ಹಾಸನ: ಮೂರು ವರ್ಷಗಳ ಹಿಂದೆ ಪ್ರೀತಿಸಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದ ಯುವತಿಯೊಬ್ಬಳು ಇಂದು ಶವವಾಗಿ ಮಲಗಿದ್ದಾಳೆ. ಹಿಂದು-ಮುಂದು ತಿಳಿಯದೇ ಪ್ರೀತಿಸಿ ಮದುವೆಯಾದರೆ ಜೀವನವೇ ನರಕವಾಗಿಬಿಡುತ್ತೆ ಅನ್ನೋದಕ್ಕೆ ಹಾಸನದಲ್ಲಿ ನಡೆದ ಘಟನೆಯೇ ಸಾಕ್ಷಿ.
ಘಟನೆ ಹಿನ್ನೆಲೆ:
ರಶ್ಮಿ (ಹೆಸರು ಬದಲಾಯಿಸಲಾಗಿದೆ) ನೋಡೋಕೆ ಸುಂದರಿ. ಯಾವ ಚಲನಚಿತ್ರ ನಟಿಯರಿಗೂ ಕಡಿಮೆ ಇಲ್ಲ ಎನ್ನುವಂತ್ತಿದ್ದಳು. ಅಲ್ಲದೇ ಒಳ್ಳೇ ಮನೆತನದ ಹುಡುಗಿ. ಕಳೆದ ಮೂರು ವರ್ಷದ ಹಿಂದೆ ಹಾಸನದ ಶಂಕರೀಪುರಂ ನಿವಾಸಿ ಆದಿತ್ಯ ಎಂಬಾತನನ್ನ ಪ್ರೀತಿಸಿ ಮನೆಯವರ ಮಾತನ್ನೂ ಲೆಕ್ಕಿಸದೆ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಳು. ಹೊಸತರಲ್ಲಿ ಸುಂದರ ಸುಖ-ಸಂಸಾರ ಇವರದ್ದಾಗಿತ್ತು. ಆದಿತ್ಯನ ಅಪ್ಪ ನಾಗೇಶ್ ರಾಜ್ಯ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ಚೆನ್ನಾಗಿಯೇ ಇದ್ದಾರೆ.
ಪ್ರಾರಂಭದಲ್ಲಿ ರಶ್ಮಿ ತಂದೆ ಕೃಷ್ಣಕುಮಾರ್ ಮಗಳು-ಅಳಿಯನನ್ನ ಮನೆಗೆ ಸೇರಿಸಿರಲಿಲ್ಲ. ಎರಡು ವರ್ಷದ ನಂತರ ಸಂಬಂಧಿಕರೊಂದಿಗೆ ರಾಜಿ ಪಂಚಾಯಿತಿ ಮಾಡಿ ಮನೆಗೆ ಸೇರಿಸಿದ್ದಾರೆ. ಆದ್ರೆ ದಿನಗಳು ಕಳೆಯುತ್ತಾ ಆದಿತ್ಯ, ವ್ಯವಹಾರದಲ್ಲಿ ನಷ್ಟಹೊಂದಿ ತನ್ನ ತಂದೆಯ ಬಳಿ ಹಣ ಕೇಳಲಾಗದೆ ಮಾವ ಕೃಷ್ಣಕುಮಾರ್ರ ಆಸ್ತಿ ಮೇಲೆ ಕಣ್ಣು ಹಾಕಿದ್ದಾನೆ. ದಿನನಿತ್ಯ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದನಂತೆ. ಎಲ್ಲಾ ವಿಷಯಗಳನ್ನೂ ಕೂಡ ಮನೆಗೆ ಬಂದಾಗ ಮತ್ತು ದೂರವಾಣಿ ಮೂಲಕ ತನ್ನ ತಂದೆಗೆ ರಶ್ಮಿ ಹೇಳಿಕೊಂಡಿದ್ದು, ನಾನು ಒಮ್ಮೆ ತಪ್ಪು ಮಾಡಿದ್ದೇನೆ ಆದರೆ ಮುಂದೆಂದೂ ತಪ್ಪು ಮಾಡೋದಿಲ್ಲ. ನಾನು ಇಂಜಿನಿಯರಿಂಗ್ ಓದಿದ್ದು, ಕೆಲಸಕ್ಕೆ ಹೋಗಿ ದುಡಿದು ತಿನ್ನುತ್ತೇನೆ, ನನ್ನನ್ನು ನಿಮ್ಮ ಮನೆಗೆ ಸೇರಿಸಿಕೊಳ್ಳಿ ಆದಿತ್ಯ ಜೊತೆಗೆ ನನಗೆ ಸಂಸಾರ ಮಾಡಲಿಕ್ಕೆ ಆಗೋದಿಲ್ಲ ಎಂದು ಬೇಡಿಕೊಂಡಿದ್ದಳಂತೆ. ಆಕೆಯ ಮಾತು ಕೇಳಿ ಕರುಳು ಕಿತ್ತು ಬಂದಂತಾದ ತಂದೆ ಕೃಷ್ಣಕುಮಾರ್, ಇನ್ನೆರಡು ದಿನದಲ್ಲಿ ನಿನ್ನನ್ನು ಮನೆಗೆ ಕರದುಕೊಂಡು ಬರುತ್ತೇನೆ ಎಂದು ಹೇಳಿದ್ದರಂತೆ. ಆದರೆ ಅಷ್ಟರಲ್ಲೇ ಆಕೆ ಸಾವನ್ನಪ್ಪಿರುವ ಸುದ್ದಿ ತಂದೆಗೆ ತಲುಪಿತ್ತು.
ಅಳಲು ತೋಡಿಕೊಳ್ಳುತ್ತಿರುವ ಮೃತಳ ಪೋಷಕರು ನಿನ್ನೆ ಸಂಜೆ 5 ಗಂಟೆಗೆ ರಶ್ಮಿಯನ್ನು ಆಸ್ಪತ್ರೆಗೆ ಸೇರಿಸಿದ್ದ ಆಕೆಯ ಗಂಡ ಮತ್ತು ಮಾವನ ಮನೆಯವರು ಒಂದು ಮಾತನ್ನೂ ಸಹ ನಮಗೆ ತಿಳಿಸಿಲ್ಲ. ರಾತ್ರಿ 10.30 ರ ಸಂದರ್ಭದಲ್ಲಿ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಪೊಲೀಸರು ಕೂಡ ರಶ್ಮಿಯ ಹೇಳಿಕೆಯನ್ನು ತೆಗೆದುಕೊಂಡಿದ್ದು, ಅವರೂ ನಮಗೆ ವಿಷಯ ತಿಳಿಸದೇ ಮುಚ್ಚಿಟ್ಟು, ಅವಳು ಹೇಳಿದ ಹೇಳಿಕೆಯನ್ನು ನಮಗೆ ನೀಡುತ್ತಿಲ್ಲ. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯವಳಲ್ಲ ಎಂದು ತಮ್ಮ ಅಳಲು ತೋಡಿಕೊಂಡ ರಶ್ಮಿ ಪೋಷಕರು, ಆಕೆಯನ್ನು ಇವರೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕವೇ ಆಕೆಯ ಸಾವಿಗೆ ಕಾರಣ ತಿಳಿಯಬೇಕಿದೆ.