ಕರ್ನಾಟಕ

karnataka

ETV Bharat / state

ಬಿಡುವಿನ ವೇಳೆ ಶಿಕ್ಷಕರಿಂದಲೇ ಸರ್ಕಾರಿ ಶಾಲೆಗಳ ಸೌಂದರ್ಯೀಕರಣ: 'ನಲಿಕಲಿ ನಕ್ಷತ್ರ' ತಂಡದ ಸೇವೆಗೆ ಮೆಚ್ಚುಗೆ

ಗಂಗಾವತಿಯ ಸರ್ಕಾರಿ ಶಾಲೆಗಳ ಶಿಕ್ಷಕರು 'ನಲಿಕಲಿ ನಕ್ಷತ್ರ' ಎಂಬ ತಂಡ ಕಟ್ಟಿಕೊಂಡು ಶಾಲೆಗಳನ್ನು ಸುಂದರಗೊಳಿಸುವ ಕಾಯಕ ಮಾಡುತ್ತಿದ್ದಾರೆ.

By

Published : Jul 2, 2023, 2:21 PM IST

Teachers efforts to beautifying government schools
ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುತ್ತಿರುವ ಶಿಕ್ಷಕರು

'ನಲಿಕಲಿ ನಕ್ಷತ್ರ' ತಂಡದ ಸೇವೆಯ ಕುರಿತು ಶಿಕ್ಷಕಿ ಮಾಲಾ ಪ್ರತಿಕ್ರಿಯೆ

ಗಂಗಾವತಿ (ಕೊಪ್ಪಳ): ಮಕ್ಕಳನ್ನು ತಮ್ಮ ಶಾಲೆಗಳತ್ತ ಆಕರ್ಷಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕಿದೆ. ಇದರ ಜೊತೆಗೆ ಕಟ್ಟಡದ ಸೌಂದರ್ಯಕ್ಕೂ ಗಮನ ಕೊಡಬೇಕು. ಒಳ ಮತ್ತು ಹೊರಾಂಗಣಗಳನ್ನು ಆಕರ್ಷಣೀಯಗೊಳಿಸಲು ನಾನಾ ಚಿತ್ತಾರಗಳ ಮೊರೆ ಹೋಗುವುದು ಸಹಜ. ಇದಕ್ಕಾಗಿ ಶಾಲಾ ಆಡಳಿತ ಮಂಡಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತವೆ.

ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುತ್ತದೆ. ಇದಕ್ಕಾಗಿಯೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ ಉದಾಹರಣೆಗಳಿವೆ. ಆದ್ರೆ ಇಲ್ಲೊಂದು ಸರ್ಕಾರಿ ಶಿಕ್ಷಕರ ತಂಡ ಮಕ್ಕಳನ್ನು ಶಾಲೆಗೆ ಸೆಳೆಯುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ. ಶಾಲಾ ಬಿಡುವಿನ ಅವಧಿಯಲ್ಲಿ ಶಾಲೆಯ ಗೋಡೆಗಳಿಗೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಗಮನ ಇವರು ಸೆಳೆಯುತ್ತಿದ್ದಾರೆ.

'ನಲಿಕಲಿ ನಕ್ಷತ್ರ' ತಂಡ:ಗಂಗಾವತಿ ತಾಲೂಕಿನ ವಿವಿಧ ಶಾಲೆಗಳಲ್ಲಿ ನಾನಾ ವಿಷಯಗಳನ್ನು ಬೋಧನೆ ಮಾಡುವ ಸಂಧ್ಯಾ, ಮಾಲಾ, ನಾಗರತ್ನ, ಅನಿತಾ, ಮಲ್ಲಮ್ಮ, ಮಂಜುಳಾ, ನೀಲಮ್ಮ, ಶ್ರೀಧರ, ಮಲ್ಲೇಶಪ್ಪ ಹಾಗು ಕಲ್ಲನಗೌಡ ಎಂಬ ಶಿಕ್ಷಕರು 'ನಲಿಕಲಿ ನಕ್ಷತ್ರ' ಎಂಬ ಹೆಸರಲ್ಲಿ ತಂಡ ಕಟ್ಟಿಕೊಂಡು ಸೇವೆ ನೀಡುತ್ತಿದ್ದಾರೆ.

'ನಲಿಕಲಿ ನಕ್ಷತ್ರ' ಸೇವೆ

ಬಿಡುವಿನ ವೇಳೆ ಈ ಕಾಯಕ:ಶಾಲೆಗಳನ್ನು ಗುರುತಿಸುವುದು, ಆ ಶಾಲೆಗೆ ಹೋಗಿ ದಾನಿಗಳಿಂದ ಅಥವಾ ಶಾಲಾ ಸುಧಾರಣಾ ಸಮಿತಿಯಿಂದ ಬಣ್ಣಗಳ ವ್ಯವಸ್ಥೆ ಮಾಡಿಸಿಕೊಂಡು ಶಾಲೆಗಳ ಗೋಡೆಗಳನ್ನು ಆಕರ್ಷಕವಾಗಿ ಮಾಡುವ ಕಾಯಕದಲ್ಲಿ ಈ ತಂಡ ತೊಡಗಿಸಿಕೊಂಡಿದೆ. ಶಾಲೆಯ ಬಿಡುವಿನ ಅಥವಾ ರಜೆಯ ದಿನಗಳನ್ನು ವ್ಯರ್ಥ ಮಾಡದೇ, ಸಮಾನ ಮನಸ್ಕರ ಈ ಶಿಕ್ಷಕರ ತಂಡ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸುತ್ತಿದೆ. ಬಣ್ಣಗಳ ಮೂಲಕ ಮಕ್ಕಳನ್ನು ಸೆಳೆಯುವ ಕೆಲಸ ಮಾಡುತ್ತಿದೆ.

