ಕಲಬುರಗಿ: ಆಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ. ಬರೋಬ್ಬರಿ ಎಂಟು ಮಕ್ಕಳ ತಾಯಿ. ಆಕೆಯ ಪತಿಗೆ ಐವತ್ತೇಳು ವರ್ಷ. ಆದ್ರೆ, ಪತಿ ಐವತ್ತೇಳು ವರ್ಷದಲ್ಲಿ ಇದೀಗ ಬೇರೊಂದು ಮದುವೆಯಾಗಿದ್ದಾನೆ.
ಪತಿಯ ವಂಚನೆಯಿಂದ ಬೀದಿಗೆ ಬಿದ್ದಿರುವ ಮಹಿಳೆ ಹೆಸರು ಮಾಲೀಯಾ ಸುಲ್ತಾನ. ಇವರು ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ. ಎಂಟು ಮಕ್ಕಳ ತಾಯಿಯಾಗಿರುವ ಮಾಲೀಯ ಸುಲ್ತಾನ್ಗೆ ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಜೀವನ ಹೇಗೆ ನಡೆಸೋದು ಎಂಬ ಚಿಂತೆ ಕಾಡುತ್ತಿದೆ. ಇದಕ್ಕೆ ಕಾರಣ ಅವರ ಪತಿಯಂತೆ.
ಮಾಲೀಯಾ ಸುಲ್ತಾನರ ವಿವಾಹ ಮೂವತ್ತು ವರ್ಷದ ಹಿಂದೆ ಚಿತ್ತಾಪುರ ತಾಲೂಕಿನ ಹಲಕರ್ಟಾ ಗ್ರಾಮದ ನಿವಾಸಿ ಇಬ್ರಾಹಿಂ ಪಟೇಲ್ ಜೊತೆಯಾಗಿತ್ತು. ಈ ದಂಪತಿಗೆ ಎಂಟು ಮಕ್ಕಳಿದ್ದಾರೆ. ಐವರು ಹೆಣ್ಣು ಮಕ್ಕಳು, ಮೂವರು ಪುತ್ರರು. ಹೆಣ್ಣು ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಮಕ್ಕಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ಇದೀಗ ಮಾಲೀಯಾ ಸುಲ್ತಾನ ಪತಿ ಇಬ್ರಾಹಿಂ ಪಟೇಲ್ ಮತ್ತೊಂದು ಮದುವೆಯಾಗಿದ್ದಾರೆ.