ಕರ್ನಾಟಕ

karnataka

By

Published : Aug 8, 2020, 11:23 PM IST

ETV Bharat / state

ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಲಿಂಗೇಶ್

72 ಗಂಟೆಯಲ್ಲಿ ತಾಲೂಕಿನಲ್ಲಿ ಸುರಿದ ಮಳೆಯಿಂದ ತಾಲೂಕಿನಲ್ಲಿ ಬೆಳೆದಿರುವ ಕಾಫಿ, ಶುಂಠಿ, ಜೋಳ ಮುಂತಾದ ಬೆಳೆಗಳು ಹಾಳಾಗಿದ್ದು, ಅಪಾರ ಹಾನಿ ಸಂಭವಿಸಿರುವುದಾಗಿ ಶಾಸಕ ಲಿಂಗೇಶ್ ತಿಳಿಸಿದರು.

Belur Taluk
ಬೇಲೂರು ತಾಲ್ಲೂಕಿನ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಲಿಂಗೇಶ್

ಬೇಲೂರು: ಈ ಬಾರಿ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಸುಮಾರು 300 ಕೋಟಿಗೂ ಅಧಿಕ ಮೊತ್ತದ ಬೆಳೆಹಾನಿಯಾಗಿದೆ ಎಂದು ಶಾಸಕ ಲಿಂಗೇಶ್ ತಿಳಿಸಿದರು.

ಬೇಲೂರು ತಾಲ್ಲೂಕಿನ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಲಿಂಗೇಶ್

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾದ ಬಳಿಕ ಮೂರು ವರ್ಷವೂ ಕೂಡ ನಮ್ಮ ಜಲಾಶಯ ತುಂಬಿದ್ದು, ರೈತರಿಗೆ ಒಂದು ಕಡೆ ಸಂತೋಷ ಮತ್ತೊಂದು ಕಡೆ ಬೆಳೆ ನಷ್ಟವಾಗಿದೆ. 72 ಗಂಟೆಯಲ್ಲಿ ಸುರಿದ ಮಳೆಯಿಂದ ನಮ್ಮ ತಾಲೂಕಿನಲ್ಲಿ ಬೆಳೆದಿರುವ ಕಾಫಿ, ಶುಂಠಿ, ಜೋಳ ಮುಂತಾದ ಬೆಳೆಗಳು ಹಾಳಾಗಿದ್ದು ಸಾವಿರಾರು ಎಕರೆ ಪ್ರದೇಶದ ಕೃಷಿ ನೀರಿನಲ್ಲಿ ಮುಳುಗಿದೆ. ಇನ್ನು ತಾಲೂಕಿನ ಸುಮಾರು 12ಕ್ಕೂ ಅಧಿಕ ಮನೆಗಳು, 170ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ದುರಸ್ತಿಗೆ ಈಗಾಗಲೇ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಭಾಗದಿಂದ ಸಿಬ್ಬಂದಿಗಳನ್ನು ಕರೆಸಿ ಸರಿಪಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಇಂದು ಬೆಳಗ್ಗೆ ಮಾದಿಹಳ್ಳಿ-ಹಳೇಬೀಡು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು, ಇದರಿಂದ ಸುಮಾರು 32 ಕೆರೆಗಳನ್ನು ತುಂಬಿಸುವ ಕಾರ್ಯ ಇಂದಿನಿಂದ ಪ್ರಾರಂಭವಾಗಿದೆ. ಶಾಶ್ವತ ನೀರಾವರಿ ಯೋಜನೆ ಮಾಡಬೇಕೆಂಬ ಉದ್ದೇಶ ಇದಾಗಿದ್ದು, ಹಿಂದೆ ಹೊಯ್ಸಳರ ಕಾಲದಲ್ಲಿ ರಣಘಟ್ಟ ಮೂಲಕ ದ್ವಾರಸಮುದ್ರ ಕೆರೆ ನೀರನ್ನು ಹರಿಸಲಾಗುತ್ತಿತ್ತು. ಆದರೆ ದಶಕಗಳ ಹಿಂದೆ ಅದು ಮುಚ್ಚಿದ್ದರಿಂದ ಕುಮಾರಸ್ವಾಮಿ ಸರ್ಕಾರದಲ್ಲಿ ಇದಕ್ಕೆ ನೂರು ಕೋಟಿ ಹಣವನ್ನು ಸರ್ಕಾರ ಮೀಸಲಿಟ್ಟಿದ್ದು, ಈಗಿನ ಸರ್ಕಾರ ಅದನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಮುಂದಿನ ದಿನಗಳಲ್ಲಿ ಅದನ್ನು ಕಾರ್ಯಗತ ಮಾಡಬೇಕೆಂದು ಈಗಾಗಲೇ ಸಿಎಂ ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.

ಯಮಸಂಧಿ ಗ್ರಾಮಪಂಚಾಯತಿಗೆ ಒಳಪಡುವ ಅಗಸರಹಳ್ಳಿ ಸೇತುವೆಯಲ್ಲಿ ಮತ್ತೆ ಕುಸಿತ ಉಂಟಾಗಿದ್ದು, ಅಪಾರ ಪ್ರಮಾಣದ ನಷ್ಟ ಆಗಿದೆ. ಇದರ ಜೊತೆಗೆ ಅಗಸರಹಳ್ಳಿಯಿಂದ ಬೇಲೂರಿಗೆ ಬರಬೇಕೆಂದರೆ ಕೇವಲ ಐದು ಕಿಲೋಮೀಟರ್ ಆಗುತ್ತಿತ್ತು. ಆದರೆ ಇಂದು ರಸ್ತೆ ಸಂಪರ್ಕ ಕಡಿತವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಹೋಗಿ ಬೇಲೂರಿಗೆ ಬರಬೇಕಾದರೆ ಸುಮಾರು 25 ಕಿಲೋಮೀಟರ್ ಕ್ರಮಿಸಿ ಬೇಲೂರಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಇದಕ್ಕೆ ಎರಡು ಲಕ್ಷ ರೂಪಾಯಿಗಳಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯ ಮಾಡಿದ್ದು, ಅದಕ್ಕೆ ಶಾಶ್ವತವಾದ ಸೇತುವೆ ನಿರ್ಮಾಣ ಕಾರ್ಯಕ್ಕೆ ಕೊರೊನಾ ಬಂದಿದ್ದರಿಂದ ಸಮಯ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದರು.

ABOUT THE AUTHOR

...view details