ಕೋಲಾರ: ಅಪರಿಚಿತರು ಬಂದಾಗ ಅವರ ವಿಳಾಸ, ಗುರುತನ್ನ ಪತ್ತೆ ಮಾಡಿ ಅವರನ್ನ ಜಿಲ್ಲೆಯೊಳಗೆ ಬರಮಾಡಿಕೊಳ್ಳಬೇಕೆಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ರು.
ಕೋಲಾರಕ್ಕೆ ಉಗ್ರಗಾಮಿಗಳ ನಂಟು ಹಿನ್ನಲೆ ಇಬ್ಬರ ಬಂಧನ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ದೇಶದೊಳಗಾಗಲಿ, ಕೋಲಾರದೊಳಗಾಗಲಿ ನಮ್ಮ ಹಳ್ಳಿಗಳೊಳಗಾಗಲಿ ಗುರುತು ಪರಿಚಯವಿಲ್ಲದವರು ಬಂದಾಗ, ಅವರ ಸಂಪೂರ್ಣ ವಿಳಾಸವನ್ನ ತಿಳಿದುಕೊಂಡು ಪ್ರವೇಶ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕೆಂದರು. ಮೊದಲು ದೇಶವನ್ನ ನಮ್ಮ ದೇಶ ನಮ್ಮ ಭಾರತ ಎಂಬ ಭಾವನೆಯಲ್ಲಿ ನೋಡಬೇಕು, ಯಾರೋ ಇಬ್ಬರನ್ನ ಕರೆದುಕೊಂಡು ಹೋಗಿದ್ದಕ್ಕೆ ಎಲ್ಲರನ್ನ ಬೆರಳು ಮಾಡುವುದು ಬೇಡ ಎಂದರು. ಅಲ್ಲದೆ ನಾವೆಲ್ಲಾ ಒಗ್ಗಟ್ಟಾಗಿ ಇದ್ದರೆ ಇಂತಹದ್ದಕ್ಕೆ ಕಡಿವಾಣ ಹಾಕುವುದರೊಂದಿಗೆ ಯಾರೇ ಹೊಸಬರು ಬಂದಾಗ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದಾಗ ದೇಶ ಸುಭದ್ರವಾಗಿ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ರು.