ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಮೊದಲ ಬಲಿ ಪಡೆದಿದೆ. ರಾಷ್ಟ್ರ ರಾಜಧಾನಿಯಿಂದ ಕೆಜಿಎಫ್ಗೆ ಬಂದಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.
ಬಹಳ ವರ್ಷಗಳ ಮೇಲೆ ತನ್ನ ತವರು ಮೆನಗೆ ಬಂದಿದ್ದಳು, ತನ್ನ ಸಂಬಂಧಿಕರೊಬ್ಬರ ಮದುವೆಗೆಂದು ಕುಟುಂಬ ಸಮೇತರಾಗಿ ಬಂದಿದ್ದರು. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ 43 ವರ್ಷದ ಮಹಿಳೆ ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೋಲಾರದ ಆರ್.ಎಲ್. ಜಾಲಪ್ಪಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ-8495, 43 ವರ್ಷದ ಮಹಿಳೆ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ.
ಹತ್ತು ದಿನಗಳ ಹಿಂದೆ ಅಂದ್ರೆ ಜೂನ್ 15 ರಂದು ದೆಹಲಿಯಿಂದ ಕುಟುಂಬ ಸಮೇತರಾಗಿ ತಮ್ಮ ನೆಂಟರ ಮದುವೆಗೆಂದು ಕೆಜಿಎಫ್ ತೂಕಲ್ಲು ಗ್ರಾಮಕ್ಕೆ ಬಂದಿದ್ದ ಮಹಿಳೆಯಲ್ಲಿ ಜೂ.19 ರಂದು, ಜ್ವರ ಕೆಮ್ಮು ಕಾಣಿಸಿಕೊಂಡು ಜಾಲಪ್ಪಾ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ಹತ್ತು ದಿನಗಳಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಕೆಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗಂಡನನ್ನು ಕಳೆದ ಒಂದು ವಾರದಿಂದ ಕ್ವಾರಂಟೈನ್ ನಲ್ಲಿಡಲಾಗಿತ್ತು. ಆದ್ರೆ ನಿನ್ನೆ ಮೃತ ಮಹಿಳೆಯ ಗಂಡನಿಗೂ ಕೊರೊನಾ ಪಾಸಿಟಿವ್ ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಮೃತ ಮಹಿಳೆಯ 15 ವರ್ಷದ ಮಗ ಸೇರಿ ಇಡೀ ಕುಟುಂಬಸ್ಥರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಇನ್ನು ಸೋಂಕಿತ ಮಹಿಳೆ ಮೃತಪಟ್ಟ ವಿಚಾರ ಕೇಳಿ ಕೆಜಿಎಫ್ ತಾಲ್ಲೂಕು ತೂಕಲ್ಲು ಗ್ರಾಮದ ಜನರರು ಆತಂಕಕ್ಕೊಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಮೃತ ಮಹಿಳೆಯನ್ನು ಊರಿಗೆ ತರದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಸಂಬಂಧಿಕರ ಒಪ್ಪಿಗೆ ಪಡೆದು ಮೃತ ಮಹಿಳೆಯ ಶವವನ್ನು ಕೋಲಾರ ನಗರಸಭೆ ನೆರವಿನೊಂದಿಗೆ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇನ್ನು ಕೋಲಾರದಲ್ಲಿ ಕೊರೊನಾ ಸೋಂಕಿತರಲ್ಲಿ ಉಸಿರಾಟದ ತೊಂದರೆ ಕಂಡು ಬರುತ್ತಿದ್ದು, ವೆಂಟಿಲೇಟರ್ ಹಾಗೂ ಅದರ ತಜ್ಞರ ಕೊರತೆ ಇದೆ. ಕೂಡಲೇ ಆ ಸಮಸ್ಯೆ ಬಗೆಹರಿಸುವುದಾಗಿ ಸಂಸದ ಮುನಿಸ್ವಾಮಿ ಹೇಳಿದ್ದಾರೆ.