ಕರ್ನಾಟಕ

karnataka

ಮಂಡ್ಯ: ಖಾಲಿ ಕೊಡ ಹಿಡಿದು ಕಾವೇರಿ ನೀರಿಗಾಗಿ ರೈತರ ಹೋರಾಟ

By ETV Bharat Karnataka Team

Published : Oct 12, 2023, 7:35 PM IST

Updated : Oct 12, 2023, 8:42 PM IST

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಹೇಳಿದರು.

farmers fight continues again
ಮತ್ತೆ ಮುಂದುವರಿದ ಅನ್ನದಾತನ ಹೋರಾಟ

ಖಾಲಿ ಕೊಡ ಹಿಡಿದು ಕಾವೇರಿ ನೀರಿಗಾಗಿ ರೈತರ ಹೋರಾಟ

ಮಂಡ್ಯ:ಕಾವೇರಿ ನೀರಿಗಾಗಿಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಮುಂದಿನ ಹದಿನೈದು ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಬುಧವಾರ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ಇದರಿಂದ ರೊಚ್ಚಿಗೆದ್ದ ಅನ್ನದಾತರು ಹೋರಾಟ ಮುಂದುವರೆಸಿದ್ದಾರೆ.

ಇಂದು ರೈತರು ಹಾಗೂ ಕನ್ನಡ ಸೇನೆ ಕಾರ್ಯಕರ್ತರು ಖಾಲಿ ಕೊಡ ಹಿಡಿದು ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಯಾವುದೇ ಆದೇಶ ಬಂದರೂ ಸರ್ಕಾರ ನೀರು ಬಿಡಬಾರದು. ಈಗ ಬಿಡುತ್ತಿರುವ ನೀರನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿದರಲ್ಲದೆ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೆಆರ್​ಎಸ್ ಜಲಾಶಯ ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿದೆ. ಸದ್ಯ 100.84 ಅಡಿ ನೀರು ಮಾತ್ರ ಇದೆ. ಟಿಎಂಸಿ ಲೆಕ್ಕದಲ್ಲಿ 49.452 ಟಿಎಂಸಿ ಸಾಮರ್ಥ್ಯವಿದ್ದು, 15.097 ಟಿಎಂಸಿ ನೀರಿದೆ. ಇನ್ನು ಒಳ ಹರಿವು 5682 ಕ್ಯೂಸೆಕ್ ಇದ್ದು 3698 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ವಿರುದ್ಧ ಗುಡುಗಿದ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್, ತಮಿಳುನಾಡು ಸರ್ಕಾರ ಸುಳ್ಳು ಹೇಳುತ್ತಿದೆ. ನಮ್ಮ ಸರ್ಕಾರ ಕೂಡ ಅಗತ್ಯ ದಾಖಲೆಗಳನ್ನು ಒದಗಿಸಲು ಸಂಪೂರ್ಣ ವಿಫಲವಾಗಿದೆ. ಅಲ್ಲದೆ ತಮಿಳುನಾಡು ಜೊತೆ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ದೂರಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ರಾಜ್ಯದ ರೈತರ ಧೋರಣೆಯನ್ನು ವಿರೋಧಿಸುವಂತಹ ಆದೇಶವನ್ನು ಪದೇ ಪದೇ ಕಾವೇರಿ ನೀರು ನಿಯಂತ್ರಣ ಸಮಿತಿ ಯಾಕೆ ನೀಡುತ್ತಿದೆ? ಮೂರು ಬೆಳೆ ಬೆಳೆಯುವಷ್ಟು ನೀರಿರುವ ತಮಿಳುನಾಡು ರಾಜ್ಯಕ್ಕೆ ಮತ್ತೆ ಕಾವೇರಿ ನೀರನ್ನು ಯಾಕೆ ಕೊಡಬೇಕು? ಪ್ರಶ್ನಿಸಿ ಈ ರೀತಿ ಕಾವೇರಿ ನೀರನ್ನು ಹರಿಸುವ ಬದಲು, ಈ ಭಾಗದ ಜನರಿಗೆ ವಿಷ ಕೊಡುವಂತಹ ಯೋಜನೆಯನ್ನು ಕೊಡಿ. ಹಲವು ದಿನಗಳಿಂದ ನ್ಯಾಯಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರು ಬದುಕಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಮಾತನಾಡಿ, ಪ್ರಸ್ತುತ ನಮ್ಮ ರಾಜ್ಯದಲ್ಲಿ ನೀರಿನ ಕೊರೆತೆ ಹೆಚ್ಚಿದೆ. ಅಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದೆ. ಹಾಗಾಗಿ ಅವರಿಗೆ ನೀರಿನ ಸಮಸ್ಯೆ ಆಗಲ್ಲ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.

