ಶಿವಮೊಗ್ಗ:ಕಳೆದ ಹಲವು ವರ್ಷಗಳಿಂದ ನ್ಯಾ. ಸದಾಶಿವ ಆಯೋಗದ ವರದಿ ಶಿಫಾರಸು ನೆನೆಗುದಿಗೆ ಬಿದ್ದಿದೆ. ಎಲ್ಲ ಸರ್ಕಾರಗಳು ಇದನ್ನು ಮುಂದೂತ್ತಲೇ ಇವೆ. ಈಗಲಾದರೂ ವಿಳಂಬ ಮಾಡದೇ ಮುಖ್ಯಮಂತ್ರಿಗಳು ಆಯೋಗದ ವರದಿಯನ್ನ ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಸಮಿತಿಯ ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜವು ಹಲವು ಸೌಲಭ್ಯಗಳಿಂದ ವಂಚಿತವಾಗಿದೆ. ತಾರತಮ್ಯಕ್ಕೆ ಒಳಗಾಗಿದೆ. ಅಲ್ಲದೇ ಅಸ್ಪೃಶ್ಯತೆಯನ್ನು ಎದುರಿಸುತ್ತಿದೆ. ಸುಮಾರು 85 ಉಪ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಿನ್ನೆಲೆಯಲ್ಲಿಯೇ ಆಯೋಗ ರಚನೆಯಾಗಿತ್ತು. ಬಿಜೆಪಿ ಸರ್ಕಾರವಿದ್ದಾಗ ಆಯೋಗಕ್ಕೆ 12 ಕೋಟಿ ರೂ. ಅನುದಾನ ನೀಡಿತ್ತು. ಈಗ ವರದಿಯನ್ನು ಪಡೆದುಕೊಂಡಿದೆ. ಆದ್ದರಿಂದ ಇದನ್ನು ಜಾರಿ ಮಾಡಬೇಕು ಎಂದರು.
ಸದಾಶಿವ ಆಯೋಗದ ವರದಿ ಅಂಗೀಕಾರದ ಬಗ್ಗೆ ಸ್ಪರ್ಶ ಮತ್ತು ಬಲಿತ ಜಾತಿಯವರು ಅಪಪ್ರಚಾರ ಮಾಡುತ್ತಲೇ ಇದ್ದಾರೆ. ನಮ್ಮ ನಮ್ಮಲಿಯೇ ಭಿನ್ನಾಭಿಪ್ರಾಯ ಮೂಡುತ್ತಿವೆ. ಆದರೆ, ನಮ್ಮದು ನಿಜವಾಗಿಯೂ ಅಸ್ಪೃಶ್ಯತೆಯ ಸಮುದಾಯವಾಗಿದೆ. ಹಲವು ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ಈ ಎಲ್ಲ ಹಿನ್ನೆಲೆಯಲ್ಲಿ ಈಗಾಗಲೇ ಆಯೋಗದ ಶಿಫಾರಸ್ಸಿನಂತೆ ನಮಗೆ ನ್ಯಾಯ ಒದಗಿಸಬೇಕು. ಸಂವಿಧಾನದ ಚೌಕಟ್ಟಿನಲ್ಲಿರುವ ಮೀಸಲಾತಿಯಲ್ಲಿ ಒಳ ಮೀಸಲಾತಿ ವಿರೋಧಿಸುವುದು ಸರಿಯಲ್ಲ. ವರದಿಯನ್ನು ಅಂಗೀಕರಿಸುವ ಮೂಲಕ ಪರಿಶಿಷ್ಟರ ಅಭಿವೃದ್ದಿಗೆ ಸಹಾಯಕವಾಗಬೇಕು ಎಂದು ಮನವಿ ಮಾಡಿದರು.
TAGGED:
AJ Sadashiva Commission