ತುಮಕೂರು:ನಗರದಲ್ಲಿ ಜಿಲ್ಲಾ ಪಂಚಾಯಿತ್, ಸ್ವೀಪ್ ಸಮಿತಿ ಹಾಗೂ ಚಿತ್ರ ಕಲಾವಿದರ ಸಂಘದ ನೇತೃತ್ವದಲ್ಲಿ ಚಿತ್ರ ಬಿಡಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಚಿತ್ರ ಬರೆದು ಮತದಾನ ಜಾಗೃತಿ ಮೂಡಿಸಿದ ಕಲಾವಿದರು
ಮತದಾನದಿಂದ ಯಾರು ದೂರ ಉಳಿಯಬಾರದು, ಮತದಾನ ಮಾಡದಿದ್ದರೆ ನಮ್ಮ ಹಕ್ಕನ್ನೇ ನಾವು ಕಳೆದುಕೊಂಡಂತೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತ್ತು ಸರ್ಕಾರಗಳು ಸಾಕಷ್ಟು ಜಾಗೃತಿ ಮೂಡಿಸುವ ಮೂಲಕ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ.
ಮಹಾನಗರ ಪಾಲಿಕೆ ಆವರಣದಲ್ಲಿರುವ ಉದ್ಯಾನವನದಲ್ಲಿ ಕಲಾವಿದರು ಚಿತ್ರ ಬಿಡಿಸುವ ಮೂಲಕ ಮತದಾನ ಮಾಡಿ, ಸಂವಿಧಾನ ಕಲ್ಪಿಸಿರುವ ಹಕ್ಕನ್ನು ಉಳಿಸಿ ಎಂದು ಸಾರಿದರು. ಚಿತ್ರಕಲಾ ಶಿಕ್ಷಕರು, ಕಲಾವಿದರು ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ಚಿತ್ರ ಬರೆಯುವ ಮೂಲಕ ಜಾಗೃತಿ ಮೂಡಿಸಿದರು.
ಈ ವೇಳೆ ಲಲಿತಕಲಾ ಅಕಾಡೆಮಿಯ ಮನು ಚಕ್ರವರ್ತಿ ಮಾತನಾಡಿ, ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತದಾನದಿಂದ ಯಾರು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ, ಚಿತ್ರಕಲೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಚುನಾವಣಾ ಆಯೋಗ ಚಿತ್ರ ಕಲಾವಿದರಿಗೆ ಇಂತಹ ಅವಕಾಶ ಕಲ್ಪಿಸುವ ಮೂಲಕ ಉತ್ತಮ ಕಾರ್ಯಮಾಡಿದೆ. ಕಲಾವಿದರು ಮತದಾನದ ಬಗ್ಗೆ ಚಿತ್ರಗಳು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿ ರಚಿತವಾದ ಉತ್ತಮ ಚಿತ್ರಗಳಿಗೆ ಬಹುಮಾನ ನೀಡಲಾಗುವುದು ಎಂದರು.