ಕರ್ನಾಟಕ

karnataka

By

Published : Jan 13, 2023, 5:35 PM IST

ETV Bharat / state

ಸಂಕ್ರಾಂತಿ ನಂತರ ಸುಮಲತಾ ಒಂದು ನಿರ್ಧಾರಕ್ಕೆ ಬರುತ್ತಾರೆ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿಶ್ವಾಸ

ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ - ಸಂಕ್ರಾಂತಿ ನಂತರ ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ - ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆ.

CP Yogeshwar
ಸಿ.ಪಿ.ಯೋಗೇಶ್ವರ್

ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ: ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ

ರಾಮನಗರ:ಸಂಸದೆ ಸುಮಲತಾ ಅವರು ಸಹ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ.‌ ಸಂಕ್ರಾಂತಿ ನಂತರ ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ ಎಂದು ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಮಾತನಾಡಿದ ಅವರು, ಜ.16-17 ನೇ ತಾರೀಖು ಮುಗಿದ ನಂತರ ಎಲ್ಲವೂ ಬದಲಾಗಲಿದ್ದು, ಸಾಕಷ್ಟು ಮಂದಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುಳಿವು ನೀಡಿದರು.

ಬಿಜೆಪಿ - ಜೆಡಿಎಸ್ ಮೈತ್ರಿ ಇಲ್ಲ: ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ದೋಸ್ತಿ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಆದರೆ,ಮುಂದಿನ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಇರುವುದಿಲ್ಲ. ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್- ಜೆಡಿಎಸ್ ದೋಸ್ತಿ ಬಗ್ಗೆ ಗೊತ್ತಿಲ್ಲ ಎಂದರು. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ರಾಜ್ಯಮಟ್ಟದ ನಾಯಕರು‌. ಅವರು ಎಲ್ಲಿ ಬೇಕಾದರೂ ಕೂಡ ಸ್ಪರ್ಧೆ ಮಾಡಬಹುದು. ಕುಮಾರಸ್ವಾಮಿ ಸಹ ಸಾತನೂರು, ಚಿಕ್ಕಬಳ್ಳಾಪುರ, ರಾಮನಗರ, ಈಗ ಚನ್ನಪಟ್ಟಣದಲ್ಲಿಯೂ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್​​ನಲ್ಲಿ2 ಗುಂಪಿದೆ: ಪ್ರಧಾನಿ ಮೋದಿ ರಾಜ್ಯ ಪ್ರವಾಸಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರ ಟೀಕೆ ವಿಚಾರವಾಗಿ ಟಾಂಗ್ ಕೊಟ್ಟ ಯೋಗೇಶ್ವರ್, ವಿರೋಧಿಗಳಿಗೆ ಪ್ರಧಾನಿಗಳ ಬಗ್ಗೆ ಭಯ ಇದೆ. ಹಾಗಾಗಿ ಅವರು ಅವರ ಬಗ್ಗೆ ಟೀಕೆ ಮಾಡುತ್ತಾರೆ. ಬಿಜೆಪಿಗೆ ಅವರೇ ದೊಡ್ಡ ಬಲ, ಅದಕ್ಕಾಗಿ ಟೀಕೆ ಮಾಡುತ್ತಾರೆ. ಕಾಂಗ್ರೆಸ್​​ನಲ್ಲಿ ಸಹ ಎರಡು ಗುಂಪಿದೆ. ಸಿಎಂ ಸ್ಥಾನಕ್ಕಾಗಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಿತ್ತಾಡುತ್ತಿದ್ದಾರೆ. ಜೊತೆಯಲ್ಲಿದ್ದರೂ ಸಹ ಒಳಗೆ ಗುಂಪುಗಾರಿಕೆ ಇದೆ. ಹಾಗಾಗಿ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಕಾಂಗ್ರೆಸ್​​ನಿಂದ 200 ಯೂನಿಟ್ ಉಚಿತ ವಿದ್ಯುತ್ ಪ್ರಣಾಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಉಚಿತ ಸೌಲಭ್ಯ ನೀಡಿದರೂ ಸಹ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಇದೆಲ್ಲವೂ ಸಹ ಯಾವುದೇ ಉಪಯೋಗ ಆಗಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅವರು ಉಚಿತವಾಗಿ ಕೊಡಲು ಸಾಧ್ಯವಾಗಲ್ಲ ಎಂದು ಸಿ.ಪಿ.ಯೋಗೇಶ್ವರ್ ಟಾಂಗ್​​ ನೀಡಿದರು.

ಬಿಜೆಪಿ ಸೇರುವುದರ ಬಗ್ಗೆ ಯೋಚಿಸಿಲ್ಲ ಎಂದಿದ್ದ ಸಂಸದೆ:ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಆದರೆ, ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಸಹ ಈ ಬಗ್ಗೆ ಮಾತನಾಡಿದ್ದಾರೆ. ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಸಚ್ಚಿದಾನಂದ ಅವರಿಗೆ ನನ್ನ ಬೆಂಬಲ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಮತ್ತು ಆ ವಿಚಾರದಲ್ಲಿ ಮುಚ್ಚಿಡುವಂತಹದ್ದೇನೂ ಇಲ್ಲೂ. ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎಂದು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಹೀಗಾಗಿ ಸಚ್ಚಿ ಬ್ಯಾನರ್​​ನಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ ಆಗಲ್ಲ ಎಂದು ಸಂಸದೆ ಹೇಳಿದ್ದರು.

ಜನರು ಪಕ್ಷ ಸೇರ್ಪಡೆ ಬಗ್ಗೆ ನಿರ್ಧಾರ ಮಾಡ್ತಾರೆ. ಪಕ್ಷಕ್ಕೆ ಸೇರುವ ಪರಿಸ್ಥಿತಿ ಬಂದಾಗ ಹೇಗೆ ಮಾಡಬೇಕೆಂದು ಯೋಚನೆ ಮಾಡುತ್ತೇನೆ. ಯೋಗೇಶ್ವರ್ ಅವರಿಗೆ ಬಿಜೆಪಿಗೆ ನಾನು ಬರಬೇಕು ಎಂಬ ಆಸೆ ಇದೆ. ಅದೇ ರೀತಿ ಹಲವು ನಾಯಕರು ನನ್ನನ್ನು ಮಾತನಾಡಿಸಿದ್ದಾರೆ. ಇಲ್ಲಿಯವರೆಗೆ ನಾನು ಆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದರು.

ಆಪರೇಷನ್ ಕಮಲ:ಚುನಾವಣಾ ಪೂರ್ವದಲ್ಲೇ ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ ನಾಯಕರು ಸತತ ಪ್ರಯತ್ನದ ಬಳಿಕ ಅಂತಿಮವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಸೇರಿ ಮಂಡ್ಯದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸುಮಲತಾ ಅವರನ್ನು ಸೇರಿಸಿಕೊಳ್ಳುವ ಮೊದಲಿನ ಭಾಗವಾಗಿ ಈ ಆಪರೇಷನ್ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನಾನು ಬಿಜೆಪಿ ಸೇರುವುದರ ಬಗ್ಗೆ ಯೋಚಿಸಿಲ್ಲ: ಸಂಸದೆ ಸುಮಲತಾ ಅಂಬರೀಶ್​

ABOUT THE AUTHOR

...view details