ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮೂಕಪ್ರಾಣಿಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟ ದನ ಕರುಗಳಿಗೂ ತಟ್ಟಿದ್ದು, ತಿನ್ನಲು ಮೇವು, ಇರಲು ಕೊಟ್ಟಿಗೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಗೋಶಾಲೆಗೆ ದಾನಿಗಳು ಸಹಾಯ ಹಸ್ತ ಚಾಚಬೇಕು ಎಂದು ಗೋಶಾಲೆ ಮುಖ್ಯಸ್ಥ ಮನವಿ ಮಾಡಿಕೊಂಡಿದ್ದಾರೆ.

By

Published : Jun 7, 2020, 1:34 PM IST

ಮೂಕಪ್ರಾಣಿಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ
ಮೂಕಪ್ರಾಣಿಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ

ಭಾಗಮಂಡಲ (ಕೊಡಗು): ಲಾಕ್​ಡೌನ್ ಪರಿಣಾಮ ಕೇವಲ ಮಾನವನಿಗೆ ಮಾತ್ರವಲ್ಲ, ಮೂಕಪ್ರಾಣಿಗಳಿಗೂ ತಟ್ಟಿದೆ. ಎರಡು ವರ್ಷ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತದಲ್ಲಿ ನರಳಿದ್ದ ಮುಗ್ಧ ಹಸುಗಳು ಈ ಬಾರಿಯೂ ಮಳೆಯಲ್ಲೇ ನೆನೆಯಬೇಕಾದ ಪರಿ ಸ್ಥಿತಿ ಎದುರಾಗಿದೆ.

ಮೂಕಪ್ರಾಣಿಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ

ಎರಡು ವರ್ಷಗಳಿಂದ ಪ್ರಾಕೃತಿಕ ದುರಂತಕ್ಕೆ ಕೊಡಗು ನಲುಗಿ ಹೋಗಿತ್ತು. ಎಷ್ಟೋ ಮನೆಗಳು, ತೋಟ ಗದ್ದೆಗಳು ಕೊಚ್ಚಿ ಹೋಗಿದ್ದವು. ಹೀಗಾಗಿ ಕೊಡಗಿನ ಹಲವು ರೈತರು ತಮ್ಮ ದನಗಳನ್ನು ಕೂಡಿಹಾಕಲು ಜಾಗವಿಲ್ಲದೆ ಬೀದಿಗೆ ಬಿಟ್ಟಿದ್ದರು. ಈ ವೇಳೆ ಹರೀಶ್ ಆಚಾರ್ಯ ಎಂಬುವರು ಗೋವುಗಳ ರೋದನೆ ನೋಡಲು ಸಾಧ್ಯವಾಗದೆ, ತಾವೇ ಗೋವುಗಳನ್ನು ಸಾಕಲು ಮುಂದಾದರು. ಅದಕ್ಕಾಗಿ ಆರು ತಿಂಗಳ ಹಿಂದೆಯೇ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ 6 ಎಕರೆ ಪ್ರದೇಶದಲ್ಲಿ ಗೋಶಾಲೆಯನ್ನು ಆರಂಭಿಸಿದರು. ಈ ಗೋಶಾಲೆ ಆರಂಭವಾಗುತ್ತಿದ್ದಂತೆ 55 ದನ, ಕರು ಮತ್ತು ಎಮ್ಮೆಗಳನ್ನು ಜನರು ತಂದು ಬಿಟ್ಟರು. ಗೋಶಾಲೆ ಶುರುವಾದಾಗ ಸಾಕಷ್ಟು ದಾನಿಗಳು ದನಗಳಿಗಾಗಿ ಕಟ್ಟಡ ನಿರ್ಮಿಸಲು ಮತ್ತು ಅವುಗಳಿಗೆ ಮೇವು ಜೊತೆಗೆ ಔಷಧಿ ಕೊಳ್ಳಲು ಧನಸಹಾಯ ಮಾಡುವ ಭರವಸೆ ನೀಡಿದ್ದರು. ಆ ಧೈರ್ಯದಿಂದಲೇ ಹರೀಶ್ ಆಚಾರ್ಯ ಅವರು ಗೋವುಗಳನ್ನು ಪೋಷಣೆ ಮಾಡಲು ಆರಂಭಿಸಿದ್ದಾರೆ. ನಿರ್ವಹಣೆಗೆಂದು 6 ಜನರನ್ನು ಕೆಲಸಕ್ಕಾಗಿ ನೇಮಿಸಿಕೊಂಡರು. ಹೇಗೋ ನಡೆಯುತ್ತಿದೆಯಲ್ಲಾ ಎಂದುಕೊಳ್ಳುತ್ತಿದ್ದಂತೆ ದೇಶಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆಯಿತು.

