ಕರ್ನಾಟಕ

karnataka

ETV Bharat / state

ಅಶ್ವತ್ಥಾಮ, ಲಕ್ಷ್ಮಿ, ಧನಂಜಯ ಶಬ್ದಕ್ಕೆ ಬೆಚ್ಚಿದ್ರೆ,ಕ್ಯಾಪ್ಟನ್ ಅಭಿಮನ್ಯು ಮಾತ್ರ ಗಂಭೀರ

ಮೈಸೂರು ದಸರಾಗೆ ಗಜಪಡೆ ತಾಲೀಮು ಮುಂದುವರಿಸಿದ್ದು, ಇಂದು ನಡೆದ ಸಿಡಿಮದ್ದು ತಾಲೀಮು ವೇಳೆ ಶಬ್ಧ ಕೇಳಿ ಅಶ್ವತ್ಥಾಮ ಹಾಗೂ ಲಕ್ಷ್ಮೀ ಆನೆಗಳು ಬೆಚ್ಚಿಬಿದ್ದಿವೆ. ಆದರೆ ಅಂಬಾರಿ ಹೊರಲಿರುವ ಕ್ಯಾಪ್ಟನ್​ ಅಭಿಮನ್ಯು ಮಾತ್ರ ಒಂಚೂರು ಅಲುಗಾಡದೇ ತನ್ನ ಗಾಂಭೀರ್ಯತೆ ಪ್ರದರ್ಶಿಸಿದ್ದಾನೆ.

By

Published : Sep 30, 2021, 10:09 PM IST

Updated : Sep 30, 2021, 10:49 PM IST

mysore dasara  2021
ಗಜಪಡೆ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಗಜಪಡೆ ಸನ್ನದ್ದವಾಗಿದ್ದು, ಗುರುವಾರ ಸಿಡಿಮದ್ದು ತಾಲೀಮು ನಡೆಸಲಾಯಿತು. ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಸಿಡಿಮದ್ದು ಶಬ್ದಕ್ಕೆ ಕೊಂಚವೂ ಅಲುಗಾಡದೆ ಗಾಂಭೀರ್ಯ ತೋರಿದ್ದಾನೆ.

ಸಿಡಿಮದ್ದು ತಾಲೀಮು ನಡೆಸಿದ ಗಜಪಡೆ

ಸಾಂಸ್ಕೃತಿಕ ನಗರಿ ಮೈಸೂರು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಗೆ ಸಜ್ಜಾಗುತ್ತಿದೆ. ಜಂಬೂ ಸವಾರಿಗಾಗಿ ಗಜಪಡೆಯೂ ರೆಡಿ ಆಗುತ್ತಿವೆ. ಈಗಾಗಲೇ ಕಾಲ್ನಡಿಗೆ, ಭಾರ ಹೊರುವ ತಾಲೀಮು ನಡೆಸಿ ಸೈ ಎನಿಸಿಕೊಂಡಿರುವ ಗಜಪಡೆ, ಈಗ ಮೊದಲ ಹಂತದ ಕುಶಾಲತೋಪು ತಾಲೀಮನ್ನು ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಜಾಗದಲ್ಲಿ ಯಶಸ್ವಿಯಾಗಿ ಮುಗಿಸಿವೆ.

7 ಫಿರಂಗಿ ಗಾಡಿಗಳನ್ನು ಮೂರು ಸುತ್ತಿನಲ್ಲಿ 21 ಸಿಡಿಮದ್ದು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಯನ್ನು ಸನ್ನದ್ಧಗೊಳಿಸಲಾಯಿತು. ಸಿಡಿಮದ್ದಿನ ದೊಡ್ಡ ಶಬ್ದಕ್ಕೆ ಕ್ಯಾಪ್ಟನ್ ಅಭಿಮನ್ಯು ಕೊಂಚವೂ ಅಲುಗಾಡದೆ ಗಾಂಭೀರ್ಯತೆ ತೋರಿದರೆ, ಧನಂಜಯ, ಹೊಸದಾಗಿ ಬಂದಿರುವ ಅಶ್ವತ್ಥಾಮ ಹಾಗೂ ಲಕ್ಷ್ಮೀ ಆನೆಗಳು ಬೆದರಿ ಘರ್ಜಿಸಿದವು.

ಸಿಡಿಮದ್ದು ತಾಲೀಮುನಲ್ಲಿ ಪಾಲ್ಗೊಂಡು ಅಶ್ವಾರೋಹಿ ಪಡೆ ಸಿದ್ಧತೆಯನ್ನು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವೀಕ್ಷಣೆ ಮಾಡಿದರು. ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ದಸರಾ ಹಿನ್ನೆಲೆ ವಿದೇಶಿಗರು ವಾಸವಾಗಿರುವ ಸ್ಥಳಗಳು, ಪ್ರವಾಸಿತಾಣಗಳು ಹಾಗೂ ಪ್ರವಾಸಿಗರ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಜತೆಗೆ ಮೈಸೂರು ನಗರದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲು ರಾತ್ರಿ ಗಸ್ತು ಹೆಚ್ಚಿಸಲಾಗಿದೆ.

ಇದನ್ನೂ ಓದಿ:ಮೈಸೂರು ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಮ್ಮತಿ

ಗಜಪಡೆಯೊಂದಿಗೆ ನಾಡಿಗೆ ಬಂದಿರುವ ಕಾಡಿನ ಮಕ್ಕಳು, ವೈದ್ಯಕೀಯ ತಪಾಸಣೆಗೆ ಒಳಪಟ್ಟರು. ಮಾವುತರು ಮತ್ತು ಕಾವಾಡಿಗಳು ಬಿಪಿ, ಶುಗರ್, ಜನರಲ್ ಚೆಕಪ್ ಮಾಡಿಸಿಕೊಂಡರು.

ಉಳಿದಂತೆ ಅಕ್ಟೋಬರ್ 5 ಮತ್ತು 8 ರಂದು ಎರಡು ಹಾಗೂ ಮೂರನೇ ಹಂತಗಳಲ್ಲಿ ಕುಶಾಲತೋಪು ತಾಲೀಮು ನಡೆಯಲಿದೆ. ಈ ಮೂಲಕ ಗಜಪಡೆ ಜಂಬೂಸವಾರಿಗೆ ಸಜ್ಜಾಗುತ್ತಿವೆ.

Last Updated : Sep 30, 2021, 10:49 PM IST

ABOUT THE AUTHOR

...view details