ಕರ್ನಾಟಕ

karnataka

ಕಾಲೇಜು ವಿದ್ಯಾರ್ಥಿಗಳ 25 ಲಕ್ಷ ರೂ. ಶುಲ್ಕ ಕದ್ದು ಲೇಡಿ ಅಸಿಸ್ಟೆಂಟ್ ಪ್ರೊಫೆಸರ್ ಪರಾರಿ​ ಆರೋಪ: ಪ್ರಕರಣ ದಾಖಲು

Mysore crime: ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೂರು ಸಹ ದಾಖಲಾಗಿದೆ.

By

Published : Jul 25, 2023, 7:27 PM IST

Published : Jul 25, 2023, 7:27 PM IST

ಅಸಿಸ್ಟೆಂಟ್ ಪ್ರೊಫೆಸರ್ ಪರಾರಿ
ಅಸಿಸ್ಟೆಂಟ್ ಪ್ರೊಫೆಸರ್ ಪರಾರಿ

ಮೈಸೂರು :ಕಾಲೇಜಿನ ವಿದ್ಯಾರ್ಥಿಗಳಿಂದ ಸುಮಾರು 25 ಲಕ್ಷ ರೂ. ಶುಲ್ಕ ವಸೂಲಿ ಮಾಡಿ ಅದನ್ನು ಆಡಳಿತ ಮಂಡಳಿಗೆ ನೀಡದೇ ಅಸಿಸ್ಟೆಂಟ್ ಪ್ರೊಫೆಸರ್​ಯೊಬ್ಬರು ಪರಾರಿಯಾಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಬನ್ನೂರು ರಸ್ತೆಯಲ್ಲಿ ಇರುವ ಪ್ರತಿಷ್ಠಿತ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹರ್ಷಿತಾ ಪರಾರಿಯಾದವರು.

ಪರೀಕ್ಷೆಯ ಹೊಸ್ತಿಲಲ್ಲಿ ಹರ್ಷಿತಾ ಅವರು ಆಡಳಿತ ಮಂಡಳಿಗೆ ಶುಲ್ಕದ ಹಣ ನೀಡದ ಪರಿಣಾಮ ಆಡಳಿತ ಮಂಡಳಿಯವರು ಶುಲ್ಕ ಪಾವತಿಸುವವರೆಗೂ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ವಿಚಲಿತರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಹ ಆಕೆಯ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಅಸಿಸ್ಟೆಂಟ್ ಪ್ರೊಫೆಸರ್​ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಪ್ರಕರಣ ಹಿನ್ನೆಲೆ : 2022-23ನೇ ಸಾಲಿನ ಕಾಲೇಜು ಶುಲ್ಕವನ್ನು ವಿದ್ಯಾರ್ಥಿಗಳು ಕಳೆದ ಸೆಪ್ಟೆಂಬರ್​ನಲ್ಲಿಯೇ ಪಾವತಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಆದ ಹರ್ಷಿತಾ ಎಂಬುವವರು ಶುಲ್ಕವನ್ನು ನನ್ನಲ್ಲಿಯೇ ಪಾವತಿಸಿ ಎಂದು ವಿದ್ಯಾರ್ಥಿಗಳನ್ನು ಕೇಳುತ್ತಿದ್ದರು. ಜೊತೆಗೆ ಕಾಲೇಜಿನ ಆ ವಿಭಾಗದ ಇತರ ಪ್ರೊಫೆಸರ್​ಗಳು ಸಹ ಶುಲ್ಕವನ್ನು ಅವರಿಗೆ ಪಾವತಿಸಿ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಜೊತೆಗೆ ವಿದ್ಯಾರ್ಥಿಗಳ ಮೊಬೈಲ್​ಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :ಬೆಂಗಳೂರು: ಖಾಸಗಿ ಕಂಪನಿ ಸಾಫ್ಟ್‌ವೇರ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಗದು ಹಾಗೂ ಆನ್ಲೈನ್ ಮೂಲಕ ಶುಲ್ಕವನ್ನು ಮಹಿಳಾ ಪ್ರೊಪೆಸರ್​​ ಅವರಿಗೆ ಪಾವತಿಸಿದ್ದು, ಅದಕ್ಕೆ ಅವರು ರಶೀದಿ ಸಹ ನೀಡಿದ್ದಾರೆ. ಆದರೆ, ಡಿಸೆಂಬರ್​ನಲ್ಲಿ ಸಂಗ್ರಹಿಸಿದ ತಲಾ 770 ರೂ. ಪರೀಕ್ಷಾ ಶುಲ್ಕಕ್ಕೆ ಯಾವುದೇ ರಶೀದಿ ನೀಡಿರಲಿಲ್ಲ. ಬಳಿಕ ಶುಲ್ಕ ವಸೂಲಿ ಮಾಡಿದ ಹಣವನ್ನು ಆಡಳಿತ ಮಂಡಳಿಗೆ ನೀಡದ ಹರ್ಷಿತಾ ದುರುಪಯೋಗ ಪಡಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ.

ಎಟಿಎಂಇ ಕಾಲೇಜಿನ ಛೆರ್ಮನ್ ಹೇಳಿದ್ದೇನು? :ಎಟಿಎಂಇ ಕಾಲೇಜಿನ ಅಧ್ಯಕ್ಷ ಅರುಣ್ ಕುಮಾರ್ ವಿಷಯ ತಿಳಿಯುತ್ತಿದ್ದಂತೆಯೇ ಆಂತರಿಕ ವಿಚಾರಣೆ ನಡೆಸಿದ್ದು, ಈ ಕುರಿತು ಮಾಹಿತಿ ನೀಡಿರುವ ಅವರು, ಕಾಲೇಜಿನ ಶುಲ್ಕ ವಸೂಲಿ ಮಾಡಲು ಯಾರಿಗೂ ಜವಾಬ್ದಾರಿ ನೀಡಿಲ್ಲ. ಅನಧಿಕೃತವಾಗಿ ಶುಲ್ಕವನ್ನು ಪಾವತಿಸಲಾಗಿದ್ದು, ಎಷ್ಟು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಕಲೆ ಹಾಕಲಾಗಿದೆ. ಸುಮಾರು 25 ಲಕ್ಷ ರೂ. ಗಳನ್ನು ಮಹಿಳಾ ಅಸಿಸ್ಟೆಂಟ್​ ಪ್ರೊಪೆಸರ್​​ ಅವರು ಸಂಗ್ರಹಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಕಾಲೇಜಿನ ಆಡಳಿತ ಮಂಡಳಿಯಿಂದಲೂ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರು: ರಸ್ತೆ ಬದಿಯಲ್ಲಿ ಸಿಕ್ಕ 2 ಸಾವಿರ ಮುಖ ಬೆಲೆಯ ಗರಿ ಗರಿ ನೋಟುಗಳು.. ಹತ್ತಿರ ಹೋಗಿ ನೋಡಿದಾಗ ಗೊತ್ತಾಯ್ತು ಅಸಲಿಯತ್ತು!

ABOUT THE AUTHOR

...view details