ಕರ್ನಾಟಕ

karnataka

By

Published : Aug 13, 2020, 10:41 AM IST

ETV Bharat / state

ರಾಮನಗರ: ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆ ಮುಂದೂಡಿಕೆ

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶದ ಕಂಚುಗಾರನಹಳ್ಳಿ, ಕಾವಲ್, ಯರೇಹಳ್ಳಿ ಮತ್ತು ಮುಡೇನಹಳ್ಳಿ ಗ್ರಾಮಗಳ ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆ ಮುಂದೂಡಲಾಯಿತು.

Meeting
Meeting

ರಾಮನಗರ: ಜಿಲ್ಲೆಯ ಬಿಡದಿಯಲ್ಲಿ ಟೌನ್​​ಶಿಪ್ ನಿರ್ಮಿಸಲು ಗುರುತಿಸಿರುವ ಭೂಮಿ ಸಮಸ್ಯೆ ಇತ್ಯರ್ಥ ಪಡಿಸಿಸುವಂತೆ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ರೈತರು ಪಟ್ಟು ಹಿಡಿದಿದ್ದರಿಂದ ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶ ವ್ಯಾಪ್ತಿ ಗ್ರಾಮಗಳ ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಮುಂದೂಡಲಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶದ ಕಂಚುಗಾರನಹಳ್ಳಿ, ಕಾವಲ್, ಯರೇಹಳ್ಳಿ ಮತ್ತು ಮುಡೇನಹಳ್ಳಿ ಗ್ರಾಮಗಳ ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆ ಆಯೋಜಿಸಲಾಗಿತ್ತು.

ರೆಡ್ ಝೋನ್​​ನಲ್ಲಿರುವ 9,178 ಎಕರೆ ಪೈಕಿ 734 ಎಕರೆ ಮಾತ್ರ ಹೇಗೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ರೆಡ್ ಝೋನ್​ನಲ್ಲಿರುವ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ಆದೇಶಿಸಲಾಗಿದೆ. ಕೆಂಪು ವಲಯದಿಂದ ಟೌನ್​​ಶಿಪ್ ಭೂಮಿಯನ್ನು ಮುಕ್ತಗೊಳಿಸಬೇಕು ಎಂದು ಬಾಲಕೃಷ್ಣ ಆಗ್ರಹಿಸಿದರು.

ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ, ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ 734 ಎಕರೆ ಟೌನ್​​ಶಿಪ್ 9,178 ಎಕರೆ ವ್ಯಾಪ್ತಿಯಲ್ಲಿದೆ. ಸರ್ಕಾರದ ಮಟ್ಟದಲ್ಲಿ ಸಭೆ ನಡೆದು ಉಳಿದ ಜಮೀನು ಉಪಯೋಗಿಸಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ. ಅದಾದ ನಂತರವೇ ಅಂತಿಮ ಅಧಿಸೂಚನೆ ಹೊರ ಬಿದ್ದಿದೆ. ಭೂಮಿಗೆ ಅಪಾರ ಬೇಡಿಕೆಯಿರುವ ಕಾರಣ 800 ಎಕರೆ ಸ್ವಾಧೀನ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಐಎಡಿಬಿ, ಬಿಎಂಆರ್​ಡಿಎ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು. ರೈತರಿಗೆ ಅನ್ಯಾಯ ಮಾಡಿ, ಕೆಲ ಉದ್ದಿಮೆದಾರರಿಗೆ ಅನುಕೂಲ ಮಾಡಲು ಬಲವಂತವಾಗಿ ಭೂ ದರ ನಿರ್ಧಾರ ಮಾಡಲು ಪ್ರಯತ್ನಿಸಿದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಬಾಲಕೃಷ್ಣ ಎಚ್ಚರಿಕೆ ನೀಡಿದರು. ರೈತರು ಸಹ ಬಾಲಕೃಷ್ಣರವರ ಅಭಿಪ್ರಾಯಕ್ಕೆ ಧ್ವನಿಗೂಡಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿ ಅರ್ಚನಾ ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಮುಂದೂಡಿದರು.

ABOUT THE AUTHOR

...view details