ಕೋಲಾರ: ಲಾಕ್ಡೌನ್ ಸಡಿಲಗೊಂಡ ಕಾರಣ ಕೆಲ ನಿಬಂಧನೆಗಳಿಗೆ ಒಳಪಟ್ಟು ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.
ಮೇ 15ರ ನಂತರ ಮದ್ಯದಂಗಡಿ ತೆರೆಯಲು ಚಿಂತನೆ: ಸಚಿವ ಹೆಚ್.ನಾಗೇಶ್
ಸರ್ಕಾರ ಪಟ್ಟಿ ಮಾಡಿರುವ ಹಸಿರು ವಲಯದಲ್ಲಿ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿದರೆ ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯದ ಜನರು ಆಗಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದರು.
ಕೈಗಾರಿಕೆಗಳಲ್ಲಿ ಅರ್ಧದಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಬಹುದು. ಕಾರ್ಮಿಕರಿಗೆ ಸ್ಥಳೀಯವಾಗಿ ಎಲ್ಲಾ ರೀತಿಯ (ಮಾಸ್ಕ್, ಸ್ಯಾನಿಟೈಸರ್ ಸೇರಿ) ಮೂಲಸೌಲಭ್ಯಗಳನ್ನು ಉದ್ಯಮದಾರರೇ ಒದಗಿಸಬೇಕು. ಅಂಗಡಿಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೆಲವು ತಿದ್ದುಪಡಿ ತರಲು ಸರ್ಕಾರ ಚಿಂತಿಸಿದೆ. ಈ ಮಧ್ಯೆ ಯಾವುದೇ ಕಾರಣಕ್ಕೂ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೋಟೆಲ್ಗಳಲ್ಲಿ ಕೇವಲ ಪಾರ್ಸೆಲ್ ಪಡೆಯಲು ಅವಕಾಶವಿದೆ. ಉಳಿದಂತೆ ಬೇಕರಿ, ಮಾಂಸದಂಗಡಿಗಳು ತೆರೆಯಬಹುದು ಎಂದರು.
ಮೇ 3ರ ಬಳಿಕ ಮದ್ಯದಂಗಡಿ ತೆರೆಯುವ ಚಿಂತನೆ ಇತ್ತು. ಆದರೆ, ಪ್ರಧಾನಿ ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಮೇ 15ರ ತನಕ ಮದ್ಯದಂಗಡಿ ಬಂದ್ ಆಗಲಿದ್ದು ನಂತರದ ದಿನಗಳಲ್ಲಿ ತೆರೆಯುವ ಚಿಂತನೆ ಇದೆ ಎಂದು ತಿಳಿಸಿದರು.