ಶಿವಮೊಗ್ಗ:ಜಿಲ್ಲೆಯಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಬಳಸಬೇಕು. ಸದರಿ ಅನುದಾನ ದುರ್ಬಳಕೆ ಆದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ನಿಯಮಾನುಸಾರ ದಂಡನೆಗೆ ಗುರಿಪಡಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉದ್ದೇಶಿತ ಯೋಜನೆಗಳಿಗೆ ಅನುದಾನ ಬಳಸಲು ಶಿವಮೊಗ್ಗ ಡಿಸಿ ಸೂಚನೆ
ಶಿವಮೊಗ್ಗದಲ್ಲಿ ಸದರಿ ಅನುದಾನ ದುರ್ಬಳಕೆ ಆದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ನಿಯಮಾನುಸಾರ ದಂಡನೆಗೆ ಗುರಿಪಡಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹರಮಘಟ್ಟ, ಬಸನವಗಂಗೂರು ಮತ್ತು ಚಿನ್ಮನೆ ಗ್ರಾಮಗಳಲ್ಲಿ ಈಗಾಗಲೇ ಮಂಜೂರಾಗಿರುವ ಸ್ಮಶಾನ ಭೂಮಿಯನ್ನು ತಹಶೀಲ್ದಾರರು ವಶಕ್ಕೆ ಪಡೆದು, ಅಭಿವೃದ್ಧಿಪಡಿಸಿ, ಗ್ರಾಮ ಪಂಚಾಯತಿಗಳಿಗೆ ಶೀಘ್ರವಾಗಿ ಹಸ್ತಾಂತರಿಸುವಂತೆ ಸೂಚಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಇರಬಹುದಾದ ಸ್ಮಶಾನ ಭೂಮಿಯನ್ನು ಅನ್ಯರು ಆಕ್ರಮಿಸಿಕೊಳ್ಳದಂತೆ ಎಲ್ಲೆಯನ್ನು ಗುರುತಿಸಿ, ಸಾರ್ವಜನಿಕ ಸೇವೆಗೆ ಮುಕ್ತವಾಗಿರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.
ತಾಲೂಕಿನ ಹರಮಘಟ್ಟ ಗ್ರಾಮದ ಸುಮಾರು 70 ಜನರಿಗೆ ತಲಾ 2 ಎಕರೆಯಂತೆ ಮಂಜೂರಾಗಿರುವ ಜಮೀನಿನ ಹದ್ದುಬಸ್ತು ಹಾಗೂ ಅಳತೆ ಮಾಡಿಸುವ ಕಾರ್ಯ ನನೆಗುದಿಗೆ ಬಿದ್ದಿದ್ದು, ಆಗಸ್ಟ್ 8ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ, ಜಮೀನನ್ನು ಅರ್ಹರಿಗೆ ಒದಗಿಸಿಕೊಡುವಂತೆ ಅವರು ಸೂಚಿಸಿದರು.