ರೈತರೊಂದಿಗೆ ಬಿಜೆಪಿ ನಾಯಕರ, ಸಂವಾದ..ಸರ್ಕಾರದ ವಿರುದ್ಧ ವಾಗ್ದಾಳಿ: ಮತ್ತೊಂದೆಡೆ ತಾಲೂಕಿನ ಎ.ಹುಲ್ಕೇರೆ ಗ್ರಾಮದಲ್ಲಿ ಬಿಜೆಪಿ ನಾಯಕರು ರೈತರೊಂದಿಗೆ ಸಂವಾದ ನಡೆಸಿ ರಾಜ್ಯ​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂವಾದದಲ್ಲಿ ರಾಜ್ಯ ಸರ್ಕಾರದ ನಡೆ ಬಗ್ಗೆ ರೈತರು ಕೂಡ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಸರ್ಕಾರ 7 ಗಂಟೆ ಕರೆಂಟ್ ಕೊಡ್ತಿತ್ತು. ಇದೀಗ ಬರಿ 2 ಗಂಟೆ ಕರೆಂಟ್ ಕೊಡ್ತಿದೆ. ಫ್ರೀ ವಿದ್ಯುತ್ ಪೂರೈಕೆ ಎಂದು ಗ್ಯಾರಂಟಿ ಕೊಟ್ಟಿದ್ರು. ಉಚಿತ ಅಕ್ಕಿ ಕೊಡುತ್ತೇವೆಂದು ಕಳಪೆ ಅಕ್ಕಿ ನೀಡುತ್ತಿದ್ದಾರೆ. ಉಚಿತ ಭಾಗ್ಯಕ್ಕೆ ಆಸೆ ಬಿದ್ದು ಮೋಸ ಹೋಗಿದ್ದೇವೆ. ರೈತರ ಮಕ್ಕಳಿಗೆ ಹೆಣ್ಣು ಸಹ ಕೊಡುತ್ತಿಲ್ಲ. ಹೀಗಾಗಿ ರೈತರ ಮಕ್ಕಳು ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಈ ಸಂವಾದ ನಡೆಯಿತು. ಸಂವಾದ ಮುಗಿಸಿ ರೈತರೊಂದಿಗೆ ಅರಳಿಕಟ್ಟೆಯಲ್ಲಿ ಕುಳಿತು ಮಾಜಿ ಸಚಿವ ಡಾ.ಅಶ್ವಥ್ ನಾರಾಯಣ ಊಟ ಮಾಡಿದರು. ಮುದ್ದೆ, ನುಗ್ಗೆಕಾಯಿ ಸಾಂಬಾರ್ ಸವಿದರು. ಈ ವೇಳೆ ಅಶ್ವಥ್ ನಾರಾಯಣಗೆ ಶ್ರೀರಂಗಪಟ್ಟಣ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಸೇರಿ ಬಿಜೆಪಿ ಮುಖಂಡರು ಸಾಥ್ ನೀಡಿದರು.

ಇದನ್ನೂ ಓದಿ:Cauvery issue: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ: ಬಿಎಸ್ ಯಡಿಯೂರಪ್ಪ ಬೇಸರ

Last Updated : Oct 12, 2023, 8:42 PM IST

ABOUT THE AUTHOR

...view details