ಕರ್ನಾಟಕ

karnataka

Mysuru Dasara: ಇಂದಿನಿಂದ ಸರಳ, ಸಾಂಪ್ರದಾಯಿಕ ನಾಡಹಬ್ಬದ ಸಂಭ್ರಮ; ಏನೆಲ್ಲಾ ವಿಶೇಷತೆ? ಇಲ್ಲಿದೆ ಮಾಹಿತಿ...

By

Published : Oct 7, 2021, 7:21 AM IST

ಶರನ್ನವರಾತ್ರಿಗೆ ಅರಮನೆ ಸಂಪೂರ್ಣ ಸಿದ್ದಗೊಂಡಿದೆ. ರಾಜಮನೆತನದವರು 10 ದಿನಗಳ ಕಾಲ ನಡೆಸುವ ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿಯ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಎಲ್ಲ ರೀತಿಯಲ್ಲೂ ಸಿದ್ಧತೆಗಳು ನಡೆದಿವೆ.

Mysore dasara to inaugurate today
ಇಂದಿನಿಂದ ನಾಡಹಬ್ಬ ಮೈಸೂರು ದಸರಾ

ಮೈಸೂರು: ಜಗತ್‌ಪ್ರಸಿದ್ಧ ಮೈಸೂರು ದಸರಾಕ್ಕೆ ಇಂದು ವಿಧ್ಯುಕ್ತ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಗಣ್ಯಾತಿಗಣ್ಯರು ನಿನ್ನೆಯೇ ಪಾರಂಪರಿಕ ನಗರಿಗೆ ಆಗಮಿಸಿದ್ದಾರೆ. ಜೊತೆಗೆ ಸಂಬಂಧಿಸಿದ ಸಚಿವರು ಶಾಸಕರು ಪರಿಶೀಲನೆ ನಡೆಸಿದ್ದು, ಎಲ್ಲರೂ ಕುತೂಹಲದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ಬೆಳಗ್ಗೆ ಸಮಯ 8.15ರಿಂದ 8.45ರೊಳಗಿನ ಶುಭ ತುಲಾ ಲಗ್ನದಲ್ಲಿ ಬೆಳ್ಳಿ ರಥದಲ್ಲಿರುವ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರೆಗೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.

ರತ್ನಖಚಿತ ಸಿಂಹಾಸನ

ಇಂದು ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಸಂಜೆ 7.30ಕ್ಕೆ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಕರುನಾಡ ವೈಭವ ನೃತ್ಯ ರೂಪಕ ನಡೆಯಲಿದೆ. ಉಳಿದಂತೆ ಅಕ್ಟೋಬರ್ 13ರವರೆಗೆ ಸಂಜೆ 6 ಗಂಟೆಯಿಂದ ರಾತ್ರಿ 9.30ರವರೆಗೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮಗಳ ಮಾಹಿತಿ:

ಶರನ್ನವರಾತ್ರಿಗೆ ಅರಮನೆ ಸಂಪೂರ್ಣ ಸಿದ್ದಗೊಂಡಿದೆ. ರಾಜಮನೆತನದವರು 10 ದಿನಗಳ ಕಾಲ ನಡೆಸುವ ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿಯ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆದಿವೆ.

ಮೊದಲ ದಿನದ ಖಾಸಗಿ ದರ್ಬಾರ್:

ನವರಾತ್ರಿಯ ಮೊದಲ ದಿನವಾದ ಇಂದು ಮುಂಜಾನೆ 4.30ರಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಬೆಳಗ್ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತ್ರವಿದೆ.

ಬೆಳಗ್ಗೆ 6 ರಿಂದ 6.11ರವರೆಗಿನ ಕನ್ಯಾ ಲಗ್ನದಲ್ಲಿ ದರ್ಬಾರ್ ಹಾಲ್​ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆಜೋಡಣೆ ನಡೆದಿದೆ. ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬೆಳಿಗ್ಗೆ 7.45ರಿಂದ 8.55ರ ತುಲಾ ಲಗ್ನದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಕಂಕಣಧಾರಣೆ ನಡೆಯುತ್ತದೆ.

ವಾಣಿವಿಲಾಸ ದೇವರ ಮನೆಯಲ್ಲಿ ತ್ರಿಶಿಕ ಕುಮಾರಿ ಒಡೆಯರ್ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 11.45ರಿಂದ 12.15ರ ನಡುವಿನ ಧನುರ್ ಲಗ್ನದಲ್ಲಿ ಯದುವೀರ್ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅರಮನೆಯ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ಬಿಜಯ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅಕ್ಟೋಬರ್ 14ರವರೆಗೆ ಖಾಸಗಿ ದರ್ಬಾರ್ ಜರುಗಲಿದೆ.

