ಮಂಡ್ಯ: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ಸುರೇಶ್ ಗೌಡ ಅಂಬರೀಶ್ ಪತ್ನಿ ಸುಮಲತಾ ವಿರುದ್ಧ ಹರಿಹಾಯ್ದರು.
ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾರಂಭದಲ್ಲಿ ವಾಗ್ದಾಳಿ ಮಾಡಿದ ಶ್ರೀಕಂಠೇಗೌಡ, ಸುಮಲತಾ ವಿರುದ್ಧ ಕಿಡಿಕಾರಿದರು. ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿ ಇಲ್ಲ. ಈಗ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡೋರೆ ರಾಜಕೀಯಕ್ಕೆ ಬಂದಿದ್ದಾರೆ. ಜಿಲ್ಲೆಯಲ್ಲಿ ಶಾಸಕರಾಗಿ, ಸಂಸದರಾಗಿ ಕೇಂದ್ರ ಸಚಿವರಾಗಿದ್ದವರ ಕುಟುಂಬ ಈಗ ರಾಜಕೀಯಕ್ಕೆ ಬರುತ್ತಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಈಗ ನಿಖಿಲ್ ಸ್ಪರ್ಧೆಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಕುಮಾರಣ್ಣ ಮತ್ತು ದೇವೇಗೌಡ್ರು ಬಿಟ್ರೆ ಯಾರ ಆಟವು ನಡೆಯೋದಿಲ್ಲ ಎಂದರು.
ಶಾಸಕ ಸುರೇಶ್ ಗೌಡ ಮಾತನಾಡಿ, ನಮ್ಮ ಮಿತ್ರ ಪಕ್ಷದ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಕ್ಷೇತ್ರದಲ್ಲಿ ಅಭ್ಯರ್ಥಿ ಸಿಕ್ಕಿಲ್ಲ. ಬೇರೆ ಯಾರನ್ನೋ ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ. ಭಾವೋದ್ವೇಗಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ಸುರೇಶ್ ಗೌಡ ರಾಜ್ಯದ ಬಜೆಟ್ ಮಂಡ್ಯ ಬಜೆಟ್ ಅನ್ನೋ ಇವರು ಈಗ ಮಂಡ್ಯ ಕ್ಷೇತ್ರದ ಮೇಲೆ ಪ್ರೀತಿ ಇಟ್ಟಿದ್ದಾರೆ. 2004ರಿಂದ ಆಗಾಧ ಅಭಿವೃದ್ಧಿ ಕೆಲಸಗಳನ್ನು ಸಿಎಂ ಕುಮಾರಸ್ವಾಮಿ ಮಾಡಿದ್ದಾರೆ. ದೇವರ ಅನುಗ್ರಹದಿಂದ ಇನ್ನೂ 5 ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರಬೇಕು. ಹಾಗಾದ್ರೆ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳುವಂತಿಲ್ಲ. ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಸಿಎಂ ಕುಮಾರಸ್ವಾಮಿ ಮಾಡ್ತಾರೆ. ಬೂತ್ ಮಟ್ಟಕ್ಕೆ ಇಳಿದು ನಿಮ್ಮ ಜೊತೆ ಇದ್ದು ನಿಖಿಲ್ ಗೆಲುವಿಗೆ ಸ್ಪಂದಿಸುತ್ತೇವೆ ಎಂದರು.
ಮಂಡ್ಯದಲ್ಲಿ ಯಾವುದೇ ಕೆಲಸ ಮಾಡಲೂ ಸಿಎಂ ಬದ್ಧರಾಗಿದ್ದಾರೆ. ಸೈನಿಕರ ಹೋರಾಟವನ್ನು ಯಾವ ಪಕ್ಷ ಅವರ ಪರ ಚುನಾವಣೆಗೆ ಬಳಸಿಕೊಳ್ಳುತ್ತಿದೆ ಅಂತಾ ಗೊತ್ತಿದೆ. ಕೋಟ್ಯಂತರ ರೂ. ಹಣ ಬರುತ್ತೆ ಅಂತಾ ಹೇಳಿದ್ದ ಬಿಜೆಪಿ ಏನು ಮಾಡಿದೆ. ಮೋದಿ ಬರೀ ಭಾಷಣಕಾರ. ಯಾವುದೇ ಕೆಲಸ ಮಾಡಲ್ಲ. ಅದೇ ಅವ್ರಿಗೆ ಬಂಡವಾಳ ಎಂದು ಲೇವಡಿ ಮಾಡಿದರು.
ರಮ್ಯಾ ಚುನಾವಣೆಗೆ ನಿಂತಾಗ ಯಾರು ಯಾರ ಪರವಾಗಿ ಕೆಲ್ಸ ಮಾಡಿದ್ದಾರೆ ಅಂತಾ ಗೊತ್ತಿದೆ. ನಿಖಿಲ್ ಕುಮಾರಸ್ವಾಮಿ ಪರ ಅಪಪ್ರಚಾರ ಮಾಡ್ತಿದ್ದಾರೆ. ನಾವು ಅವ್ರನ್ನ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಕರೆದು ತಂದಿಲ್ಲ. ಪಕ್ಕದ ಹಾಸನದಿಂದ ಕರೆ ತಂದಿದ್ದೇವೆ ಎನ್ನೋ ಮೂಲಕ ಪರೋಕ್ಷವಾಗಿ ಸುಮಲತಾ ಅವರ ಆಂಧ್ರ ಮೂಲದ ಬಗ್ಗೆ ಪ್ರಸ್ತಾಪಿಸಿದರು.