ಕರ್ನಾಟಕ

karnataka

ETV Bharat / state

ಮೈಸೂರು: ವಾರ್ಡ್ ಸಭೆಯಲ್ಲೇ 'ಮಾಂಗಲ್ಯಂ ತಂತುನಾನೇನ'..ಯುವ ಪ್ರೇಮಿಗಳ ಮದುವೆ ಮಾಡಿಸಿದ ಪಿಡಿಓ!

ಹರದನಹಳ್ಳಿಯವರಾದ ಈ ಇಬ್ಬರು ಪ್ರೇಮಿಗಳು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಮದುವೆಗೆ ಇಬ್ಬರ ಮನೆಯಲ್ಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ಆದ್ರೆ ಇಂದು ಯುವಜೋಡಿ ಒಂದಾಗಿದೆ. ಇದಕ್ಕೆ ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಸಾಕ್ಷಿಯಾಗಿದ್ದಾರೆ.

By

Published : Jan 24, 2022, 5:10 PM IST

Updated : Jan 24, 2022, 7:40 PM IST

ಯುವ ಪ್ರೇಮಿಗಳ ಮದುವೆ ಮಾಡಿಸಿದ ಪಿಡಿಓ
ಯುವ ಪ್ರೇಮಿಗಳ ಮದುವೆ ಮಾಡಿಸಿದ ಪಿಡಿಓ

ಮೈಸೂರು : ಮದುವೆಗೆ ಮನೆಯವರು ಒಪ್ಪಿಗೆ ನೀಡದ್ದಕ್ಕೆ ದಿಕ್ಕು ತೋಚದಂತಾಗಿದ್ದ ಯುವ ಪ್ರೇಮಿಗಳ ಬಾಳಿಗೆ ಇಲ್ಲೋರ್ವ ಪಿಡಿಓ ಬೆಳಕಾಗಿದ್ದಾರೆ. ಈ ಯುವ ಜೋಡಿಯ ಪೋಷಕರನ್ನು ಮದುವೆ ಮಾಡಿಕೊಡುವಂತೆ ಒಪ್ಪಿಸಿ, ಗ್ರಾಮ ಪಂಚಾಯತ್​ನಲ್ಲಿ ಸದಸ್ಯರ ಸಮ್ಮುಖದಲ್ಲಿ ಯುವ ಪ್ರೇಮಿಗಳ ಮದುವೆ ಮಾಡಿಸಿದ್ದಾರೆ. ಈ ವಿಶಿಷ್ಟ ಮದುವೆಗೆ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಯತ್​ ಸಾಕ್ಷಿಯಾಗಿದೆ.‌

ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯತ್​ ಕಚೇರಿಯಲ್ಲಿಂದು ವಾರ್ಡ್​ಗಳ ಕುಂದುಕೊರತೆಗಳನ್ನ ಬಗೆಹರಿಸಲು ಸಭೆ ಕರೆಯಲಾಗಿತ್ತು. ಆದರೆ ಪಿಡಿಓ ನೆರವಿನಿಂದ ಅಕ್ಷರಶಃ ಹರದನಹಳ್ಳಿ ಗ್ರಾಮ ಪಂಚಾಯತ್​ ಮದುವೆ ಮಂಟಪವಾಯ್ತು.

ಯುವ ಪ್ರೇಮಿಗಳ ಮದುವೆ ಮಾಡಿಸಿದ ಪಿಡಿಓ

ಪಿಡಿಓ ಮಹಾದೇವಸ್ವಾಮಿ ಅವರು ಯುವ ಪ್ರೇಮಿಗಳಿಗೆ ಬೆಂಬಲವಾಗಿ ನಿಂತು, ಅವರ ಪೋಷಕರನ್ನ ಮದುವೆಗೆ ಒಪ್ಪಿಸಿದರು. ಬಳಿಕ ವಾರ್ಡ್ ಸದಸ್ಯರ ಸಮ್ಮುಖದಲ್ಲೇ ಹರದನಹಳ್ಳಿಯ ಪ್ರೇಮಿಗಳಾದ ಬಸವರಾಜು(24) ಹಾಗೂ ಸುಚಿತ್ರ(19) ಅವರಿಗೆ ಮದುವೆ ಮಾಡಿಸಿದ್ದಾರೆ.

