ಕರ್ನಾಟಕ

karnataka

By

Published : May 27, 2023, 8:16 PM IST

ETV Bharat / state

ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಮನಸೆಳೆದ ಸಾವಯವ ಮೇಳ.. ಹಲಸು ಹಬ್ಬ..!

ಹುಬ್ಬಳ್ಳಿಯ ಮೂರು ಸಾವಿರ ಮಠದ ಸಭಾಭವನದಲ್ಲಿ ಎರಡು ದಿನ ಕಾಲ ಸಹಜ ಸಮೃದ್ಧಿ ಸಂಸ್ಥೆ ಆಶ್ರಯದಲ್ಲಿ ಸಾವಯವ ಮೇಳ ಹಾಗೂ ಹಲಸಿನ ಹಬ್ಬ ಆಯೋಜಿಸಲಾಗಿದೆ. ವಿವಿಧ ಜಾತಿ ಹಲಸಿನ ಹಣ್ಣುಗಳು ಗ್ರಾಹಕರ ಗಮನ ಸೆಳೆದವು.

Halasu festival at hubli muru savira matha
ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಹಲಸು ಹಬ್ಬ

ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಹಲಸು ಹಬ್ಬ

ಹುಬ್ಬಳ್ಳಿ:ವಿಧ ವಿಧವಾದ ಗಡ್ಡೆ ಗೆಣಸು, ತರಕಾರಿ ಬೀಜ, ಸಿರಿ ಧಾನ್ಯ, ಹೋಳಿಗೆ, ಹಪ್ಪಳ, ಚಿಪ್ಸ್ ಹೀಗೆ ಆಹಾರ ಪದಾರ್ಥಗಳು ಎಲ್ಲ ಗ್ರಾಹಕರನ್ನು ಸೆಳೆಯುತ್ತಿದ್ದವು. ಇವೆಲ್ಲದರ ಆಕರ್ಷಣೆ ಮೀರಿಯೂ ಹಲಸಿನ ಹಣ್ಣಿನ ಘಮ ಇಡೀ ಪರಿಸರವನ್ನು ಆಹ್ಲಾದಗೊಳಿಸಿತು.

ಹೌದು.‌.. ಇಲ್ಲಿನ ಮೂರು ಸಾವಿರ ಮಠದ ಸಭಾಭವನದಲ್ಲಿ ಸಹಜ ಸಮೃದ್ಧಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಸಾವಯವ ಆಹಾರ ಮೇಳ ಹಾಗೂ ಹಲಸಿನ ಹಣ್ಣಿನ ಮೇಳವೂ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.ಈ ಹಲಸಿನ‌ ಹಬ್ಬದಲ್ಲಿ ದುಂಡು ಹಲಸು, ಕಲಕಟ್ಟಿ ಲೋಕಲ್ ಹಲಸು , ಮೂಡಗೇರಿ ಹಲಸು, ಉದ್ದ ಹಲಸು, ಲಕ್ಷ್ಮೇಶ್ವರ, ಹೆಬ್ಬಲ ಹಲಸು, ಲಾಲಭಾಗ ಮಧುರಾ, ರುದ್ರಾಕ್ಷಿ ಹಲಸು, ಪುಟ್ಟ ಹಲಸು ಗ್ರಾಹಕರ ಗಮನ ಸೆಳೆದವು.

15ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲಸು ಮಾವು :ತಾಜಾ ಹಲಸಿನ ಹಣ್ಣು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. 15ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲಸು, ಮಾವು, ಬೆಲ್ಲ ಸೇರಿದಂತೆ ಸಾವಯವ ವಿವಿಧ ಉತ್ಪನ್ನಗಳು ಮಾರಾಟಕ್ಕಿಡಲಾಗಿತ್ತು. ಹಲಸಿನ ಮೌಲ್ಯರ್ವಧಿತ ಉತ್ಪನ್ನಗಳು, ಗಡ್ಡೆ-ಗೆಣಸು, ಗೋ, ಬೆಲ್ಲ, ರಾಗಿಯಿಂದ ತಯಾರಿಸಿದ ಸಾವಯವ ಉತ್ಪನ್ನಗಳನ್ನು ಹುಬ್ಬಳ್ಳಿ - ಧಾರವಾಡ, ಗದಗ, ರಾಯಚೂರು ಮೊದಲಾದ ಭಾಗಗಳಿಂದ ರೈತರು, ಉತ್ಪಾದಕರು ಮಾರಾಟಕ್ಕೆ ತಂದಿದ್ದರು. ಸಾವಯವ ಆಹಾರ ಪದಾರ್ಥ , ಹಲಸಿನಿಂದ ಮಾಡಿದ ಉತ್ಪನ್ನಗಳನ್ನು ಸಹ ಈ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ.

