ಕರ್ನಾಟಕ

karnataka

By

Published : Feb 26, 2023, 3:37 PM IST

ETV Bharat / state

ಗದಗದಲ್ಲಿ ಭೀಕರ ರಸ್ತೆ ಅಪಘಾತ.. ಪೊಲೀಸ್ ಹೆಡ್​ ಕಾನ್ಸ್​ಸ್ಟೇಬಲ್ ಸಾವು

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಬಳಿ ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್​ ಕಾನ್ಸ್​ಸ್ಟೇಬಲ್​​ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮುಂಡರಗಿ ಠಾಣೆಯ ಕೊಟ್ರೆಪ್ಪ ಬಂಡಗಾರ
ಮುಂಡರಗಿ ಠಾಣೆಯ ಕೊಟ್ರೆಪ್ಪ ಬಂಡಗಾರ

ಗದಗ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಹೆಡ್​ಕಾನ್ಸ್‌ಟೇಬಲ್ ಒಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.

ಮುಂಡರಗಿ ಠಾಣೆಯ ಕೊಟ್ರೆಪ್ಪ ಬಂಡಗಾರ (59) ಮೃತ ಪೊಲೀಸ್ ಹೆಡ್​​ಕಾನ್ಸ್‌ಟೇಬಲ್ ಎಂಬುದು ತಿಳಿದು ಬಂದಿದೆ. ಕೊಟ್ರೆಪ್ಪ ಅವರು ಮುಂಡರಗಿ ತಾಲೂಕಿನ ಡಂಬಳದಲ್ಲಿ ಕರ್ತವ್ಯದ ಮೇಲೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 12 ಗಂಟೆಯ ಬಳಿಕ ಮನೆಗೆ ತೆರಳುತ್ತಿದ್ದರು. ಡಂಬಳದಿಂದ ಮುಂಡರಗಿ ಕಡೆಗೆ ಹೊರಟಿದ್ದ ವೇಳೆ ಅಪರಿಚಿತ ಟ್ರ್ಯಾಕ್ಟರ್​ವೊಂದು ಹಿಟ್ ಅಂಡ್ ರನ್ ಮಾಡಿದೆ ಪೊಲೀಸ್​ ಇಲಾಖೆಯ ಮೂಲಗಳು ತಿಳಿಸಿವೆ.

ಮೃತ ಕೊಟ್ರೆಪ್ಪ ಬಂಡಗಾರ ಅವರು ಮೂಲತಃ ಮುಂಡರಗಿ ತಾಲೂಕಿನ ಜಂತ್ಲಿಶೀರೂರ್ ನಿವಾಸಿಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಮುಂಡರಗಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮುಂಡರಗಿ ಪೊಲೀಸರು ಪರಿಶೀಲನೆ ಮಾಡಿ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಟ್ರ್ಯಾಕ್ಟರ್ - ಕಾರು ನಡುವೆ ಅಪಘಾತ, 4 ವರ್ಷದ ಮಗು ಸಾವು :ಇನ್ನೊಂದೆಡೆಕೊಪ್ಪಳದ ಬಹದ್ದೂರ್​ ಬಂಡಿ ಕ್ರಾಸ್ ಬಳಿ ಮರಳು ತುಂಬಿದ್ದ ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದ 4 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ‌.

ಅಪಘಾತಕ್ಕೊಳಗಾದ ಟ್ರ್ಯಾಕ್ಟರ್​

ಗದಗನಿಂದ ಹೊಸಪೇಟೆಯತ್ತ ತೆರಳುತ್ತಿದ್ದ ಕಾರು ಎದುರಿಗೆ ಬಂದ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇತರೇ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ಜರುಗಿದ್ದು, ತನಿಖೆ ಕೈಗೊಂಡಿದ್ದಾರೆ.

ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ :ಇನ್ನೊಂದೆಡೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಿಂತಿದ್ದ ಟ್ರ್ಯಾಕ್ಟರ್​ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಲೋಕೇಶ್​ ಆಚಾರಿ, ಪತ್ನಿ ಲಕ್ಷ್ಮಿ, ಮಕ್ಕಳಾದ ಲೇಖನ ಮತ್ತು ಗಾನವಿ ಎಂದು ಗುರುತಿಸಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದ ಸವಾರ, ಇಂಧನ ಖಾಲಿಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರು ಅಸುನೀಗಿದ್ದಾರೆ ಎಂಬುದು ತಿಳಿದುಬಂದಿದೆ.

ಚನ್ನರಾಯಪಟ್ಟಣ ತಾಲೂಕಿನ ನವಿಲೇ ಗೇಟ್ ಗ್ರಾಮದ ಲೋಕೇಶ್ ಆಚಾರಿ 12 ವರ್ಷದ ಹಿಂದೆ ಲಕ್ಷ್ಮಿ ಎಂಬುವರನ್ನು ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ತನ್ನ ತಂಗಿಯ ಇಬ್ಬರು ಹೆಣ್ಣು ಮಕ್ಕಳಾದ ಗಾನವಿ ಮತ್ತು ಲೇಖನಳನ್ನು ಕರೆದುಕೊಂಡು ಬಂದು ತಾವೇ ಸಾಕುತ್ತಿದ್ದರು. ಅಕ್ಕಪಕ್ಕದ ದೇವಸ್ಥಾನಗಳನ್ನು ಸುತ್ತಿ ನೂರಾರು ಹರಕೆ ಕಟ್ಟಿಕೊಂಡ ಬಳಿಕ ಕಳೆದ ಮೂರು ತಿಂಗಳ ಹಿಂದಷ್ಟೇ ಪತ್ನಿ ಲಕ್ಷ್ಮಿ ಗರ್ಭ ಧರಿಸಿದ್ದರು. ಹಾಗಾಗಿ, ಮನೆಯಲ್ಲಿ ಸಂಭ್ರಮ ನೆಲೆಸಿತ್ತು.

ಅಪಘಾತಕ್ಕೂ ಮುನ್ನ ದೊಡ್ಡಮ್ಮನನ್ನು ನೋಡಬೇಕು ಅಂತ ಮಕ್ಕಳು ಕೇಳಿದ್ದಕ್ಕೆ ಇಡೀ ಕುಟುಂಬ ಸಮೇತ ಬಿ ಹೊಸೂರು ಗ್ರಾಮಕ್ಕೆ ಹೋಗಿ, ರಾತ್ರಿ ಊಟ ಮುಗಿಸಿ ಬೈಕ್​ನಲ್ಲಿ ವಾಪಸ್ ಊರಿಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ರೂಪದ ಯಮಸ್ವರೂಪಿಗೆ ದಂಪತಿ ಸೇರಿದಂತೆ ತನ್ನ ತಂಗಿಯ ಮಕ್ಕಳು ಬಲಿಯಾಗಿದ್ದು, ಗರ್ಭದಲ್ಲಿದ್ದ ಕೂಸು ಕೂಡ ಮೃತಪಟ್ಟಿದೆ.

ಇದನ್ನೂ ಓದಿ :ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಗರ್ಭಿಣಿ ಸೇರಿ ಒಂದೇ ಕುಟುಂಬದ ನಾಲ್ವರು ಬಲಿ!

ABOUT THE AUTHOR

...view details