ಗಂಗಾವತಿ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಅಸಮಧಾನಗೊಂಡಿರುವ ಮಾಜಿ ಶಾಸಕ ಹೆಚ್ ಆರ್ ಶ್ರೀನಾಥ್ ಅವರ ಮನೆಗೆ ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸ್ಗೂರು ಭೇಟಿ ನೀಡಿ ತೆರಳಿದ ಬೆನ್ನಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದರು.
ಶನಿವಾರ ರಾತ್ರಿ ಆನೆಗೊಂದಿ ರಸ್ತೆಯಲ್ಲಿರುವ ಶ್ರೀನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಮೊದಲಿಗೆ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ (ಶ್ರೀನಾಥ್ ಅವರ ತಂದೆ) ಮುಖಂಡ ಹೆಚ್.ಜಿ. ರಾಮುಲು ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. ರಾಜ್ಯದಲ್ಲಿ ನಡೆದಿರುವ ರಾಜಕೀಯ ವಿದ್ಯಮಾನ ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದ ರೆಡ್ಡಿ, ಶ್ರೀನಾಥ್ ಅವರಿಗೆ ಟಿಕೆಟ್ ತಪ್ಪಲು ಪಕ್ಷದ ಪ್ರಮುಖ ನಾಯಕರೊಬ್ಬರ ತಂತ್ರಗಾರಿಕೆ ಕಾರಣ ಎಂಬುದನ್ನು ರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗ್ತಿದೆ.
ಶ್ರೀನಾಥ್ ರೆಡ್ಡಿ ಗೌಪ್ಯ ಚರ್ಚೆ : ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರೀಕ್ಷಿಸಿದ್ದ ಶ್ರೀನಾಥ್ ಅವರು ತೀವ್ರ ಅಸಮಾಧಾನಗೊಂಡಿದ್ದು, ಈಗಾಗಲೇ ತಮ್ಮ ಬೆಂಬಲಿಗರ ಜೊತೆ ಎರಡು ಮೂರು ಸಭೆ ನಡೆಸಿದ್ದಾರೆ. ಇನ್ನೆರಡು ದಿನದಲ್ಲಿ ಮುಂದಿನ ತಮ್ಮ ನಡೆ ಏನು ಎಂಬುವುದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಈ ಮಧ್ಯೆ ಶ್ರೀನಾಥ್ ನಿವಾಸಕ್ಕೆ ರೆಡ್ಡಿ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನಾಯಕರನ್ನು ಹೊರತು ಪಡಿಸಿದ್ರೆ ಬೇರೆ ಯಾವುದೇ ನಾಯಕರು, ಬೆಂಬಲಿಗರು ಇರಲಿಲ್ಲ ಎಂದು ತಿಳಿದುಬಂದಿದೆ.