ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ತಯಾರಿ ಬಿರುಸುಗೊಂಡಿದೆ. ಈ ಬೆನ್ನಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿನ್ನೆ ದೇವಾಲಯಗಳಿಗೆ ಭೇಟಿ ನೀಡಿದರು. ರಾಯಚೂರು ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ದೇವಸೂಗೂರು ಗ್ರಾಮದ ಶ್ರೀಸೂಗೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೇರವೇರಿಸಿದರು. ಬಳಿಕ ನಗರದಲ್ಲಿರುವ ಶಂಶಲಾಂ ದರ್ಗಾಕ್ಕೆ ತೆರಳಿ ದರ್ಶನ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನನ್ನ ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಎಲ್ಲರನ್ನು ಕರೆದು ಕುರ್ಚಿ ಹಾಕಿ ಏನು ಮಾಡುತ್ತಿದ್ದೇನೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮುಂಬರುವ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲೇ ಬೃಹತ್ ಕಾರ್ಯಕ್ರಮ ಮಾಡುತ್ತೇನೆ. 10 ದಿನಗಳ ಒಳಗೆ ಅನೇಕ ಮಂದಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. 30 ಕ್ಷೇತ್ರಗಳಲ್ಲಿ ಕೆಆರ್ಪಿಪಿ ಪಕ್ಷ ಬಲಿಷ್ಠವಾಗಿ ಬೇರೂರಿದೆ. 13 ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳಿದ್ದಾರೆ. 17 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ಘೋಷಿಸುತ್ತೇವೆ. ಫೆಬ್ರವರಿ 10 ರ ಒಳಗೆ ನನ್ನ ಪಕ್ಷದ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತೇನೆ" ಎಂದರು.
ಇನ್ನು "ಆಸ್ತಿ ಮುಟ್ಟುಗೋಲು ಮಾಡಿ ನನ್ನನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಯಾವುದನ್ನು ನಾನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ, ನ್ಯಾಯಾಲಯಗಳಿವೆ. ಒಂದು ರೂಪಾಯಿ ಜಪ್ತಿ ಮಾಡಿದರೆ 10 ವರ್ಷದಲ್ಲಿ 10 ರೂಪಾಯಿಯಾಗಿ ಮರಳಿ ಬರುತ್ತದೆ" ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಅಭಿವೃದ್ಧಿ ವಿಚಾರಗಳನ್ನ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇನೆ. ಬೇರೆ ಪಕ್ಷಗಳ ವಿಚಾರಗಳ ಕುರಿತು ಸಾರ್ವಜನಿಕರಿಗೆ ತಿಳಿಸುತ್ತೇನೆ. 2023 ರಲ್ಲಿ ಸರ್ಕಾರ ರಚನೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎನ್ನುವುದಷ್ಟೇ ನನ್ನ ವಿಚಾರ ಎಂದರು.
ಇದನ್ನೂ ಓದಿ:ನಾನು ಬಸವಣ್ಣನ ತತ್ವದ ಮೇಲೆ ನಡೆಯುವವನು, ಒಮ್ಮೆ ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ: ಜನಾರ್ದನ ರೆಡ್ಡಿ