ಕರ್ನಾಟಕ

karnataka

ಎರಡು ಚೀಲದಲ್ಲಿ ಹಣ ತಂದಿದ್ರು, ಒಂದು ಚೀಲ ಪಿಎಸ್​ಐ ತೆಗೆದುಕೊಂಡು ಹೋಗಿದ್ದಾರೆ: ಡಿಕೆಶಿ ಆರೋಪ

By

Published : Apr 15, 2021, 5:14 PM IST

ಮಸ್ಕಿ ಉಪಚುನಾವಣೆ ಕಣ ರಂಗೇರಿದ್ದು, ಕಾಂಗ್ರೆಸ್​-ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಲಾಗುತ್ತಿದೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.

DKS Press meet At Maski Congress office
ಸುದ್ದಿಗೋಷ್ಠಿಯಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದರು

ರಾಯಚೂರು: ಎಲ್ಲಾ ರಂಗದಲ್ಲೂ ಸರ್ಕಾರ ವಿಫಲವಾಗಿದ್ದು, ಹತಾಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ.

ಮಸ್ಕಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರೈತರು, ವರ್ತಕರು, ಕಾರ್ಮಿಕರು ಸೇರಿ ಯಾವುದೇ ವರ್ಗದ ಜನರಿಗೆ ನ್ಯಾಯ ದೊರೆಯುತ್ತಿಲ್ಲ. ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಅವರಿಗೆ ಯಾವುದೇ ಭರವಸೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೊನೆಗೆ ನಾವು ಭರವಸೆ ನೀಡಿದ ಮೇಲೆ ರೈತರು ಸಮಾಧಾನವಾಗಿದ್ದಾರೆ. 5ಎ ಕಾಲುವೆ ವಿಚಾರದಲ್ಲಿ ರೈತರ ಜೊತೆಯಲ್ಲಿ ನಾವು ಇರುತ್ತೇವೆ ಎಂದರು.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಉಪಚುನಾವಣೆ ಕಾನೂನುಬದ್ಧವಾಗಿ ನಡೆಯುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಜನರಿಗೆ ಹಂಚಲು ಎರಡು ಚೀಲದಲ್ಲಿ ಹಣ ಸಾಗಿಸುತ್ತಿದ್ದಾಗ ನಮ್ಮ ಕಾರ್ಯಕರ್ತರು ಹಿಡಿದಿದ್ದಾರೆ. ಬೈಕ್​ನಲ್ಲಿ ಒಂದು ಚೀಲದಲ್ಲಿ ಹಣ ಕಳುಹಿಸಿ, ಇನ್ನೊಂದು ಚೀಲವನ್ನು ಚುನಾವಣಾಧಿಕಾರಿಗೆ ನೀಡಿದ್ದಾರೆ. ಮಟ್ಟೂರು ಗ್ರಾಮದಲ್ಲಿ ಪಿಎಸ್​ಐ ಡಾಕೇಶ್ ಮುದಗಲ್ ಈ ಕೆಲಸ ಮಾಡಿದ್ದು, ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದನ್ನು ಡಿಲಿಟ್ ಮಾಡಿಸಿದ್ದಾರೆ. ಪಿಎಸ್​ಐಅನ್ನು ಅಮಾನತು ಮಾಡಿ ಪ್ರಕರಣ ದಾಖಲಿಸಬೇಕು. ಸುಮಾರು 50 ಲಕ್ಷ ರೂ. ಹಣ ಬೇರೆಡೆಗೆ ಸಾಗಿಸಿದ್ದಾರೆ. ಎಸ್​ಪಿಗೂ ಇದನ್ನು ಹೇಳುತ್ತೇವೆ, ಹೋರಾಟ ಮಾಡುತ್ತೇವೆ. ನ್ಯಾಯಬದ್ಧ ಚುನಾವಣೆ ನಡೆಸಲು ಚುನಾವಣಾ ಆಯೋಗ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಓದಿ : ಮಸ್ಕಿ ಉಪಚುನಾವಣೆ: ಹಣ ಹಂಚಿಕೆ ಆರೋಪದಡಿ ಗ್ರಾಮಸ್ಥರ ತರಾಟೆ

ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲೂ ನಮ್ಮನ್ನು ಗೆಲ್ಲಿಸಲು ಜನ ತೀರ್ಮಾನ ಮಾಡಿದ್ದಾರೆ. ಹಾಸನ, ಶಿವಮೊಗ್ಗದಿಂದ ಬಂದವರು ದುಡ್ಡು ಹಂಚುತ್ತಿದ್ದಾರೆ, ಅದನ್ನು ನಮ್ಮವರು ಹಿಡಿದಿದ್ದಾರೆ. ಜಾತಿವಾರು ಸಮಾಜದ ಸಭೆ ಮಾಡುವುದೇ ದೊಡ್ಡ ಅಪರಾಧವಾಗಿದೆ‌‌. ಮುಖ್ಯಮಂತ್ರಿಯಾಗಿ ವಿವಿಧ ಸಮಾಜದ ಸಭೆಗಳನ್ನು ಯಡಿಯೂರಪ್ಪ ಮಾಡಿದ್ದಾರೆ. ಚುನಾವಣಾ ಆಯೋಗ ಸಿಎಂ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸೂಚನೆ ನೀಡಬೇಕು. ಸಭೆಗಳನ್ನು ಮಾಡಬೇಡಿ ಎಂದಿದ್ದರೆ ಮಾಡುತ್ತಿರಲಿಲ್ಲ. ಸರ್ವಪಕ್ಷಗಳ ಸಭೆ ಈಗ ಕರೆದಿದ್ದಾರೆ, ಇದನ್ನು ಮುಂಚೆ ಮಾಡಬೇಕಿತ್ತು. ಮೊದಲೆಲ್ಲಾ ಅವರು ಹೇಳಿದ ಹಾಗೆ ಮಾಡಿದ್ದೇವೆ. ಜಾಗಟೆ ಹೊಡೆದಿದ್ದೇವೆ, ದೀಪ ಹಚ್ಚಿದ್ದೇವೆ. ಎಲ್ಲರೊಂದಿಗೆ ಚರ್ಚೆ ಮಾಡಿ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದರು.

ABOUT THE AUTHOR

...view details