ಕರ್ನಾಟಕ

karnataka

By

Published : Jun 30, 2023, 12:28 PM IST

ETV Bharat / state

ಸೋಲಾರ್ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ... ಸೊಪ್ಪು ತಿನ್ನಲು ಸೊಂಡಿಲು ಹಾಕಿದ ಕಾಡಾನೆ ಸಾವು

ಜಮೀನಿನಲ್ಲಿ ಸೋಲಾರ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದ್ದು, ಈ ಬೇಲಿಯನ್ನು ಸ್ಪರ್ಶಸಿರುವ ಕಾಡಾನೆ ವಿದ್ಯುತ್​ ಹರಿದು ಸಾವನ್ನಪ್ಪಿದೆ.

ಕಾಡಾನೆ ಸಾವು
ಕಾಡಾನೆ ಸಾವು

ಮೈಸೂರು:ಜಮೀನೊಂದರಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿಯನ್ನು ಸ್ಪರ್ಶಿಸಿ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ ಬಿ.ಕುಪ್ಪೆ ಬಳಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಆನೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಸಂಬಂಧ ಅಂತರಸಂತೆ ಪೋಲಿಸ್ ಠಾಣೆಯಲ್ಲಿ ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಡಿ ಬಿ.ಕುಪ್ಪೆ ಅರಣ್ಯ ವಲಯದ ಬಳಿ ಅದೇ ಗ್ರಾಮದ ಮೈಸೂರು-ಮಾನಂದವಾಡಿ ಹೆದ್ದಾರಿಯ ಪಕ್ಕದಲ್ಲಿದ್ದ ಉದಯ್ ಎಂಬುವವರು ತಮ್ಮ ಜಮೀನಿನಲ್ಲಿ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಿದ್ದು, ಆ ಸೋಲಾರ್ ಬೇಲಿಗೆ ಅಕ್ರಮವಾಗಿ ತಮ್ಮ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಇದರಿಂದ ಆ‌ನೆಯು ನಿನ್ನೆ(ಗುರುವಾರ) ಆ ಸೋಲಾರ್ ತಂತಿಯ ವಿದ್ಯುತ್​ ತಗುಲಿ ಸಾವನ್ನಪ್ಪಿದೆ.

ವನ್ಯಜೀವಿಗಳ ಹಾವಳಿ ತಡೆಯಲು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಉದಯ್ (65) ಎಂಬುವವರು ಜಮೀನಿನಲ್ಲಿ ಸೋಲಾರ್ ಬೇಲಿಯನ್ನು ಹಾಕಿಸಿದ್ದರು. ನಿನ್ನೆ ರಾತ್ರಿ ಅಕ್ರಮವಾಗಿ ತಮ್ಮ ಮನೆಯಿಂದ ವಿದ್ಯುತ್ ಸಂಪರ್ಕವನ್ನು ಆ ಬೇಲಿಗೆ ನೀಡಿದ್ದಾರೆ. ಗ್ರಹಚಾರಕ್ಕೆ ಕಾಡಾನೆಯು ರಾತ್ರಿ ಸೋಲಾರ್ ಮೇಲೆ ಬೆಳೆದಿದ್ದ ಸೊಪ್ಪು ತಿನ್ನಲು ತನ್ನ ಸೊಂಡಿಲನ್ನು ಹಾಕಿದೆ. ಇದರಿಂದ ಕೂಡಲೇ ವಿದ್ಯುತ್ ಸ್ಪರ್ಶಕ್ಕೀಡಾಗಿ 35 ವರ್ಷದ ಗಂಡಾನೆ ಸಾವನ್ನಪ್ಪಿದೆ.

ಬೆಳಗಿನ ಜಾವ ಅರಣ್ಯ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾದ ಬಳಿಕ, ಆ ರಸ್ತೆಯಲ್ಲಿ ಚಲಿಸುತ್ತಿದ್ದ ಸಾರ್ವಜನಿಕರು, ಆನೆಯ ಮೃತ ದೇಹ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಮೃತಪಟ್ಟಿರುವ ಪ್ರದೇಶ ಮತ್ತು ಕಂದಾಯ ಜಮೀನಾಗಿರುವುದರಿಂದ ಮರಣೋತ್ತರ ಪರೀಕ್ಷೆಗೆ ಮೃತ ಆನೆಯನ್ನು ಸಾಗಿಸಿದರು.

ತಲೆ ಮರೆಸಿಕೊಂಡಿರುವ ಆರೋಪಿ : ತಮ್ಮ ಜಮೀನಿನ ಬಳಿ ಆನೆಯೊಂದು ಸೋಲಾರ್ ವಿದ್ಯುತ್​ಗೆ ಸಿಲುಕಿ ಸಾವನ್ನಪ್ಪಿದ ಘಟನೆ ತಿಳಿದ ಜಮೀನಿನ ಮಾಲೀಕ ಉದಯ್ (65) ಎಂಬಾತ ತಲೆ ಮರೆಸಿಕೊಂಡಿದ್ದಾನೆ. ವನ್ಯಜೀವಿ ಕಾಯ್ದೆ ಅನುಸಾರ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಚೆಸ್ಕಾಂ ಅಧಿಕಾರಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಜೊತೆಗೆ ಆರೋಪಿ ಉದಯ್ ಕುಟುಂಬವನ್ನು ಬಂಧಿಸುವಂತೆ ದೂರಿನಲ್ಲಿ ತಿಳಿಸಿದ್ದು, ಪೋಲಿಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಮೇಟಿಕೊಪ್ಪ ವನ್ಯಜೀವಿ ಉಪವಿಭಾಗದ ಎಸಿಎಫ್ ಕೆ ಎನ್.ರಂಗಸ್ವಾಮಿ, ಪಶುವೈದ್ಯಾಧಿಕಾರಿ ಡಾ.ರಮೇಶ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ರೈತ ಸಾವನ್ನಪ್ಪಿದ ಕೆಲವೇ ಗಂಟೆಯಲ್ಲಿ ಪ್ರಾಣಬಿಟ್ಟ ಎತ್ತು... ಮಮ್ಮಲ ಮರುಗಿದ ಗ್ರಾಮಸ್ಥರು

ABOUT THE AUTHOR

...view details