ಕರ್ನಾಟಕ

karnataka

By

Published : Aug 9, 2023, 5:30 PM IST

ETV Bharat / state

ಮಕ್ಕಳಲ್ಲಿ ಮೊಬೈಲ್ ಮಿತ ಬಳಕೆ ಅಧ್ಯಯನಕ್ಕೆ 10 ತಂಡ ರಚನೆ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ ನಾಗಣ್ಣ ಗೌಡ

ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್​ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರ ಜೊತೆ ಚರ್ಚಿಸುವುದಾಗಿ ಕೆ. ನಾಗಣ್ಣ ಗೌಡ ತಿಳಿಸಿದ್ದಾರೆ.

Meeting at Kalaburagi District Collector's office hall
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ

ಕಲಬುರಗಿ:ಇತ್ತೀಚಿಗೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಇದರಿಂದ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ. ಮೊಬೈಲ್ ಕೊರೊನಾಗಿಂತ ಅಪಾಯಕಾರಿ ಆಗಿ ಮಾರ್ಪಟ್ಟಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆಯಾಗಿದೆ. ಮಕ್ಕಳು ಮೊಬೈಲ್ ಬಳಕೆ ಮಿತವಾಗಿ ಬಳಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಲು ಆಯೋಗವು 10 ತಂಡಗಳನ್ನು ರಚಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರ್.ಟಿ.ಇ, ಪೋಕ್ಸೋ, ಬಾಲ‌ ನ್ಯಾಯ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಂತರ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ತಂಡದಲ್ಲಿ ವೈದ್ಯರು, ಮಕ್ಕಳ, ಪಾಲಕರು, ಸೈಕ್ಯಾಟ್ರಿಸ್ಟ್ ಇರಲಿದ್ದು, ಮೂರು ತಿಂಗಳ ಕಾಲ ರಾಜ್ಯಾದ್ಯಂತ ಅಧ್ಯಯನ ಮಾಡಿ ವರದಿ‌ ಸಲ್ಲಿಸಲಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಠದ ಜೊತೆಗೆ ಆಟ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ‌ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಆಟೋ ಶಾಲಾ ಬಸ್​ಗಳಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯದಂತೆ‌ ಆರ್.ಟಿ.ಒ ಮತ್ತು ಸಂಚಾರಿ ಪೊಲೀಸರು ನಿಯಂತ್ರಣ ಹಾಕಬೇಕು. ಇನ್ನು 18 ವರ್ಷದೊಳಗಿನ ಮಕ್ಕಳು ಬೈಕ್‌ ಚಲಾಯಿಸದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಕ್ಕಳಿಗೆ ಪ್ರತ್ಯೇಕ ಬಸ್, ಶಿಕ್ಷಣ ಸಚಿವರೊಂದಿಗೆ ಚರ್ಚೆ: ಶಕ್ತಿ ಯೋಜನೆಯಿಂದ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳ ಪ್ರಯಾಣ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಅವರು, ಈ ಕುರಿತು ಶಿಕ್ಷಣ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ‌ ಚರ್ಚಿಸುವೆ ಎಂದು ತಿಳಿಸಿದ್ದಾರೆ.

ಶಾಲಾ ಸುತ್ತಮುತ್ತ ಮದ್ಯಪಾನ, ತಂಬಾಕು-ಗುಟಕಾ ಮಾರಾಟವಾಗದಂತೆ ನೋಡಿಕೊಳ್ಳಿ: ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅಧ್ಯಕ್ಷರು, ಶಾಲಾ-ಕಾಲೇಜು ಸುತ್ತಮುತ್ತ ತಂಬಾಕು, ಗುಟಕಾ, ಪಾನ್ ಪರಾಗ್​ ಹಾಗೂ ಮದ್ಯ ಮಾರಾಟವಾಗದಂತೆ ಪೊಲೀಸ್ ಇಲಾಖೆಗಳು ಎಚ್ಚರ ವಹಿಸಬೇಕು ಎಂದು ಹೇಳಿದರು. ಶಾಲೆ‌ ಆವರಣದಲ್ಲಿ ಕೆಲ ಐಸ್ ಕ್ರೀಂ, ಸೌತೆಕಾಯಿ, ಪಾನಿಪೂರಿ ಮಾರಾಟ ಮಾಡುವವರೇ ಇದರ ಪೆಡ್ಲರ್ ಆಗಿದ್ದಾರೆ. ಶಾಲೆ ಅರಂಭ ಮತ್ತು ಬಿಡುವ ಸಮಯದಲ್ಲಿ ಪೊಲೀಸರು‌ ಮಫ್ತಿಯಲ್ಲಿರಬೇಕು. ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದರು.

