ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಖಾಸಗಿ ಕಾಲೇಜಿನ‌ ವಿದ್ಯಾರ್ಥಿನಿಯರ ಫೋಟೋ ವೈರಲ್ ಪ್ರಕರಣ: ಪೊಲೀಸ್ ಕಮಿಷನರ್ ಹೇಳಿದ್ದೇನು?

ವಿದ್ಯಾರ್ಥಿನಿಯರ ಫೋಟೋಗಳನ್ನು ಅಸಭ್ಯವಾಗಿ ಇನ್​ಸ್ಟಾಗ್ರಾಂ ಪೋಸ್ಟ್ ಮಾಡಿದ್ದ ಮೂವರು ಆರೋಪಿಗಳು ಇನ್ನೊಂದು ಗುಂಪಿನ‌ ಮೇಲೆ ರಿವೇಂಜ್ ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಕಮಿಷನರ್​ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

By

Published : Aug 12, 2023, 6:36 PM IST

Updated : Aug 12, 2023, 7:41 PM IST

police-commissioner-renuka-sukumar-reaction-college-girls-photo-viral-case
ಹುಬ್ಬಳ್ಳಿ ಖಾಸಗಿ ಕಾಲೇಜಿನ‌ ವಿದ್ಯಾರ್ಥಿನಿಯರ ಅಸಭ್ಯ ಪೋಟೋ ವೈರಲ್ ಪ್ರಕರಣ: ಪೊಲೀಸ್ ಕಮಿಷನರ್ ಹೇಳಿದ್ದೇನು?

ವಿದ್ಯಾರ್ಥಿನಿಯರ ಫೋಟೋ ವೈರಲ್ ಪ್ರಕರಣ ಬಗ್ಗೆ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ

ಹುಬ್ಬಳ್ಳಿ:"ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋಗಳನ್ನು ಅಸಭ್ಯವಾಗಿ ಇನ್​ಸ್ಟಾಗ್ರಾಂ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ" ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್​ ರೇಣುಕಾ ಸುಕುಮಾರ್​ ತಿಳಿಸಿದರು. ನಗರದಲ್ಲಿಂದು ಮಾತನಾಡಿದ ಅವರು, "ಈ ಪ್ರಕರಣದ ಮೂವರು ಆರೋಪಿಗಳು ಅದೇ ಖಾಸಗಿ ಕಾಲೇಜಿನವರಾಗಿದ್ದು, ಇನ್ನೊಂದು ಯುವಕರು ಹಾಗೂ ಯುವತಿಯ ಗುಂಪಿನ‌ ಮೇಲೆ ರಿವೆಂಜ್ ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ" ಎಂದು ಹೇಳಿದರು.

"ಪ್ರಕರಣದ ಎ1 ಆರೋಪಿ ಹಾಗೂ ಮತ್ತಿಬ್ಬರನ್ನು ಮತ್ತೊಂದು ಗುಂಪಿನ ಯುವಕರು ಸೇರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅವರ ಕಡೆಯ ವಿದ್ಯಾರ್ಥಿನಿಯರ ಫೋಟೋಗಳನ್ನು ಅಸಭ್ಯವಾಗಿ ವೈರಲ್ ಮಾಡಿದರೆ ಅವರಿಗೆ ನಾಟುತ್ತದೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾರೆ. ಇದರಲ್ಲಿ ಎ1 ಆರೋಪಿಯೇ ಮಾಸ್ಟರ್ ಮೈಂಡ್ ಆಗಿದ್ದು, ಸೈಬರ್ ಹಾಗೂ ಕಂಪ್ಯೂಟರ್ ಬಗ್ಗೆ ಮಾಹಿತಿ ಇದಿದ್ದರಿಂದ ಮೂವರು ಸೇರಿ ಈ ಕೃತ್ಯ ಮಾಡಿದ್ದಾರೆ. ಇನ್ನೂ ತನಿಖೆ ಮುಂದುವರೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ" ಎಂದರು.

ಗಾರ್ಮೆಂಟ್ಸ್ ಮಾಲಕಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಕುಟುಂಬಸ್ಥರ ಪ್ರತಿಕ್ರಿಯೆ

