ಕರ್ನಾಟಕ

karnataka

ಚನ್ನಪಟ್ಟಣದಲ್ಲಿ ಜೆಡಿಎಸ್​ - ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ: ಮೋದಿ - ದೇವೇಗೌಡರಿಂದ ಬಿರುಸಿನ ಪ್ರಚಾರ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಜೆಡಿಎಸ್ ಅಭ್ಯರ್ಥಿ​ ಪರ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

By

Published : May 1, 2023, 8:01 PM IST

Published : May 1, 2023, 8:01 PM IST

vpm-modi-former-prime-minister-hd-deve-gowda-campaign-in-channapattana
ಚನ್ನಪಟ್ಟಣದಲ್ಲಿ ಜೆಡಿಎಸ್​ - ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ: ಮೋದಿ ಮತ್ತು ದೇವೇಗೌಡರಿಂದ ಬಿರುಸಿನ ಪ್ರಚಾರ

ಚನ್ನಪಟ್ಟಣದಲ್ಲಿ ಜೆಡಿಎಸ್​ - ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ: ಮೋದಿ ಮತ್ತು ದೇವೇಗೌಡರಿಂದ ಬಿರುಸಿನ ಪ್ರಚಾರ

ಚನ್ನಪಟ್ಟಣ/ರಾಮನಗರ:ರಾಜ್ಯ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಇದೆ. ಈ ಬಾರಿ ವರುಣಾ ಮತ್ತು ಕನಕಪುರ ಕ್ಷೇತ್ರಗಳ ಬಳಿಕ ಚುನಾವಣಾ ಅಖಾಡದಲ್ಲಿ ಸದ್ದು ಮಾಡುತ್ತಿರುವ ಮತ್ತೊಂದು ಕ್ಷೇತ್ರ ಚನ್ನಪಟ್ಟಣ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್​ ನಡುವೆ ನೇರಾನೇರ ಪೈಪೋಟಿ ನಡೆಯುತ್ತಿದೆ.

ಚನ್ನಪಟ್ಟಣ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ. ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್​ ಹುರಿಯಾಳಾಗಿರುವ ಕುಮಾರಸ್ವಾಮಿ ಮತ್ತೊಮ್ಮೆ ಗೆದ್ದು ಮುಖ್ಯಮಂತ್ರಿ ಆಗುವ ಆಸೆಯಲ್ಲಿದ್ದಾರೆ. ಕ್ಷೇತ್ರದಿಂದ ಎರಡು ಬಾರಿ ಗೆದ್ದು ಮುಖ್ಯಮಂತ್ರಿಯಾಗಿದ್ದು, ಇದೀಗ ಮೂರನೇ ಬಾರಿಗೆ ಗೆದ್ದು ಸಿಎಂ ಆಗುವ ಗುರಿ ಹೊಂದಿದ್ದಾರೆ.

ಆದರೆ, ಈ ಬಾರಿ ಕುಮಾರಸ್ವಾಮಿಗೆ ಗೆಲುವು ಅಷ್ಟು ಸುಲಭದ ಮಾತಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಹೆಚ್.ಡಿ.ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಕಣದಲ್ಲಿದ್ದಾರೆ. ಬಿಜೆಪಿಯಿಂದ ಟಿಕೆಟ್​ ಪಡೆದು ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿರುವ ಸಿಪಿವೈ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

2008ರಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮತ್ತು 2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಈ ಕ್ಷೇತ್ರದಿಂದ ಭರ್ಜರಿ ಜಯಗಳಿಸಿದ್ದರು. ಆದರೆ, 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಪಿವೈ ಕುಮಾರಸ್ವಾಮಿ ವಿರುದ್ಧ ಭಾರಿ ಪೈಪೋಟಿ ನಡೆಸಿ ಸೋಲು ಕಂಡಿದ್ದರು. ಈ ಬಾರಿಯೂ ಇಬ್ಬರ ಮಧ್ಯೆ ಪೈಪೋಟಿ ಮುಂದುವರೆದಿದೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಕಾವು ಜೋರಾಗಿದ್ದು, ಮಗ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ದೇವೇಗೌಡ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಪ್ರಚಾರಕ್ಕೂ ಮುನ್ನವೇ ಮತಬೇಟೆಗೆ ಜೆಡಿಎಸ್​ ಮುಂದಾಗಿದೆ.

ಪ್ರಧಾನಿ ಮೋದಿ ಆಗಮನದ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ನಾನು ಮೊದಲ ಬಾರಿಗೆ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬಂದಿದ್ದೇನೆ. ಇದನ್ನು ಮುಗಿಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತೇನೆ. ಪ್ರಧಾನಿಗಳು ಬರುತ್ತಿದ್ದಾರೆ. ಅವರು ಬರುವುದರೊಳಗೆ ನನ್ನ ಕಾರ್ಯಕ್ರಮ ಮುಗಿಯಲಿದೆ. ಅವರು ಬರೋದನ್ನು ಬೇಡ ಎನ್ನಲು ಆಗುತ್ತದೆಯಾ?. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಚನ್ನಪಟ್ಟಣದಲ್ಲಿ ಬೃಹತ್​​ ಸಮಾವೇಶ ನಡೆಸಿ ಕಾಂಗ್ರೆಸ್, ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಾರಣ. ಇವರ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ನಡೆಸಿದ್ದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದೆ. ಹಾಗಾಗಿ ಕ್ಷೇತ್ರದ ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ತಂತ್ರಗಳ ಮೊರೆ ಹೋಗಿವೆ. ಒಟ್ಟಿನಲ್ಲಿ ಮಾಜಿ ಪ್ರಧಾನಿ ಮತ್ತು ಹಾಲಿ ಪ್ರಧಾನಿ ಚನ್ನಪಟ್ಟಣದಲ್ಲಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದು, ಮತ ಪ್ರಭುಗಳು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಫಲಿತಾಂಶದ ಬಳಿಕ ತಿಳಿದು ಬರಲಿದೆ.

ಇದನ್ನೂ ಓದಿ :ಏಳು ಗ್ಯಾರೆಂಟಿ ಘೋಷಣೆ ಬಳಿಕ ನಾಳೆ ಕಾಂಗ್ರೆಸ್ ಪ್ರಣಾಳಿಕೆ: ದೊಡ್ಡ ನಿರೀಕ್ಷೆ ಅನುಮಾನ

ABOUT THE AUTHOR

...view details