ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆ ಈಡೇರಿಸುವಂತೆ ವಿಶೇಷ ಶಿಕ್ಷಕರ ಪ್ರತಿಭಟನೆ

ಈ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಕೂಡ ನಿಗದಿತ ಸಮಯದಲ್ಲಿ ದೊರೆಯದೇ ಇರುವುದರಿಂದ ಜೀವನ ಸಾಗಿಸಲು ಕಷ್ಟವಾಗಿದೆ. ಹೀಗಾಗಿ ನಿಗದಿತ ವೇಳೆಯಲ್ಲಿ ಗೌರವಧನ ನೀಡಬೇಕು..

By

Published : Dec 2, 2020, 4:09 PM IST

teachers protest
ಶಿಕ್ಷಕರ ಪ್ರತಿಭಟನೆ

ತುಮಕೂರು :ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆ ಅಡಿ ನೀಡಲಾಗುತ್ತಿರುವ ಅನುದಾನ ದ್ವಿಗುಣಗೊಳಿಸಬೇಕು. ಅನುದಾನಿತ ಸಾಮಾನ್ಯ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರರಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚಿಸಬೇಕು.

ಸಾಮಾನ್ಯ ಶಿಕ್ಷಕರಿಗೆ ಸಿಗುವಂತಹ ಗೌರವ, ಮಾನ್ಯತೆ ಹಾಗೂ ಸೌಲಭ್ಯಗಳು ನಮಗೂ ದೊರೆಯಬೇಕು ಎಂದು ತುಮಕೂರು ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಕಾರ್ಯದರ್ಶಿ ಪ್ರಮೀಳಾ ಕುಮಾರಿ ಆಗ್ರಹಿಸಿದರು.

ವಿಶೇಷ ಶಿಕ್ಷಕರ ಪ್ರತಿಭಟನೆ

ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘ ಮತ್ತು ವಿಕಲಚೇತನರ ಸ್ವಯಂ ಸಂಸ್ಥೆಗಳ ಒಕ್ಕೂಟದಿಂದ ವಿಶೇಷ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದರು.

ವಿಶೇಷ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರರಿಗೆ ಶಿಕ್ಷಣ ಇಲಾಖೆಯಿಂದ ಸಿಗುವಂತಹ ಗೌರವಧನ 13,500 ರೂ. ದ್ವಿಗುಣಗೊಳಿಸಬೇಕು, ಶಿಶು ಕೇಂದ್ರೀಕೃತ ಸಹಾಯಧನ ಯೋಜನೆ ಅಡಿ ಸುಮಾರು 141 ವಿಶೇಷ ಶಾಲೆಗಳು ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುದಾನ ಪಡೆಯುತ್ತಿವೆ.

ಈ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಕೂಡ ನಿಗದಿತ ಸಮಯದಲ್ಲಿ ದೊರೆಯದೇ ಇರುವುದರಿಂದ ಜೀವನ ಸಾಗಿಸಲು ಕಷ್ಟವಾಗಿದೆ. ಹೀಗಾಗಿ ನಿಗದಿತ ವೇಳೆಯಲ್ಲಿ ಗೌರವಧನ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ನಮ್ಮ ಪ್ರತಿಭಟನೆಗೆ ಸರ್ಕಾರ ಸೂಕ್ತ ರೀತಿ ಸ್ಪಂದಿಸದಿದ್ದರೆ ರಾಜ್ಯದ ಎಲ್ಲ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿ, ವಿಧಾನಸೌಧ ರಸ್ತೆಯ ಸರ್‌ ಎಂ ವಿಶ್ವೇಶ್ವರಯ್ಯ ಕಟ್ಟಡದ ಪೋಡಿಯಂ ಬ್ಲಾಕಿನಲ್ಲಿರುವ ನಿರ್ದೇಶಕರ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಅನುದಾನಿತ ಸಾಮಾನ್ಯ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರರಿಗೆ ನೀಡುತ್ತಿರುವ ಗೌರವಧನವನ್ನು ದ್ವಿಗುಣಗೊಳಿಸಬೇಕು, ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆ ಅಡಿ ನೀಡಲಾಗುತ್ತಿರುವ ಅನುದಾನವನ್ನು ಸಹ ದ್ವಿಗುಣಗೊಳಿಸುವ ಜೊತೆಗೆ ಸಾಮಾನ್ಯ ಶಿಕ್ಷಕರಿಗೆ ಸಿಗುವಂತಹ ಗೌರವ, ಮಾನ್ಯತೆ ಹಾಗೂ ಸೌಲಭ್ಯಗಳು ನಮಗೂ ದೊರೆಯಬೇಕು ಎಂದು ಪ್ರಮಿಳಾ ಕುಮಾರಿ ಆಗ್ರಹಿಸಿದರು.

ABOUT THE AUTHOR

...view details