ಗಾರ್ಮೆಂಟ್ಸ್ ಮಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ - ಆತ್ಮಹತ್ಯೆಯಲ್ಲ ಕೊಲೆ ಎಂದ ಸಂಬಂಧಿಗಳು: ಗಾರ್ಮೆಂಟ್ಸ್ ಮಾಲಕಿ ಪ್ರಿಯಾ ಬೋಂಗಲೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೃತಳ ಸಂಬಂಧಿಗಳು ಹುಬ್ಬಳ್ಳಿ -ಧಾರವಾಡ ಪೊಲೀಸ್ ‌ಕಮಿಷನರ್​ ಅವರಿಗೆ ದೂರು ಸಲ್ಲಿಸಿ, ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡು ಎಂದು ಮನವಿ ಮಾಡಿದ್ದಾರೆ. ನಿನ್ನೆ ನವನಗರ ಗಾರ್ಮೆಂಟ್ಸ್​ನಲ್ಲೇ ಪ್ರಿಯಾ ಬೋಂಗಲೆ ಎಂಬುವವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ಇಂದು ಇದು ಕೊಲೆ ಎಂದು ಮೃತ ಪ್ರಿಯಾ ಬೋಂಗಲೆ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಿಯಾ ಅವರ ಸಹೋದರ ರಾಹುಲ್ ಮಾತನಾಡಿ, "ಕಳೆದ 16 ವರ್ಷಗಳ‌ ಹಿಂದೆ ಕಂದಾಯ ಇಲಾಖೆಯ ನೌಕರರಾಗಿರುವ ಹಳಿಯಾಳ ಮೂಲದ ವಿನೋದ ಬೋಂಗಲೆ ಎಂಬುವರ ಜೊತೆ ಪ್ರಿಯಾರನ್ನು ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ವರೋಪಚಾರ ಮಾಡಿ ಮದುವೆ ಮಾಡಿಕೊಡಲಾಗಿತ್ತು. ಆದರೂ ಇನ್ನೂ ವರದಕ್ಷಿಣೆಗೆ ಪತಿ ಬೇಡಿಕೆ ಇಟ್ಟಿದ್ದ. ಇದಲ್ಲದೆ ಇತ್ತೀಚಿಗೆ ನಮ್ಮ ಸಹೋದರಿ ಮೇಲೆ ಸಾಕಷ್ಟು ಅನುಮಾನಪಡುತ್ತಿದ್ದ" ಎಂದರು.

"ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಹಲ್ಲೆ ನಡೆಸಿ ಪ್ರಿಯಾ ಅವರ ಕೈ ಮುರಿದಿದ್ದ. ಆದರೂ ನಮ್ಮ ಸಹೋದರಿ ಯಾವುದೇ ಮಾಹಿತಿಯನ್ನು ನಮಗೆ ತಿಳಿಸುತ್ತಿರಲಿಲ್ಲ. ಇತ್ತೀಚಿಗೆ ಪತಿಯ ಕಾಟ ಹೆಚ್ಚಾಗಿದ್ದರಿಂದ ವಿಚ್ಚೇದನಕ್ಕೆ ಅರ್ಜಿ ಹಾಕಲಾಗಿತ್ತು. ಅದರ ಜೊತೆಗೆ ಆಕೆಯ ಜೀವನೋಪಾಯಕ್ಕಾಗಿ ಗಾರ್ಮೆಂಟ್ ಕೂಡ ಖರೀದಿ ಮಾಡಿದ್ದೆವು. ಅಷ್ಟರಲ್ಲಿ ಈ ರೀತಿ ಮಾಡಲಾಗಿದೆ. ಇದು ಆತ್ಮಹತ್ಯೆಯಲ್ಲ‌ ಕೊಲೆ" ಎಂದು ಆರೋಪಿಸಿದರು.

"ನನ್ನ ಮಗಳು ಆತ್ಮಹತ್ಯೆ ‌ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಆದರೆ ಆಕೆಯನ್ನು ಪತಿ ವಿನೋದ, ಆತನ ಸಹೋದರ ಆನಂದ ಹಾಗೂ ರೇಖಾ ಎಂಬುವವರು ಸೇರಿ ಕೊಲೆ‌ ಮಾಡಿದ್ದಾರೆ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದರಿಂದ ಕೊಲೆ ಮಾಡಿದ್ದಾರೆ. ಹೀಗಾಗಿ‌ ಸಾವಿಗೆ ಕಾರಣರಾದ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು" ಎಂದು ಮೃತಳ‌ ತಾಯಿ ಪುಷ್ಪ ಒತ್ತಾಯಿಸಿದ್ದಾರೆ.

"ಪ್ರಿಯಾ ಬೋಂಗಲೆ ಸಾವು ಅಸಹಜ ಎಂದು ಮೃತಳ ಸಂಬಂಧಿಗಳು ಹೇಳುತ್ತಿದ್ದಾರೆ.‌ ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುತ್ತಿದ್ದೇವೆ. ಮೃತಳ ಕುಟುಂಬಸ್ಥರು ಭೇಟಿಯಾಗಿ ಎಲ್ಲಾ ಮಾಹಿತಿ ನೀಡಿದ್ದಾರೆ. ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಅವರ ಆರೋಪಗಳನ್ನು ‌ಗಣನೆಗೆ ತಗೆದುಕೊಂಡು ಮುಕ್ತವಾಗಿ ಎಲ್ಲಾ ವೈಜ್ಞಾನಿಕ ಹಂತದ ತನಿಖೆ ಮಾಡಲಾಗುತ್ತಿದೆ. ಯಾರಾದರೂ ತಪ್ಪಿತಸ್ಥರಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು" ಎಂದು ಹು-ಧಾ ಪೊಲೀಸ್ ಕಮಿಷನರ್​ ಅವರು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಖಾಸಗಿ ಕಾಲೇಜು ವಿದ್ಯಾರ್ಥಿನಿಯರ ಫೋಟೋ ವೈರಲ್ ಪ್ರಕರಣ: ಮತ್ತಿಬ್ಬರ ಬಂಧನ

Last Updated : Aug 12, 2023, 7:41 PM IST

ABOUT THE AUTHOR

...view details