ಆರು ಶಾಲೆಗಳಿಗೆ ಸೇವೆ ಲಭ್ಯ: ಕಳೆದ ಒಂದು ವರ್ಷದ ಅವಧಿಯಲ್ಲಿ ಗಂಗಾವತಿ ತಾಲೂಕಿನ ಸಿದ್ದಿಕೇರಿ ಕ್ಯಾಂಪ್, ವಿರುಪಾಪುರ ತಾಂಡ, ಉಪ್ಪಿನಮಳಿ ಕ್ಯಾಂಪ್, ವಡ್ಡರಹಟ್ಟಿ, ಗುಂಡಮ್ಮ ಕ್ಯಾಂಪ್, ಜಯನಗರದ ಆರು ಶಾಲೆಗಳ ಗೋಡೆಗಳ ಮೇಲೆ ಚಿತ್ತಾರ ಮೂಡಿದೆ. ಆಕರ್ಷಕ ಗೊಂಬೆಗಳು, ಕಾರ್ಟೂನ್​​, ಹೂವು, ಹಣ್ಣು, ತರಕಾರಿ, ಪ್ರಾಣಿ, ಪಕ್ಷಿ ಸೇರಿದಂತೆ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಕನ್ನಡ, ಗಣಿತ ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಶಾಲೆಯ ಗೋಡೆ ಮೇಲೆ ಬಿಡಿಸಲಾಗುತ್ತಿದೆ.

ಇದನ್ನೂ ಓದಿ:Tomato price: ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆ; ಕಂಗಾಲಾದ ಗ್ರಾಹಕರಿಗೆ ಗುಡ್​ ನ್ಯೂಸ್​

ಅಂದ ಹಾಗೆ, ಇವರು ಚಿತ್ರಕಲಾ ಹೇಳಿಕೊಡುವ ಡ್ರಾಯಿಂಗ್ ಟೀಚರ್​ಗಳಲ್ಲ. ಬೇರೆ ಬೇರೆ ಶಾಲೆಗಳಲ್ಲಿ ನಾನಾ ವಿಷಯಗಳನ್ನು ಬೋಧನೆ ಮಾಡುವ ಶಿಕ್ಷಕರು. ಮಕ್ಕಳ ಮೌಲ್ಯಯುತ ಕಲಿಕೆಗೆ ಪೂರಕವಾಗಲಿ ಎಂಬ ಕಾರಣಕ್ಕೆ ಇಂಥದ್ದೊಂದು ಸದುದ್ದೇಶದ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿಕ್ಷಕಿ ಅನಿತಾ, "ಮಕ್ಕಳ ಕಲಿಕೆಯ ಜೊತೆಗೆ ಅವರ ಜ್ಞಾನ ವೃದ್ಧಿಯಾಗಲಿ ಎಂಬ ಉದ್ದೇಶ ನಮ್ಮದು. ಪಠ್ಯದ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಇದಕ್ಕೆ ಆಯಾ ಶಾಲೆಯ ಶಿಕ್ಷಕರು, ಮಕ್ಕಳು, ಜನರಿಂದ ಉತ್ತಮ ಸಹಕಾರ ಸಿಗುತ್ತಿದೆ" ಎಂದು ತಿಳಿಸಿದರು.

'ನಲಿಕಲಿ ನಕ್ಷತ್ರ' ಸೇವೆ

ಇದನ್ನೂ ಓದಿ:Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್‌ ಹೊಸ ಸಿನಿಮಾದ ಟೀಸರ್ ರಿಲೀಸ್‌, ರಗಡ್ ಲುಕ್‌ನಲ್ಲಿ ಅಬ್ಬರ!

ಮತ್ತೋರ್ವ ಶಿಕ್ಷಕ ಕಲ್ಲನಗೌಡ ಮಾತನಾಡಿ, "ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ ಅವರು ನಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಕ್ಕಳ ಕಲಿಕೆಯ ಗುಣಮಟ್ಟದ ವೃದ್ಧಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ" ಎಂದರು. ಶಾಲಾ ಅವಧಿಯ ಬಳಿಕವೇ ನಾವು ಚಿತ್ರಗಳನ್ನು ಬಿಡಿಸಬೇಕಿರುವ ಕಾರಣಕ್ಕೆ ಒಂದೊಂದು ಶಾಲೆಯಲ್ಲಿ ಚಿತ್ರಗಳನ್ನು ಬಿಡಿಸಲು ತಿಂಗಳುಗಳ ಸಮಯ ಹಿಡಿಯುತ್ತದೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಒಟ್ಟಾರೆ ಚಿತ್ತಾರಗಳನ್ನು ಬಿಡಿಸುವ ಮೂಲಕ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಮುಂದಾಗಿರುವುದು ಅನೇಕರಿಗೆ ಮಾದರಿಯಾಗಿದೆ.

ABOUT THE AUTHOR

...view details