ಕರ್ನಾಟಕ

karnataka

Tumkuru crime: ಅಣ್ಣನ ರಕ್ಷಣೆಗೆ ಹೋದ ತಮ್ಮನೂ ಬಾವಿಗೆ ಬಿದ್ದು ಸಾವು.. ಯುವತಿಯ ಕತ್ತು ಕೊಯ್ದು ಯುವಕ ಪರಾರಿ

By

Published : Jun 10, 2023, 5:00 PM IST

Updated : Jun 10, 2023, 7:52 PM IST

ಮೇಕೆಗೆ ಮೇವು ತರಲು ಹೋಗಿ ಸಹೋದರರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮತ್ತು ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿ ಯುವಕನೋರ್ವ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

accidental-death-of-brothers-in-tumkur
ಪ್ರತ್ಯೇಕ ಘಟನೆ : ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಹೋದರರ ಸಾವು.. ಯುವತಿಯ ಕತ್ತು ಕೊಯ್ದು ಪರಾರಿಯಾದ ಯುವಕ

ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಅಣ್ಣನನ್ನು ಕಾಪಾಡಲು ಹೋದ ಸಹೋದರನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶಿರಾ ತಾಲೂಕಿನ ದ್ವಾರನ ಕುಂಟೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮ ನಿವಾಸಿಗಳಾದ ಸತೀಶ್ (32) ಹಾಗೂ ಪ್ರಸನ್ನ(29) ಎಂದು ಗುರುತಿಸಲಾಗಿದೆ.

ಮೇಕೆಗೆ ಸೊಪ್ಪು ತರಲು ಹೋದ ಸತೀಶ್ ಮರದಿಂದ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ. ಬಾವಿಗೆ ಬಿದ್ದ ಅಣ್ಣನನ್ನು ಕಾಪಾಡಲು ಹೋದ ಸಹೋದರನೂ ಕೂಡ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಪರಾರಿಯಾದ ಯುವಕ: ಮನೆಗೆ ನುಗ್ಗಿದ ಯುವಕನೋರ್ವ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ನಗರದ ವಿದ್ಯಾನಗರ ಎಂಬಲ್ಲಿ ನಡೆದಿದೆ. ವೀಣಾ (23) ಕೊಲೆಯಾದ ಯುವತಿ. ವೀಣಾಳ ಪ್ರಿಯಕರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ನಿವಾಸಿಯಾಗಿರುವ ವೀಣಾ ತುಮಕೂರಿನ ವಿದ್ಯಾನಗರದಲ್ಲಿ ಸ್ನೇಹಿತೆಯರೊಂದಿಗೆ ವಾಸ ಮಾಡುತ್ತಿದ್ದಳು. ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವಂತಹ ಇನ್ ಕ್ಯಾಪ್ ಕಂಪನಿಯಲ್ಲಿ ವೀಣಾ ಕೆಲಸ ಮಾಡುತ್ತಿದ್ದಳು. ಇಂದು ಕಚೇರಿಗೆ ಹೋಗುವ ಮುನ್ನ ವೀಣಾ ವಾಸವಾಗಿದ್ದ ಮನೆಗೆ ನುಗ್ಗಿ ಆರೋಪಿ ಕತ್ತು ಕೊಯ್ದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು: ತೋಟದ ಬಾವಿಯಲ್ಲಿ ಈಜಲು ಹೋಗಿ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ನಡೆದಿದೆ. ಈಜಲು ಬಾರದೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತನನ್ನು ಪ್ರವೀಣ್ ಗೊಂದಳಿ (17) ಎಂದು ಗುರುತಿಸಲಾಗಿದೆ.

ಮೃತ ಪ್ರವೀಣ್ ಗೊಂದಳಿ ಮೊರಟಗಿ ಗ್ರಾಮದ ಬಾಬುಗೌಡ ಜಗಶೆಟ್ಟಿ ಎಂಬುವರ ಬಾವಿಯಲ್ಲಿ ಈಜಲು ಇಳಿದಿದ್ದಾರೆ. ಆದರೆ ಈಜು ಬಾರದ ಹಿನ್ನೆಲೆ ಪ್ರವೀಣ್​​ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಜು ತಜ್ಞರು ಆಗಮಿಸಿ ಶವವನ್ನು ಹೊರಕ್ಕೆ ತೆಗೆಯಲಾಯಿತು. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಬಂಟ್ವಾಳ: ವಿದ್ಯುತ್ ಶಾಕ್​ಗೆ ವ್ಯಕ್ತಿ ಬಲಿ, ಚಾರ್ಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Last Updated : Jun 10, 2023, 7:52 PM IST

ABOUT THE AUTHOR

...view details