ಅಂದಿನಿಂದ ಗೋಶಾಲೆ ನಿರ್ಮಿಸಲು ಸಹಾಯ ಮಾಡುವುದಾಗಿ ಹೇಳಿದ್ದ ದಾನಿಗಳು ಹಿಂದೆ ಸರಿದಿದ್ದಾರೆ. ಸದ್ಯ 55 ಗೋವುಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದು, ಗಾಳಿ-ಮಳೆಯಲ್ಲಿ ನೆನೆಯಬೇಕಾಗಿದೆ. ಕೊಡಗಿನಲ್ಲಿ ನಿರಂತರವಾಗಿ ಮೂರು ತಿಂಗಳು ಮಳೆ ಸುರಿಯುವುದರಿಂದ ಇನ್ನೇನು ಮಳೆ ಆರಂಭವಾಗಲಿದ್ದು, ಮೂಕ ಪ್ರಾಣಿಗಳು ಮಳೆಯಲ್ಲೇ ನೆನೆಯಬೇಕಾಗಿದೆ. 55 ಜಾನುವಾರುಗಳಿಗೆ ಕೇವಲ ಇದೊಂದು ತಿಂಗಳು ಮಾತ್ರವೇ ಸಾಕಾಗುವಷ್ಟು ಮಾತ್ರವೇ ಹುಲ್ಲು ಇದ್ದು, ಈ ತಿಂಗಳು ಕಳೆದಲ್ಲಿ ಅವುಗಳಿಗೆ ಮೇವು ಕೂಡ ಇಲ್ಲದಂತೆ ಆಗಲಿದೆ. ಜೊತೆಗೆ ಅವುಗಳಿಗೆ ರೋಗ-ರುಜಿನಗಳು ಬಂದಲ್ಲಿ ಚಿಕಿತ್ಸೆಗೂ ಹಣವಿಲ್ಲ. ಈ ಹಿನ್ನೆಲೆಯಲ್ಲಿ ದಾನಿಗಳು ಸಹಾಯಹಸ್ತ ಚಾಚಿದಲ್ಲಿ ಗೋವುಗಳ ರೋದನೆಯನ್ನು ತಪ್ಪಿಸಬಹುದಾಗಿದೆ.

ಒಟ್ಟಿನಲ್ಲಿ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಲ್ಲಿ ನಲುಗಿದ್ದ ಗೋವುಗಳು ಗೋಶಾಲೆಯಲ್ಲಿ ಹೇಗೋ ನೆಮ್ಮದಿ ನೆಲೆ ಕಾಣಲಿವೆ ಎಂದುಕೊಂಡಿದ್ದವು. ಆದರೆ ಗೋಶಾಲೆ ನಿರ್ಮಿಸಲು ಸಹಾಯ ಮಾಡುತ್ತೇವೆ ಎಂದಿದ್ದ ದಾನಿಗಳು ಇದೀಗ ಕೊರೊನಾದಿಂದ ಹಿಂದೆ ಸರಿದಿರುವುದರಿಂದ ಜಾನುವಾರುಗಳು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.

ABOUT THE AUTHOR

...view details