ಕರ್ನಾಟಕ

karnataka

By ETV Bharat Karnataka Team

Published : Oct 16, 2023, 12:22 PM IST

Updated : Oct 16, 2023, 7:58 PM IST

ETV Bharat / state

ಗದಗ ಬಳಿ ಸರ್ಕಾರಿ ಬಸ್ - ಟಾಟಾ ಸುಮೋ ನಡುವೆ ಡಿಕ್ಕಿ: ಸಾವಿನ ಸಂಖ್ಯೆ ಆರಕ್ಕೆ ಏರಿಕೆ

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಆರು ಜನ ಮೃತಪಟ್ಟಿದ್ದಾರೆ. ಮೃತರು ಕಲಬರಗಿಯ ಅಫಜಲಪುರ, ಮಾದನಹಿಪ್ಪರಗಿ ಮೂಲದವರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸರ್ಕಾರಿ ಬಸ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿ
Accident btw govt bus and Tata Sumo

ಗದಗ: ಸರ್ಕಾರಿ ಬಸ್ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ ಆರು ಜನ ಮೃತಪಟ್ಟಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ.

ಶಿವಕುಮಾರ ಕಲಶೆಟ್ಟಿ (50), ಚಂದ್ರಕಲಾ ಕಲಶೆಟ್ಟಿ(40), ರಾಣಿ ಕಲಶೆಟ್ಟಿ (32), ದಿಂಗಾಲೇಶ್ ಕಲಶೆಟ್ಟಿ(5), ಸಚಿನ್​​ ಕತ್ತಿ(33) ಹಾಗೂ ದಾಕ್ಷಾಯಿಣಿ ಕತ್ತಿ (31) ಮೃತ ದುರ್ದೈವಿಗಳು. ಸ್ಥಳದಲ್ಲಿಯೇ ಐವರು ಮೃತಪಟ್ಟರೆ, ಚಿಕಿತ್ಸೆ ಫಲಿಸದೇ ಜಿಮ್ಸ್​ ಜಿಲ್ಲಾಸ್ಪತ್ರೆಯಲ್ಲಿ ಬಾಲಕನೊಬ್ಬ ಕೊನೆಯುಸಿರೆಳೆದಿದ್ದಾನೆ.

ಇನ್ನು ಗಂಭೀರವಾಗಿ ಗಾಯಗೊಂಡ ಮಹೇಶ್, ಅನಿತಾ, ಅಲ್ಲಮಪ್ರಭು ಈ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಹಾಗೂ ಗಾಯಾಳುಗಳು ಒಂದೇ ಕುಟುಂಬಸ್ಥರಾಗಿದ್ದು, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಮಾದನ ಹಿಪ್ಪರಗಿ ಹಾಗೂ ಅಫಜಲಪುರ ನಿವಾಸಿಗಳು ಎಂದು ಪೊಲೀಸ್​ ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ:ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು

ಟಾಟಾ ಸುಮೋದಲ್ಲಿದ್ದವರು ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಭೇಟಿ ನೀಡುವ ಉದ್ದೇಶದಿಂದ ಕಲಬುರಗಿಯಿಂದ ಗಜೇಂದ್ರಗಡ ಮಾರ್ಗವಾಗಿ ಬರುತ್ತಿದ್ದರು. ಅದೇ ಮಾರ್ಗದಲ್ಲಿ ಸಾರಿಗೆ ಬಸ್​ ಗದಗದಿಂದ ಗಜೇಂದ್ರಗಡದತ್ತ ಹೊರಟಿತ್ತು. ಈ ವೇಳೆ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ಪರಿಣಾಮ ಟಾಟಾ ಸುಮೋದಲ್ಲಿದ್ದ ಓರ್ವ ಬಾಲಕ ಸೇರಿ ಆರು ಜನ ಮೃತಪಟ್ಟಿದ್ದಾರೆ. ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಬಸ್​ನಲ್ಲಿದ್ದ ಕೆಲವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಟಾಟಾ ಸುಮೋ ವಾಹನದಲ್ಲಿ ಒಟ್ಟು 9 ಜನರು ಪ್ರಯಾಣಿಸುತ್ತಿದ್ದರು. ನಿನ್ನೆ ಶ್ರೀಗಳಿಗೆ ಫೋನ್ ಮಾಡಿದ್ದ ಕಲಶೆಟ್ಟಿ‌ ಕುಟುಂಬಸ್ಥರು, ಒಟ್ಟಾಗಿ ಬರುವುದಾಗಿ ತಿಳಿಸಿದ್ದರು. ಆದರೆ, ವಿಧಿಯಾಟ ಹೀಗೆ ಆಟ ಆಡಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ನರೇಗಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿಷಯ ತಿಳಿದು ಜಿಮ್ಸ್ ಆಸ್ಪತ್ರೆಗೆ ಧಾವಿಸಿದ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಗಾಯಾಳು, ಮಕ್ಕಳ ಆರೋಗ್ಯ ವಿಚಾರಿಸಿದರು. ಈ ವೇಳೆ, ಮಠದ ಜೊತೆ 25 ವರ್ಷದಿಂದ ಅವಿನಾಭಾವ ಸಂಬಂಧ ಹೊಂದಿದ್ದ ಕುಟುಂಬಸ್ಥರ ಅಗಲಿಕೆ‌ ನೆನೆದು ಶ್ರೀಗಳು ಕಣ್ಣೀರಿಟ್ಟರು.‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಟ್ರಕ್​ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್​ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ

Last Updated : Oct 16, 2023, 7:58 PM IST

ABOUT THE AUTHOR

...view details