ತುಮಕೂರು: ರಾಷ್ಟ್ರೀಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸುತ್ತಿರುವುದು ಸಂವಿಧಾನಬಾಹಿರ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ವಿಶ್ಲೇಷಿಸಿದ್ದಾರೆ.
'ಈಟಿವಿ ಭಾರತ' ಗೆನೀಡಿರುವವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನವು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಟ್ಟಿರುವಂತಹುದು. ಪ್ರಧಾನಿ ಅಭ್ಯರ್ಥಿಯನ್ನು ಸಂಸದರು ಆಯ್ಕೆ ಮಾಡಬೇಕು. ಅದೇ ರೀತಿ ಮುಖ್ಯಮಂತ್ರಿಯನ್ನು ಶಾಸಕರು ಆಯ್ಕೆ ಮಾಡಬೇಕು. ಹೀಗಾಗಿ ಚುನಾವಣೆಗೂ ಮುನ್ನವೇ ಪ್ರಧಾನಿ ಅಭ್ಯರ್ಥಿ ಹೆಸರನ್ನು ಘೋಷಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಒಂದು ಪಕ್ಷವು ಚುನಾವಣೆಗೂ ಮುನ್ನವೇ ವ್ಯಕ್ತಿವೋರ್ವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ, ಇಂತವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳುವುದು ಪ್ರಜಾತಂತ್ರ ವ್ಯವಸ್ಥೆಗೆ ಕಟ್ಟಾ ವಿರೋಧಿಯಾಗಿದೆ. ಇದರಿಂದಾಗಿ ಭಾರತೀಯ ವ್ಯವಸ್ಥೆಯಲ್ಲಿ ಶಾಸಕರ ಮತ್ತು ಸಂಸದರ ಹಕ್ಕುಗಳನ್ನು ಕಿತ್ತುಕೊಂಡಂತಾಗುತ್ತದೆ ಎಂದು ಬರಗೂರು ವಿಶ್ಲೇಷಣೆ ಮಾಡಿದರು.
ಭಾರತವು ಉಳಿಗಮಾನ್ಯ ಪದ್ಧತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸ್ಥಿತ್ಯಂತರಗೊಂಡಿದೆ. ಆದರೂ ಕೂಡ ಉಳಿಗಮಾನ್ಯ ಪದ್ಧತಿಯ ಕೆಲವೊಂದು ಪಳೆಯುಳಿಕೆಗಳು ಉಳಿದುಕೊಂಡಿವೆ. ಒಂದು ಪಕ್ಷಕ್ಕೆ ನಾಯಕ ಇರುವುದು ತಪ್ಪಲ್ಲ. ಆದರೆ, ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದು ತಪ್ಪು. ಹೀಗಿದ್ದಾಗ ಸಂಸದರನ್ನು ನಾವ್ ಯಾಕೆ ಆಯ್ಕೆ ಮಾಡಬೇಕು ಎಂದು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು.
ಮತದಾರರು ಸಂಸದರನ್ನು ಆಯ್ಕೆ ಮಾಡುತ್ತಾರೆ. ಅದು ಅವರ ಹಕ್ಕು, ಅದೇ ರೀತಿ ಸಂಸದರಿಗೆ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವಂತಹ ಹಕ್ಕನ್ನು ನಾವು ನೀಡಿರುತ್ತೇವೆ. ಆದ್ರೆ ಚುನಾವಣೆ ಮುನ್ನವೇ ಪ್ರಧಾನಿ ಅಭ್ಯರ್ಥಿ ಇಂತವರೇ ಎಂದು ಘೋಷಿಸಿದರೆ ಒಂದು ರೀತಿ ನಾವಿನ್ನೂ ಉಳಿಗಮಾನ್ಯ ಪದ್ಧತಿಯಲ್ಲೇ ಇದ್ದೇವೆಯೇ ಎಂಬ ಭಾವನೆ ಮೂಡುತ್ತಿದೆ ಎಂದರು.