ಕರ್ನಾಟಕ

karnataka

ETV Bharat / state

ಹಾಸನ: ಕರ್ತವ್ಯ ಲೋಪದ ಹಿನ್ನೆಲೆ ವಲಯ ಅರಣ್ಯಾಧಿಕಾರಿ ಅಮಾನತು

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿಲ್ಪಾ ಎಸ್ ಎಲ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತುಗೊಳಿಸಲಾಗಿದೆ.

By

Published : Jan 12, 2023, 8:23 PM IST

ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿ
ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿ

ಹಾಸನ: ಕರ್ತವ್ಯ ಲೋಪದ ಹಿನ್ನೆಲೆ ವಲಯ ಅರಣ್ಯಾಧಿಕಾರಿಯೊಬ್ಬರು ಅಮಾನತಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿಲ್ಪಾ ಎಸ್ ಎಲ್ ಅಮಾನತು ಆಗಿರೋ ಅಧಿಕಾರಿ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕರ್ತವ್ಯ ಲೋಪದ ಹಿನ್ನೆಲೆ ವಲಯ ಅರಣ್ಯಾಧಿಕಾರಿ ಅಮಾನತು

ಅಮಾನತಿಗೆ ಕಾರಣ:ಕೆಲ ತಿಂಗಳ ಹಿಂದಷ್ಟೆ ಅಧಿಕಾರವಹಿಸಿಕೊಂಡಿದ್ದ ಶಿಲ್ಪಾ ತಮ್ಮ ಕಚೇರಿಯ ಸಿಬ್ಬಂದಿಯನ್ನು ನಿಯಂತ್ರಿಸುವಲ್ಲಿ ಮತ್ತು ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲವಾಗಿದ್ದು, ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವೈಫಲ್ಯ ಹೊಂದಿದ್ದರು ಎನ್ನಲಾಗಿದೆ. ಅಲ್ಲದೇ, ಕಾಡಾನೆ ಸಮಸ್ಯೆಗೆ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಪ್ರಾಣಿ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇದರ ಜೊತೆಗೆ ಅಧಿಕಾರಿ, ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

ಕರ್ತವ್ಯ ಲೋಪದ ಹಿನ್ನೆಲೆ ವಲಯ ಅರಣ್ಯಾಧಿಕಾರಿ ಅಮಾನತು

ಇನ್ನು ಮೇಲಧಿಕಾರಿಗಳ ಸೂಚನೆ ಹಾಗೂ ಆದೇಶ ಪತ್ರಗಳಿಗೂ ತಮ್ಮ ಕಾರ್ಯಶೈಲಿಯನ್ನು ತಿದ್ದುಕೊಳ್ಳದೇ, ವಲಯ ಅರಣ್ಯಾಧಿಕಾರಿಗೆ ಇರುವ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿ ಆರ್ಥಿಕ ನಷ್ಟ ಉಂಟು ಮಾಡಿದ್ದು, ಕೇಂದ್ರ ಸ್ಥಾನದಲ್ಲಿ ಈ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದ್ದು, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕೂಡಲೇ ಸಕಲೇಶಪುರ ವಲಯದ ಕರ್ತವ್ಯದಿಂದ ಅಮಾನತುಗೊಳಿಸಿ ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಶಿಫಾರಸು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಒನ್ಯಜೀವಿಗಳ ಹಾವಳಿ ವಿಪರೀತ ಹೆಚ್ಚಳ.. ಆನೆ ದಾಳಿ ಹಾವಳಿ:ರಾಜ್ಯದಲ್ಲಿ ಈಗ ಆನೆಗಳ ದಾಳಿಯ ಹಾವಳಿ ಹೆಚ್ಚಾಗಿದೆ. ಅದರ ಫಲವಾಗಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದ್ದರು. ಆನೆಗಳ ಹಾವಳಿಗೆ ಅಂಕುಶ ಹಾಕಲು ಸರ್ಕಾರ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ನಡೆಸುತ್ತಿದೆ. ಆದರೆ ಬ್ಯಾರಿಕೇಡ್ ಅಳವಡಿಕೆ ಕಾರ್ಯ ತೆವಳುತ್ತ ಸಾಗುತ್ತಿದೆ.

ಆನೆ ದಾಳಿಗೆ ಬೇಸತ್ತ ಜನರು ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ ಜನಾಕ್ರೋಶಕ್ಕೆ ಒಳಗಾಗಿದ್ದರು. ಆನೆ ದಾಳಿಗೆ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನೆಲೆ ಸ್ಥಳೀಯರು ಶಾಸಕರ ವಿರುದ್ಧ ಮುಗಿಬಿದ್ದು, ಹಲ್ಲೆ ನಡೆಸಿ ಅಂಗಿ ಹರಿದರು ಎಂಬ ಆರೋಪವನ್ನು ಸ್ವತಃ ಶಾಸಕರೇ ಮಾಡಿದ್ದರು. ಇತ್ತ ಆನೆ ಹಾವಳಿ ಹೆಚ್ಚಾಗಿರುವ ಕಾರಣ ಸಿಎಂ ಬೊಮ್ಮಾಯಿ ಕಳೆದ‌ ವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಆನೆಗಳ ಹಾವಳಿಗೆ ಅಂಕುಶ ಹಾಕಲು ಪ್ರತಿ ಜಿಲ್ಲೆಗಳಲ್ಲಿ ಕಾರ್ಯಪಡೆ ರಚನೆಗೆ ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಆನೆ ದಾಳಿಗೆ ಅನೇಕ ಜೀವಗಳ ಬಲಿ:ಕಳೆದ ಮೂರು ವರ್ಷಗಳಲ್ಲಿ ಆನೆ ದಾಳಿಗೆ ರಾಜ್ಯದಲ್ಲಿ ಒಟ್ಟು 74 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದೆ. 2019-20 ರಲ್ಲಿ ರಾಜ್ಯದಲ್ಲಿ 29 ರೈತರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರೆ, 2020-21ರಲ್ಲಿ 23 ಮಂದಿ ಮೃತಪಟ್ಟಿದ್ದರು. 2021-22ರಲ್ಲಿ 22 ಮಂದಿ ಕಾಡಾನೆ ತುಳಿತಕ್ಕೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ 74 ಮಂದಿಗೆ 4.60 ಕೋಟಿ ರೂ. ಪರಿಹಾರಧನ ನೀಡಲಾಗಿದೆ.

ಕೊಡಗು‌ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 27 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 2019-20ರಲ್ಲಿ 4 ಮಂದಿ ಕಾಡಾನೆಗೆ ಸಿಲುಕಿ ಸಾವನ್ನಪ್ಪಿದರೆ, 2020-21ರಲ್ಲಿ 7 ಮಂಡಿ ಕಾಡಾನೆ ದಾಳಿಗೆ ಬಲಿಯಾಗಿದ್ದರು. 2021-22ರಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ ಕಳೆದ ಆರು ತಿಂಗಳಲ್ಲಿ ಕೊಡಗಿನಲ್ಲಿ ಸುಮಾರು 7 ಮಂದಿ ಕಾಡಾನೆ ದಾಳಿಗೆ ಸಾವಿಗೀಡಾಗಿರುವ ವರದಿಯಾಗಿದೆ.

ಓದಿ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಆನೆ ದಾಳಿ ಪ್ರಕರಣ; ತೆವಳುತ್ತ ಸಾಗುತ್ತಿದೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ

ABOUT THE AUTHOR

...view details