ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಕೀಯದಿಂದ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ಬೇಸರ ತಂದಿದೆ. ಅವರಿಗೆ ಇನ್ನು ರಾಜಕಾರಣ ಮಾಡುವ ಶಕ್ತಿ ಇದೆ. ಅವರಿಂದ ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂದಿತ್ತು. ಏಕಾಏಕಿ ಈಗ ಅವರು ನಿವೃತ್ತಿಯಾಗಿದ್ದು, ನನಗೆ ಬಹಳ ಬೇಸರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದ್ರು. ಆದರೆ ಬಿಜೆಪಿಯವರು ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅಲ್ಲದೇ ಹೈಕಮಾಂಡ್ ಅವರಿಗೆ ಸಾಕಷ್ಟು ನೋವು ನೀಡಿದೆ. ಅದೆಲ್ಲ ನುಂಗಿಕೊಂಡು ಪಾರ್ಟಿ ಪರವಾಗೇ ಮಾತನಾಡ್ತಾರೆ. ಇವತ್ತು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಆದರೆ, ಅದರಿಂದ ನಮ್ಮ ಪಕ್ಷಕ್ಕೆ ನಷ್ಟ ಇಲ್ಲ ಎಂದು ತಿಳಿಸಿದರು.
ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರಧ್ವಜ ತಯಾರಿ:ಚರಕ ದೇಶದ ಆಸ್ತಿ, ಗಾಂಧೀಜಿ ದೇಶಕ್ಕೆ ಬಳುವಳಿಯಾಗಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಿಜೆಪಿ ಸರ್ಕಾರ ರಾಷ್ಟ್ರಧ್ವಜವನ್ನು ಪಾಲಿಸ್ಟರ್ ಬಟ್ಟೆಗಳಿಂದ ಮಾಡಲು ಅನುಮತಿ ನೀಡಿದೆ. ಇದು ದೇಶಕ್ಕೆ ಅವಮಾನ. ಪ್ರತಿ ಮನೆಯಲ್ಲಿ ರಾಷ್ಟ್ರದ ಬಾವುಟ ಹಾಕುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.