ಹರದನಹಳ್ಳಿಯವರಾದ ಈ ಇಬ್ಬರು ಪ್ರೇಮಿಗಳು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಮದುವೆಗೆ ಇಬ್ಬರ ಮನೆಯಲ್ಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಎರಡೂ ಮನೆಗಳ ಮಧ್ಯೆ ಗಲಾಟೆಯೂ ನಡೆದು, ಪೊಲೀಸ್ ಠಾಣೆ ಮೆಟ್ಟಿಲೂ ಸಹ ಏರಿದ್ದರು. ಹೀಗಾಗಿ ಈ ಜೋಡಿಗೆ ಮದುವೆಯಾಗಲು ಸಾಧ್ಯವೇ ಆಗಿರಲಿಲ್ಲ.

ಇಂದು ವಾರ್ಡ್ ಸಭೆ ನಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತ್​ ಕಚೇರಿಯ ಪಕ್ಕದ ಮನೆಯಲ್ಲೇ ಪ್ರೇಮಿಗಳ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಎರಡೂ ಮನೆಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗ್ರಾಮದ ಮುಖಂಡರು ದಂಡ ಕಟ್ಟಿಸಿಕೊಂಡು ಮದುವೆ ಮಾಡಿಸಲು ತೀರ್ಮಾನಿಸಿದ್ದರು. ಗಲಾಟೆ ಶಬ್ಧ ಕೇಳಿದ ಪಿಡಿಓ ಮಹಾದೇವಸ್ವಾಮಿ ಸ್ಥಳಕ್ಕೆ ಬಂದು ಜಗಳದ ಕಾರಣ ತಿಳಿದುಕೊಂಡಿದ್ದಾರೆ.

ನಂತರ ಒಪ್ಪಿಗೆಗೆ ದಂಡ ಹಾಕುವುದು ಕಾನೂನಿಗೆ ವಿರೋಧ ಎಂದು ಮಹಾದೇವಸ್ವಾಮಿ ಮುಖಂಡರಿಗೆ ತಿಳಿ ಹೇಳಿ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದೆಂದು ಸಲಹೆ ನೀಡಿದ್ದಾರೆ. ಪ್ರೇಮಿಗಳನ್ನ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕರೆತಂದು ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿ ಯುವ ಪ್ರೇಮಿಗಳ ಬಾಳಿಗೆ ಬೆಳಕಾಗಿದ್ದಾರೆ.

ಇದರ ಜೊತೆಗೆ ಪ್ರೇಮಿಗಳ ಪೋಷಕರನ್ನೂ ಸಹ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದ್ದು ವಿಶೇಷ. ನೂತನ ವಧು-ವರನಿಗೆ ವಾರ್ಡ್ ಸದಸ್ಯರು ಸೇರಿದಂತೆ ಗ್ರಾಮಸ್ಥರು ಶುಭಕೋರಿ ಆಶೀರ್ವದಿಸಿದ್ದಾರೆ.

ಒಟ್ಟಾರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದ ಜೋಡಿಗೆ ಬೆನ್ನೆಲುಬಾಗಿ ನಿಂತು ಪಿಡಿಓ ಮಹಾದೇವಸ್ವಾಮಿ ಮದುವೆ ಮಾಡಿಸಿದ್ದಾರೆ. ಯುವ ಜೋಡಿ ಹಾಲು-ಜೇನು ಒಂದಾದ ಹಾಗೆ ಸುಖವಾಗಿ ಬಾಳಲಿ ಎಂದು ಹಾರೈಸೋಣ..

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 24, 2022, 7:40 PM IST

For All Latest Updates

TAGGED:

ABOUT THE AUTHOR

...view details