ಹಲಸಿನಿಂದ ವಿವಿಧ ಖಾದ್ಯ ತಯಾರಿಕೆ:ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಸಾವಯವ ಆಹಾರ ಮೇಳ ಹಾಗೂ ಹಲಸಿನ ಹಣ್ಣಿನ ಮೇಳ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಹಲಸು ರೈತರಿಗೆ ಆರ್ಥಿಕ ಸಬಲತೆ ತಂದುಕೊಡುವ ಫಲವಾಗಿದೆ.

ರೈತರು ತಮ್ಮ ಹೊಲದ ಬದುಗಳಲ್ಲಿ ಹಲಸನ್ನು ಬೆಳೆಯುವದು ಸೂಕ್ತ. ಎಲ್ಲ ವಾತಾವರಣಕ್ಕೂ ಬೆಳೆಯುವುದರಿಂದ ರೈತರಿಗೆ ಆರ್ಥಿಕವಾಗಿ ಹಾಗೂ ಆರೋಗ್ಯಕ್ಕೂ ಉತ್ತಮ ಬೆಳೆಯಾಗಿದೆ. ರೈತರು ಹಲಸು ಕೃಷಿಯತ್ತ ಮನಸ್ಸು ಮಾಡಬೇಕು. ಹಲಸಿನಿಂದ ವಿವಿಧ ಖಾದ್ಯಗಳನ್ನು ತಯಾರು ಮಾಡಲಾಗುತ್ತಿದ್ದು,ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಇದೆ ಎಂದು ಸಲಹೆ ನೀಡಿದರು.

ಸಾವಯವ ಮೇಳದಿಂದ ಮಾರುಕಟ್ಟೆ ಒದಗಿಸಲು ಅನುಕೂಲ: ಹಲಸಿನ ಹಣ್ಣು ಹಾಗೂ ಸಾವಯವ ಕೃಷಿಕರಿಗೆ ಒಳ್ಳೆಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸಾವಯವ ಮೇಳ ಹಾಗೂ ಹಲಸಿನ ಹಬ್ಬ ಆಯೋಜಿಸಲಾಗಿದೆ. ಹಲಸಿನಿಂದ ತಯಾರಿಸುವ ಪದಾರ್ಥ ಹಾಗೂ ವಸ್ತುಗಳನ್ನು ಈ ಭಾಗದ ಜನರಿಗೆ ಪರಿಚಯಿಸಲಾಗುತ್ತಿದೆ ಎಂದು ಪತ್ರಕರ್ತ ಹಾಗೂ ಆಯೋಜಕ ಹರ್ಷವರ್ಧನ ಶೀಲವಂತ ಹೇಳಿದರು.


ಧಾರವಾಡದ ಪ್ರಸೂತಿ ತಜ್ಞ ಹಾಗೂ ಸಹಜ ಕೃಷಿಕ ಡಾ. ಸಂಜೀವ ಕುಲಕರ್ಣಿ ಹಲಸಿನ ಹಣ್ಣಿನಿಂದ ಮಾಡುವ ವಿವಿಧ ಆಹಾರ ಪದಾರ್ಥಗಳ ಬಗ್ಗೆ ವಿವರಗಾಗಿ ತಿಳಿಸಿದರು. ಮಳಲಿ ಗ್ರಾಮದ ಸಸಿ ಸಂರಕ್ಷಕಿ ಕಮಲವ್ವ ಕಾನಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂಓದಿ:ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಅವಕಾಶ ಕೊಡಬೇಕಿತ್ತು ಮೂಜಗು ಶ್ರೀ

ABOUT THE AUTHOR

...view details