18 ವರ್ಷದೊಳಗಿನ ಮಕ್ಕಳು ಇತ್ತೀಚೆಗೆ ಹುಕ್ಕಾ, ಗಾಂಜಾ ಸೇರಿದಂತೆ ಮಾದಕ‌ ವಸ್ತುಗಳಿಗೆ‌ ಬಲಿಯಾಗುತ್ತಿರುವುದು ಖೇದಕರವಾಗಿದೆ. ಮಕ್ಕಳು ಇದಕ್ಕೆ‌ ಬಲಿಯಾಗದಂತೆ‌ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಬಾಲ್ಯ ವಿವಾಹ, ಮಕ್ಕಳ ಕಳ್ಳ ಸಾಗಣೆ, ಅತ್ಯಾಚಾರ ಪ್ರಕರಣವಾಗದಂತೆ ಮುನ್ನೆಚ್ಚರಿಕೆ ಕ್ರಮ‌ ಕೈಗೊಳ್ಳಬೇಕು. ಶಿಕ್ಷಣ‌ ಇಲಾಖೆ ಅಧಿಕಾರಿಗಳು, ಆಗಾಗ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಶಾಲೆ‌ಗಳಲ್ಲಿ ಮಕ್ಕಳ ಕುಂದುಕೊರತೆ ಆಲಿಸಿ ಪರಿಹರಿಸಬೇಕು. 3-4 ದಿನದಿಂದ‌ ಮಗು ಶಾಲೆಗೆ ಬರದಿದ್ದರೆ,‌ ಅಂತಹ ಮಗು‌ ಎಲ್ಲಿ‌ ಹೋಗಿದೆ? ಶಾಲೆ‌ ಬಿಡಲು ಕಾರಣ ಪತ್ತೆ ಹಚ್ಚಬೇಕು. ಅಂದಾಗ ಮಾತ್ರ ಡ್ರಾಪ್ ಔಟ್ ಪ್ರಮಾಣ ತಗ್ಗಿಸಬಹುದು.‌ ಈ ಪ್ರಮಾಣ ತಗ್ಗಿದಲ್ಲಿ ಮಕ್ಕಳನ್ನು ದುಶ್ಚಟದಿಂದ ದೂರವಿಡಬಹುದಾಗಿದೆ ಎಂದರು.

ಶಾಲಾ ಶುಲ್ಕ ಪಾವತಿ ಕಾರಣ ನೀಡಿ ಫಲಿತಾಂಶ,‌ ಪರೀಕ್ಷೆಗೆ ನಿರಾಕರಿಸುವಂತಿಲ್ಲ: ಶಾಲೆ ಶುಲ್ಕ ಕಟ್ಟಿಲ್ಲ ಎಂದು ಫಲಿತಾಂಶ ತಡೆ ಹಿಡಿಯುವುದಾಗಲಿ, ಪರೀಕ್ಷೆ ಬರೆಯಲು ಅವಕಾಶ‌ ಮಾಡದಿರುವುದು ಮಕ್ಕಳ ಹಕ್ಕು ಕಾಯ್ದೆಯ ಸ್ಪಷ್ಟ‌ ಉಲ್ಲಂಘನೆಯಾಗುತ್ತದೆ. ಇದನ್ನು ಜಿಲ್ಲೆಯಲ್ಲಿ ಎಲ್ಲಿಯೂ ಮರುಕಳಿಸದಂತೆ ಶಿಕ್ಷಣ ಇಲಾಖೆ‌ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಬೇಕು‌ ಎಂದು ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ನಿರ್ದೇಶನ ನೀಡಿದರು.

ಇದನ್ನೂ ಓದಿ:Smartphones & Children: ಮಕ್ಕಳ ಸ್ಮಾರ್ಟ್​ಫೋನ್ ಬಳಕೆಗೆ ಕಡಿವಾಣ; ಚೀನಾ ಸರ್ಕಾರದ ಹೊಸ ನಿಯಮ

ABOUT THE AUTHOR

...view details