ಕರ್ನಾಟಕ

karnataka

ಜಮೀರ್ ಅಹಮದ್​ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು: ಕೆ ಎಸ್​ ಈಶ್ವರಪ್ಪ ಒತ್ತಾಯ

By ETV Bharat Karnataka Team

Published : Nov 21, 2023, 6:27 PM IST

Updated : Nov 21, 2023, 7:07 PM IST

ಜಮೀರ್​ ಅಹಮದ್​ ಖಾನ್​ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್​ ಈಶ್ವರಪ್ಪ ಆಗ್ರಹಿಸಿದ್ದಾರೆ.

ಜಮೀರ್​ ಅಹಮದ್​ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಜಮೀರ್​ ಅಹಮದ್​ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಜಮೀರ್ ಅಹಮದ್​ರ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿರುವ ಸಚಿವ ಜಮೀರ್ ಅಹಮದ್ ಖಾನ್​​ರನ್ನು ತಕ್ಷಣ ಸಚಿವ ಸಂಪುಟದಿಂದ ವಜಾ‌ ಮಾಡಬೇಕೆಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನದ ಪ್ರಕಾರ ನಡೆಯುತ್ತಿದೆಯೋ ಅಥವಾ ಪಾಕಿಸ್ತಾನದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೋ ಎಂಬ ಬಗ್ಗೆ ಸ್ಪಷ್ಟಪಡಿಸಬೇಕಿದೆ. ಜಮೀರ್ ಅಹಮದ್ ಖಾನ್​ ಅವರು ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ ಸಂವಿಧಾನ ಬಾಹಿರವಾಗಿ ಮಾತನಾಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ನಾವು ಸ್ಪೀಕರ್ ಸ್ಥಾನಕ್ಕೆ ಗೌರವ ನೀಡುತ್ತಿದ್ದೇವೆಯೇ ಹೊರತು, ಅಲ್ಲಿ ಕುಳಿತುಕೊಳ್ಳುವವರಿಗೆ ಅಲ್ಲ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಜಮೀರ್ ಅಹಮದ್​ರನ್ನು ಸಚಿವ ಸಂಪುಟದಿಂದ ಕಿತ್ತು ಬಿಸಾಕಬೇಕು. ಈ ವಿಚಾರವಾಗಿ ಕಾಂಗ್ರೆಸ್​ನ ಯಾವೊಬ್ಬ ನಾಯಕರು ಮಾತನಾಡುತ್ತಿಲ್ಲ. ಸ್ಪೀಕರ್ ಸ್ಥಾನದ ಕುರಿತು ಮತ್ತು ಜಮೀರ್ ಅವರು ನೀಡಿರುವ ಹೇಳಿಕೆ ಕುರಿತು ಎಐಸಿಸಿ ಸೂಚನೆ ನೀಡಿ ಅವರನ್ನು ವಜಾಗೊಳಿಸಬೇಕು. ಆಗ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಗೌರವವಿರುತ್ತದೆ. ಜನ ಕೂಡ ಈ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.

ಕಾಂತರಾಜ ವರದಿ ಜಾರಿಗೆ ಆಗ್ರಹ:ಕಾಂತರಾಜ ವರದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ಕೇಂದ್ರ ಸರ್ಕಾರವು ಜಾತಿ ಜನಗಣತಿಗೆ ಸಂಬಂಧಿಸಿದಂತೆ ನಮ್ಮನ್ನು ಸೇರಿದಂತೆ ದೇಶಾದ್ಯಂತ 40 ಜನರನ್ನು ಕರೆಯಿಸಿ ನಡೆಸಬೇಕೆಂದು ಚರ್ಚೆ ನಡೆಸುತ್ತಿದೆ. ಜಾತಿ ಗಣತಿ ಹೇಗೆ ಇರಬೇಕೆಂದು ನಮ್ಮ ನಾಯಕರುಗಳು ಹೇಳಿದ್ದಾರೆ. ಸಂವಿಧಾನದ ಪ್ರಕಾರ, ಸುಪ್ರಿಂ ಕೋರ್ಟ್ ಜಡ್ಜ್​ಗಳು ಹಾಗೂ ತಜ್ಞರ ವರದಿಯಂತೆ ನಡೆಸಬೇಕೆಂದು ತಿಳಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಕಾಂಗ್ರೆಸ್​ನವರು ವರದಿ ಬಿಡುಗಡೆ ಮಾಡದಂತೆ ಮಾಡಿ ಜಾತಿ ಜಾತಿಗಳ ನಡುವೆ ಗಲಾಟೆ ಮಾಡುವಂತೆ ಮಾಡಿದ್ದಾರೆ. ವರದಿ ಜಾರಿಗೆ ಬಂದಿಲ್ಲ. ಆಗಲೇ ಲಿಂಗಾಯತ ಹಾಗೂ ಒಕ್ಕಲಿಗರು ವಿರೋಧ ಮಾಡುತ್ತಿದ್ದಾರೆ. ವರದಿ ಜಾರಿಗೆ ಮುನ್ನ ಸ್ವಾಮಿಜೀಗಳ ಸಭೆ, ಸರ್ವ ಪಕ್ಷಗಳ ಸಭೆ ಕರೆಯಬೇಕು. ಈ ವರದಿಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸಬೇಕು. ಬಿಹಾರದಲ್ಲಿ ಜಾತಿ ಗಣಪತಿ ಬಿಡುಗಡೆಗೊಳಿಸಲಾಗಿದೆ. ಅಲ್ಲಿ ಒಂದು ಧರ್ಮಕ್ಕೆ ಮಾತ್ರ ಅನುಕೂಲ‌ ಮಾಡಿಕೊಡಲು ವರದಿ ಜಾರಿ ಮಾಡಲಾಗಿದೆ. ಅಲ್ಲಿ ವಿರೋಧ ವ್ಯಕ್ತವಾಗಿದೆ. ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಮಾಡಬೇಡಿ ಎಂದು ಈಶ್ವರಪ್ಪ ಒತ್ತಾಯಿಸಿದರು.

'ಹಲೋ ಅಪ್ಪ' ಕುರಿತು ನ್ಯಾಯಾಂಗ ತನಿಖೆ ಆಗಬೇಕು: ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ವಂಶಸ್ಥರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರ ಇಷ್ಟಪಡದವರು ನಮಗೆ ಅನೇಕ ದಾಖಲೆ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. 'ಹಲೋ ಅಪ್ಪ' ವಿಷಯದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕುಮಾರಸ್ವಾಮಿ ಅವರೇ ಜನ ನಿಮ್ಮನ್ನು ನೋಡಿ ನಗ್ತಾರೆ: ಡಿಸಿಎಂ ಡಿಕೆ ಶಿವಕುಮಾರ್

Last Updated : Nov 21, 2023, 7:07 PM IST

ABOUT THE AUTHOR

...view details