ಗಂಗಾವತಿ: ಆನೆಗೊಂದಿ ಪರಿಸರ ಪ್ರಾಂತ್ಯ ಎಂದರೆ ಹೇಳಿ ಕೇಳಿ ಪ್ರವಾಸಿ, ಐತಿಹಾಸಿಕ, ಸುಂದರ ಪರಿಸರ ಹಾಗೂ ಧಾರ್ಮಿಕ ತಾಣದ ತವರು. ಹೀಗಾಗಿ ಇಲ್ಲಿಗೆ ಚಾರಣಿಗರು ಮಾತ್ರವಲ್ಲ, ಪ್ರವಾಸಿಗರ ಸಂಖ್ಯೆ ಸಹಜವಾಗಿ ಹೆಚ್ಚು. ಇದೀಗ ಅಂತಹ ಧಾರ್ಮಿಕ ತಾಣಗಳಲ್ಲಿ ಒಂದಾದ ಅಶೇಷ ಭಕ್ತ ವೃಂದವನ್ನು ಹೊಂದಿರುವ ನವ ವೃಂದಾವನದ ಗಡ್ಡೆಯಲ್ಲಿನ ಒಂಬತ್ತು ಯತಿಗಳ ಸಮಾಧಿಗಳ (ವೃಂದಾವನ) ರಕ್ಷಣೆಗಾಗಿ ಸೇಫ್ಟಿ ಗ್ರೀಲ್ ಅಳವಡಿಸುವ ಕಾರ್ಯ ನಡೆದಿದೆ.
ನಿಧಿ ಆಸೆಗಾಗಿ ಕಳ್ಳರು, ಕಳೆದ 2019ರ ಜುಲೈ 17ರಂದು ವಿಜಯನಗರದ ಅರಸರ ಗುರುಗಳಾಗಿದ್ದ ವ್ಯಾಸರಾಯರ ವೃಂದಾವನ ಅಗೆದು ಧ್ವಂಸ ಮಾಡಿದ್ದರು. ಈ ಘಟನೆ ಸಾಕಷ್ಟು ಭಕ್ತರಲ್ಲಿ ಅಘಾತಕ್ಕೆ ಕಾರಣವಾಗಿತ್ತು. ಹೀಗಾಗಿ ಇದೀಗ ತುಂಗಭದ್ರಾ ನಡುಗಡ್ಡೆಯಲ್ಲಿರುವ ವೃಂದಾವನಕ್ಕೆ ಸೇಫ್ಟಿ ಗ್ರೀಲ್ ಅಳವಡಿಸುವ ಕಾರ್ಯ ನಡೆದಿದೆ.