ಕಲಬುರಗಿ : ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಿಂದ ಇಂದು ಮುಂಜಾನೆ ಕಳವಾಗಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಕ್ಕದ ತೆಲಂಗಾಣದಲ್ಲಿ ಪತ್ತೆ ಆಗಿದೆ. ಕಳವಾದ ಬಸ್ನ ಜಾಡು ಹಿಡಿದು ಹೋದ ಪೊಲೀಸರು ತೆಲಂಗಾಣದ ಪ್ರಸಿದ್ದ ಭೂಕೈಲಾಸ ದೇವಸ್ಥಾನ ಸಮೀಪದ ಅಂತಾರಾಮ ತಾಂಡಾ ಬಳಿ ಬಸ್ ಅನ್ನು ಪತ್ತೆ ಹಚ್ಚಿದ್ದಾರೆ. ರಸ್ತೆ ಬದಿಯ ಗುಂಡಿಯಲ್ಲಿ ಬಸ್ನ ಚಕ್ರ ಸಿಲುಕಿದ್ದರಿಂದ ಬಸ್ ಅನ್ನು ಅಲ್ಲಿಯೇ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ.
ಘಟನೆ ವಿವರ: ಇಂದು ಬೆಳಗಿನ ಜಾವ ಸುಮಾರು 3:30ಕ್ಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಕಳ್ಳನೊಬ್ಬ ಕದ್ದೊಯ್ದಿದ್ದ. ಬೈಕ್ ಕಾರು ಕಳ್ಳತನ ಸಾಮಾನ್ಯ ಸಂಗತಿ. ಆದರೆ, ಸರ್ಕಾರಿ ಬಸ್ ಅನ್ನೇ ಕದ್ದೊಯ್ದಿದ್ದು ರಾಜ್ಯದ ಜನರ ಅಚ್ಚರಿಗೆ ಕಾರಣವಾಗಿತ್ತು.
ನಿನ್ನೆ ಬೀದರ್ನಿಂದ ಚಿಂಚೋಳಿಗೆ ಆಗಮಿಸಿದ್ದ ಸಾರಿಗೆ ಬಸ್ ಅನ್ನು ರಾತ್ರಿ 9:15 ಕ್ಕೆ ಇಲ್ಲಿನ ನಿಲ್ದಾಣದಲ್ಲಿ ಚಾಲಕ ನಿಲ್ಲಿಸಿದ್ದ. ಬೆಳಗಿನ ಜಾವ ಆಗಮಿಸಿದ್ದ ಕಳ್ಳ ಬಸ್ನೊಂದಿಗೆ ಪರಾರಿಯಾಗಿದ್ದ. ಬೆಳಗ್ಗೆ ಬಸ್ ಚಾಲಕ ಸ್ಥಳಕ್ಕೆ ಬಂದು ನೋಡಿದಾಗ ಬಸ್ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಈ ಕಳವಾದ ಬಸ್ ಮಿರಿಯಾನ ಮಾರ್ಗವಾಗಿ ತಾಂಡೂರ್ ಮೂಲಕ ತೆಲಂಗಾಣದ ಕಡೆಗೆ ಸಾಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಬಸ್ ಕಳವಾದ ಬಗ್ಗೆ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಬಸ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗಿತ್ತು. ಇನ್ನೊಂದೆಡೆ ಕೆಕೆಆರ್ಟಿಸಿ ಅಧಿಕಾರಿಗಳು ಕೂಡ ಬೀದರ್ನ ಎರಡು ತಂಡ ಮತ್ತು ಕಲಬುರಗಿಯ ಎರಡು ತಂಡಗಳನ್ನು ರಚಿಸಿಕೊಂಡು ಚಿಂಚೋಳಿ, ತಾಂಡೂರ್ ಮತ್ತು ತೆಲಂಗಾಣ ಭಾಗದಲ್ಲಿ ಬಸ್ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.