ಕರ್ನಾಟಕ

karnataka

ETV Bharat / state

ಮಳೆಹಾನಿ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿ: ಡಿಕೆಶಿ ಒತ್ತಾಯ

ರಾಮನಗರದ ಮಳೆಹಾನಿ ಪ್ರದೇಶಕ್ಕೆ ಡಿ ಕೆ ಶಿವಕುಮಾರ್ ಭೇಟಿ ನೀಡಿ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದರು.

By

Published : Sep 1, 2022, 9:01 AM IST

dk shivakumar visits ramanagara rain effected area
ಮಳೆಹಾನಿ ಪ್ರದೇಶಕ್ಕೆ ಡಿಕೆಶಿ ಭೇಟಿ

ರಾಮನಗರ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ನಮ್ಮ ಹಿರಿಯರಿಗೆ ಪೂಜೆ ಮಾಡುವ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಅಜ್ಜಿ ತೀರಿಕೊಂಡಿದ್ದು ಈ ವರ್ಷ ಮನೆಯಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡುತ್ತಿಲ್ಲ. ಆದರೆ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ನಾನು, ಸುರೇಶ್ ಹಾಗೂ ಸ್ನೇಹಿತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

ಮಳೆಹಾನಿ ಪ್ರದೇಶಕ್ಕೆ ಡಿಕೆಶಿ ಭೇಟಿ: ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಕುರಿತು ಕೇಳಿದ ಮಾಧ್ಯಮದವರ ಪ್ರಶ್ನೆಗೆ, ನನ್ನ 40 ವರ್ಷಗಳ ಅನುಭವದಲ್ಲಿ ಇಂತಹ ಮಹಾಮಳೆಯನ್ನು ನೋಡಿರಲಿಲ್ಲ. ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಆಹಾರ ಪದಾರ್ಥಗಳು, ಸಾಮಗ್ರಿಗಳು ನೀರುಪಾಲಾಗಿವೆ. ಮನೆಗಳಲ್ಲಿ ಸುಮಾರು ಎರಡು ಅಡಿಗಳಷ್ಟು ಕೆಸರು ತುಂಬಿಕೊಂಡಿದ್ದು, ಜನರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುವ ಆತಂಕ ಕಾಡುತ್ತಿದೆ.

ಮಳೆಹಾನಿ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಂತೆ ಡಿಕೆಶಿ ಒತ್ತಾಯ

ಈ ವಿಚಾರವಾಗಿ ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದೇನೆ. ಈ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರಗಳನ್ನು ನೀಡಬೇಕು. 50,000 ದಿಂದ 10, 15 ಲಕ್ಷ ಮೌಲ್ಯದಷ್ಟು ಹಲವು ಮನೆಗಳಿಗೆ ಹಾನಿಯಾಗಿದೆ. ರೇಷ್ಮೆ ಕೈಗಾರಿಕೆ ಯಂತ್ರಗಳಿಗೂ ಸಾಕಷ್ಟು ನಷ್ಟವಾಗಿದ್ದು, 50 ಲಕ್ಷದಿಂದ 5 ಕೋಟಿವರೆಗೂ ನಷ್ಟವಾಗಿದೆ.

ಮಳೆಹಾನಿ ಸಂತ್ರಸ್ತರಿಗೆ ಪರಿಹಾರ: ಈ ಕೈಗಾರಿಕೆಗಳು ಇಡೀ ವ್ಯವಸ್ಥೆಯನ್ನೇ ಹೊಸದಾಗಿ ಆರಂಭಿಸಬೇಕಿದೆ. ಈ ಕೂಡಲೇ ಸರ್ಕಾರ ಈ ವಿಚಾರವಾಗಿ ಸಮೀಕ್ಷೆ ನಡೆಸಬೇಕು. ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕು. ಸರ್ಕಾರ ಪ್ರತಿ ಕುಟುಂಬಕ್ಕೆ 10,000 ನೀಡುವುದಾಗಿ ತಿಳಿಸಿದೆ. ಈ ಮೊತ್ತ ಕೆಲ ದಿನ ಅಥವಾ ಒಂದು ತಿಂಗಳ ಊಟಕ್ಕೆ ಸರಿ ಹೋಗಬಹುದು. ಅವರ ಪುನರ್ವಸತಿ ಹಾಗೂ ಜೀವನ ಸರಿಪಡಿಸಿಕೊಳ್ಳಲು ಸರ್ಕಾರ ಬೆನ್ನೆಲುಬಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಚಿವರ ಭೇಟಿ ವಿಚಾರವಾಗಿ ಮಾತನಾಡಿ, ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಾಮನಗರ ಜಿಲ್ಲೆಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ್ದರು. ಅವರು ಈಗ ಈ ಸಂತ್ರಸ್ತರ ಮನೆ ಹಾಗೂ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಕೊಡಬೇಕು ಎಂದು ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಚಿವರು ಈ ಭಾಗದ ಜನರಿಗೆ ಪರಿಹಾರ ಕೊಡಿಸಿ ಅವರ ಆರೋಗ್ಯವನ್ನು ರಕ್ಷಿಸಲಿ ಎಂದರು.

ಈದ್ಗಾ ಮೈದಾನ ವಿಚಾರ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪೆಂಡಲ್​ಗೆ ಅನುಮತಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನ್ಯಾಯಾಲಯದ ವಿಚಾರವಾಗಿ ರಾಜಕೀಯ ಮಾಡುವುದಿಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ನ್ಯಾಯಾಲಯದ ಆದೇಶವನ್ನು ನಾವು ಪ್ರಶ್ನಿಸುವುದಿಲ್ಲ. ಸರ್ಕಾರ ಹಾಳಾಗುತ್ತಿರುವ ರಾಜ್ಯದ ಘನತೆಯನ್ನು ಕಾಪಾಡುವುದರ ಬಗ್ಗೆ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ:ಚನ್ನಪಟ್ಟಣ: ಮಳೆಹಾನಿ ಪ್ರದೇಶಕ್ಕೆ ಡಿಕೆಶಿ ಭೇಟಿ, ಸಂತ್ರಸ್ತರಿಂದ ಅಹವಾಲು ಸ್ವೀಕಾರ

ಭಾರತ ಐಕ್ಯತಾ ಯಾತ್ರೆ ಬಗ್ಗೆ ಮಾತನಾಡಿ, ಗುಂಡ್ಲುಪೇಟೆಯಿಂದ ಆರಂಭವಾಗಿ ರಾಯಚೂರಿನವರೆಗೂ ಸಾಗಲಿದೆ. ರಾಜ್ಯದ ಎಲ್ಲಾ ಕ್ಷೇತ್ರದ ಜನರು ಕೂಡ ಒಂದೊಂದು ದಿನ ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದೇನೆ. ನಮ್ಮ ಕ್ಷೇತ್ರದಿಂದಲೂ ಜನರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ABOUT THE AUTHOR

...view details