ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆ ಇಂದಿನಿಂದ ಪೂರ್ಣ ಪ್ರಮಾಣದ ತಾಲೀಮು ಆರಂಭಿಸಿದೆ.
ನಾಡ ಹಬ್ಬ ದಸರಾ ಉದ್ಘಾಟನೆಗೆ ಕೇವಲ 19 ದಿನ ಬಾಕಿ ಇದ್ದು, ಜಂಬೂ ಸವಾರಿಯ ದಿನದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಯ ಒಳಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯನ್ನು ಹೊತ್ತು ಸಾಗುವ ಅರ್ಜುನ ನೇತೃತ್ವದ 11 ಆನೆಗಳಿರುವ ಗಜಪಡೆ ಇಂದು ಬೆಳಿಗ್ಗೆ ತಾಲೀಮು ನಡೆಸಿತು. ಅಂಬಾರಿ ಹೊರುವ ಅರ್ಜುನ ಅರಮನೆಯಿಂದ 350 ಕೆಜಿ ತೂಕದ ಮರಳು ಮೂಟೆಯನ್ನು ಹೊತ್ತು ಸಾಗಿತು. ಅರ್ಜುನನ ಹಿಂದೆ ಇತರ 10 ಆನೆಗಳು ರಾಜಬೀದಿಯಲ್ಲಿ ಘಂಟೆ ಬಾರಿಸುತ್ತ 5 ಕಿ.ಮೀ. ದೂರ ಬನ್ನಿ ಮಂಟಪದವರೆಗೆ ಸಾಗಿದವು. ಈ ಬಾರಿ ದಸರಾದಲ್ಲಿ 2 ತಂಡಗಳಲ್ಲಿ13 ಆನೆಗಳು ಬಂದಿದ್ದು, ಅಭಿಮನ್ಯು ಆನೆ ಬಂಡೀಪುರಕ್ಕೆ ಹುಲಿ ಕಾರ್ಯಾಚರಣೆಗಾಗಿ ತೆರಳಿದೆ. ಇನ್ನು ಅನಾರೋಗ್ಯದ ನಿಮಿತ್ತ ಗೋಪಿ ಅನೆಗೆ ವಿಶ್ರಾಂತಿ ನೀಡಲಾಗಿದ್ದು, ಇಂದಿನ ತಾಲೀಮಿನಲ್ಲಿ 11 ಆನೆಗಳಷ್ಟೇ ಭಾಗವಹಿಸಿದ್ದವು.
ಗಜಪಡೆಯಿಂದ ಪೂರ್ಣ ಪ್ರಮಾಣದ ತಾಲೀಮು
ಈಶ್ವರ ಆನೆಯ ಬಗ್ಗೆ ಡಿಸಿಎಫ್ ಹೇಳಿದ್ದೇನು:
ಈಶ್ವರ ಆನೆಯನ್ನು ವಾಪಸ್ ಕಳುಹಿಸಬೇಕೆಂದು ಮೇಲಾಧಿಕಾರಿಗಳು ಹಾಗೂ ಸಚಿವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾವುತರಾಗಲಿ ಅಥವಾ ಪಶು ವೈದ್ಯರಾಗಲಿ ಈಶ್ವರ ಅನೆಯ ಗಲಾಟೆ ಹಾಗೂ ಸಮಸ್ಯೆಯ ಬಗ್ಗೆ ಹೇಳುತ್ತಿಲ್ಲ. ಆದರೂ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತೇವೆ. ಸ್ವಲ್ಪ ದಿನ ತಾಲೀಮಿನಲ್ಲಿ ಬಳಸಿಕೊಳ್ಳುತ್ತೇವೆ. ಏಕೆಂದರೆ ಭವಿಷ್ಯದಲ್ಲಿ 2ನೇ ಹಂತದ ಆನೆಗಳನ್ನು ತಾಲೀಮಿನಲ್ಲಿ ಪಳಗಿಸಿದರೆ ಮುಂದಿನ ದಿನಗಳಲ್ಲಿ ದಸರಾಗೆ ಈ ಆನೆಗಳು ಭಾಗವಹಿಸಬಹುದು ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ರು.