ಅಕ್ಟೋಬರ್ 12ರಂದು ಸರಸ್ವತಿ ಪೂಜೆ:

ಅಶ್ವಯುಜಾಸ ಶುಕ್ಲಪಕ್ಷದ ಸಪ್ತಮಿ ದಿನವಾದ ಅಕ್ಟೋಬರ್ 12ರಂದು ಬೆಳಗ್ಗೆ 10.57 ರಿಂದ 11.05ರವರೆಗೆ ಸಲ್ಲುವ ಧನುರ್ ಶುಭ ಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ವೀಣೆ, ವಿವಿಧ ಗ್ರಂಥಗಳನ್ನಿರಿಸಿ ಯದುವೀರ್ ಸರಸ್ವತಿ ಪೂಜೆ ನೆರೆವೇರಿಸಲಿದ್ದಾರೆ‌. ಅದೇ ದಿನ ಸಂಜೆ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ನೆರವೇರಲಿದೆ. ಅಕ್ಟೋಬರ್ 13ರಂದು ಬುಧವಾರ ದುರ್ಗಾಷ್ಟಮಿ ನೆರವೇರಲಿದೆ.

ಆಯುಧ ಪೂಜೆ ವಿಧಿ ವಿಧಾನ:

ಅಕ್ಟೋಬರ್ 14ರಂದು ಬೆಳಗ್ಗೆ 6ರಿಂದ ಹೋಮದ ಕೊಠಡಿಯಲ್ಲಿ ಚಂಡಿಹೋಮ ನಡೆಯಲಿದ್ದು, ಬೆಳಗ್ಗೆ 7.45ರಿಂದ 8ರವರೆಗೆ ತುಲಾ ಲಗ್ನದಲ್ಲಿ ಆಯುಧ ಪೂಜೆ ನಡೆಯಲಿದೆ. ಖಾಸ್ ಆಯುಧಗಳು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಡೆಗೆ ಕರೆದೊಯ್ಯಲಾಗುತ್ತದೆ. ಬೆಳಗ್ಗೆ 8.25ರಿಂದ 8.40ರೊಳಗೆ ಆಯುಧ ಮತ್ತು ಪಟ್ಟದ ಆನರ ಕಲ್ಯಾಣ ಮಂಟಪದ ಹೆಬ್ಬಾಗಿಲಿಗೆ ಪ್ರವೇಶಿಸುತ್ತವೆ.

ಮೈಸೂರು ಅರಮನೆಯ ಹೊರಭಾಗ

9 ಗಂಟೆಗೆ ಚಂಡೀಹೋಮದ ಪೂರ್ಣಾಹುತಿ ನೆರವೇರಲಿದ್ದು, 11.02ರಿಂದ 11.22ರವರೆಗೆ ಧನುರ್ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಅಂದು ಸಂಜೆ ಖಾಸಗಿ ದರ್ಬಾರ್ ನೆರವೇರಿದ ಬಳಿಕ ದರ್ಬಾರ್ ಹಾಲ್​ನಲ್ಲಿ ಸಿಂಹಾಸನದಿಂದ ಸಿಂಹದ ತಲೆಯನ್ನು ವಿಸರ್ಜಿಸಲಾಗುತ್ತದೆ. ಬಳಿಕ ದೇವರ ಮನೆಯಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣ ವಿಸರ್ಜಿಸಿದರೆ, ವಾಣಿವಿಲಾಸ ದೇವರ ಅರಮನೆಯಲ್ಲಿ ತ್ರಿಶಿಕ ಕುಮಾರಿ ಒಡೆಯರ್ ಅವರು ಕಂಕಣ ವಿಸರ್ಜಿಸಲಿದ್ದಾರೆ.

ಅಕ್ಟೋಬರ್ 15ರಂದು ಜಂಬೂಸವಾರಿ:

ಅಕ್ಟೋಬರ್ 15ರಂದು ದಸರೆಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಜಂಬೂಸವಾರಿ ನಡೆಯಲಿದ್ದು, ಅರಮನೆ ಬಲರಾಮ ದ್ವಾರದಲ್ಲಿ ಅಂದು ಸಂಜೆ 4.36ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಂದಿಧ್ವಜ ಪೂಜೆ ಸಲ್ಲಿಸಲಾಗುವುದು.

ನಂತರ ಅರಮನೆ ಒಳಆವರಣದಲ್ಲಿ ಸಂಜೆ 5ರಿಂದ 5.30ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇತರ ಗಣ್ಯರು ದಸರಾ ಜಂಬೂಸವಾರಿಯ ಮೆರವಣಿಗೆಗೆ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ‌ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆವಹಿಸಲಿದ್ದಾರೆ.

ABOUT THE AUTHOR

...view details