ರಾಮನಗರ:ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ವರ್ಗಾವಣೆ ಆದೇಶ ಹೊರಬಿದ್ದಿರುವುದು ತಾಲೂಕಿನ ಇತಿಹಾಸದಲ್ಲೇ ಇದೇ ಮೊದಲಾಗಿದೆ. ನಾನಾ, ನೀನಾ ಎನ್ನುವಂತೆ ಪೈಪೋಟಿಗೆ ಇಳಿದಿರುವ ಈ ಜನಪ್ರತಿನಿಧಿಗಳ ಪರಸ್ಪರ ಕಾದಾಟಕ್ಕೆ ತಾಲೂಕು ದಂಡಾಧಿಕಾರಿ ಹುದ್ದೆ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಸಿಪಿವೈ ಹಾಗೂ ಹೆಚ್ಡಿಕೆ ಜಟಾಪಟಿ -ಯೋಗೇಶ್ವರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಬಿ. ಕೆ. ಸುದರ್ಶನ್ ಅವರಿಗೆ ವರ್ಗಾವಣೆ ಆದೇಶ ಹೊರಬಿದ್ದ 24 ಗಂಟೆಯೊಳಗೆ ಅವರನ್ನು ಬಂದಷ್ಟೇ ವೇಗದಲ್ಲಿ ಎತ್ತಂಗಡಿ ಮಾಡಿಸಲಾಗಿದೆ. ಅವರ ಜಾಗಕ್ಕೆ ಜಿ. ಪಿ ಹರ್ಷವರ್ಧನ್ ಅವರನ್ನು ತಂದು ನಿಯೋಜನೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲೂ ಮೇಲುಗೈ ಸಾಧಿಸುತ್ತೇನೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿರುವುದು ಯೋಗೇಶ್ವರ್ ಅವರ ಗೇಮ್ ಪ್ಲಾನ್ ಉಲ್ಟಾ ಹೊಡೆದಿದೆ.