ಶಿವಮೊಗ್ಗ: ಪುರಾಣ ಪ್ರಸಿದ್ಧವಾದ ಸಾಗರ ತಾಲೂಕಿನ ವರದಮೂಲದ ಅಗಸ್ತ್ಯ ತೀರ್ಥವನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಅದರ ಹೂಳೆತ್ತುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ವರದಾ ನದಿಯು ಸಾಗರ ತಾಲೂಕಿನಲ್ಲಿ ಹುಟ್ಟುವ ಏಕೈಕ ನದಿಯಾಗಿದೆ. ಇದು ಪುರಾಣ ಪ್ರಸಿದ್ಧ ಕ್ಷೇತ್ರ ಸಹ ಆಗಿದೆ. ಪುರಾಣದ ಪ್ರಕಾರ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ಚಿವುಟಿ ತೆಗೆದ ಪರಿಣಾಮವಾಗಿ ಈಶ್ವರನಿಗೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ. ಈ ದೋಷ ನಿವಾರಣೆಗೆ ವಿಷ್ಣು ತನ್ನ ಪಂಚಜನ್ಯ ಎಂಬ ಶಂಖದಿಂದ ಗಂಗಾ ಜಲವನ್ನು ಪ್ರೋಕ್ಷಣೆ ಮಾಡಿದ ನಂತರ ಈಶ್ವರನಿಗೆ ಬ್ರಹ್ಮಹತ್ಯ ದೋಷ ಹೋಗುತ್ತದೆ. ಪಾಂಚಜನ್ಯದಿಂದ ನಲಕ್ಕೆ ಬಿದ್ದ ಗಂಗಾಜಲಕ್ಕೆ ದೇವತೆಗಳು ವರ ನೀಡುತ್ತಾರೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಹೋಗುತ್ತದೆ ಎಂಬ ನಂಬಿಕೆ ಇದೆ. ನಂತರ ಅಗಸ್ತ್ಯರು ಸಹ ಇಲ್ಲಿ ಬಂದು ತಪಸ್ಸು ಮಾಡಿದ್ದರು ಎಂದು ಪುರಾಣ ತಿಳಿಸುತ್ತದೆ.
ಇಂತಹ ಪವಿತ್ರ ಕ್ಷೇತ್ರ ಇಂದು ಮಲೀನವಾಗಿ ಮೂಲವೇ ಕಾಣೆಯಾಗುವ ಸ್ಥಿತಿ ತಲುಪಿದೆ. ಇದರಿಂದ ಮೂಲದಲ್ಲಿನ ಹೂಳನ್ನು ತೆಗೆದು, ನೀರು ಸರಿಯಾಗಿ ಹರಿಯುವಂತೆ ಮಾಡಲು ಈಗ ಸ್ವಾನ್ ಅಂಡ್ ಮ್ಯಾನ್ ಸಂಸ್ಥೆಯು ಪವಿತ್ರ ತೀರ್ಥವನ್ನು ಪುನಶ್ಚೇತನಗೊಳಿಸಲು ಮುಂದಾಗಿದೆ. ವರದಾ ಮೂಲ ಪುನಶ್ವೇತನ ಕಾರ್ಯಕ್ರಮಕ್ಕೆ ಸಾಗರ ಉಪವಿಭಾಗಧಿಕಾರಿ ಡಾ. ನಾಗರಾಜ ಅವರು ಚಾಲನೆ ನೀಡಿದರು. ಸ್ಯಾನ್ ಅಂಡ್ ಮ್ಯಾನ್ ಸಂಸ್ಥೆಯ ಟಿ.ವಿ. ಪಾಂಡುರಂಗ ಅವರು ಮೂಲದ ಪುನಶ್ಚೇತನಕ್ಕೆ 26 ಲಕ್ಷ ರೂ. ಯೋಜನೆ ಹಾಕಿದ್ದಾರೆ. ಇದಕ್ಕೆ ಕರ್ಣಾಟಕ ಬ್ಯಾಂಕ್ 6 ಲಕ್ಷ ರೂ. ನೀಡಿದೆ. 3 ಲಕ್ಷ ರೂ.ಗಳನ್ನು ವರದಾ ಮೂಲದ ಗ್ರಾಮಸ್ಥರು ನೀಡುತ್ತಿದ್ದಾರೆ. ಉಳಿದ 16 ಲಕ್ಷ ರೂಗಳನ್ನು ದಾನಿಗಳಿಂದ ನೀರಿಕ್ಷಿಸಲಾಗಿದೆ.