರಾಮಯ್ಯನವರೇ, ಅಸತ್ಯದ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ?'

ABOUT THE AUTHOR

...view details