ಹುಬ್ಬಳ್ಳಿ:ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಪಿಒಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಗಣನೀಯವಾಗಿ ತಗ್ಗಿದ್ದು, ನಗರದ ಗೋಪನಕೊಪ್ಪದ ಗಣೇಶ ಮೂರ್ತಿ ತಯಾರಕ ಅರುಣ ಜಾಧವ್ ಪೇಪರ್ ಗಣಪ ತಯಾರಿಸುವ ಮೂಲಕ ಮಾದರಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಪರಿಸರ ಸ್ನೇಹಿ ಪೇಪರ್ ಗಣಪ: ಸಾರ್ವಜನಿಕರಿಂದ ಹೆಚ್ಚಿದ ಬೇಡಿಕೆ
ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ತಯಾರಕೊಬ್ಬರು ಪೇಪರ್ ಗಣಪತಿ ತಯಾರಿಸಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಜನರನ್ನು ಪ್ರೇರೆಪಿಸುತ್ತಿದ್ದಾರೆ.
ಹು-ಧಾ ಮಹಾನಗರ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಮುನ್ನವೇ ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಪರಿಸರ ಇಂಜಿನಿಯರ್ ವಿಭಾಗ ಹಾಗೂ ಗಣೇಶೋತ್ಸವ ಮಹಾಮಂಡಳ ಜಾಗೃತಿ ಮೂಡಿಸಿತ್ತು. ಗಣೇಶ ಚತುರ್ಥಿ ಸಂದರ್ಭದಲ್ಲಿ ಜಿಲ್ಲೆಗೆ ವಿವಿಧ ರಾಜ್ಯ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಂದ ಪಿಒಪಿ ಗಣಪತಿ ಮೂರ್ತಿಗಳ ಮಾರಾಟಕ್ಕೆ ಬರುವುದು ಸಾಮಾನ್ಯವಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರುಣ್, ಪೇಪರ್, ಅಂಟು ಮತ್ತು ಪೆವಿಕಿಕ್ ಬಳಸಿ ಗಣೇಶ ಮೂರ್ತಿ ತಯಾರಿಸಿ ಇತರರಿಗೂ ಮಾದರಿಯಾಗಿದ್ದಾರೆ.
ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡಬೇಕು ಎಂಬ ಸದುದ್ದೇಶದಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೂಡ ಸೈ ಎಂದಿದೆ. ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಕರನ್ನು ಪ್ರೋತ್ಸಾಹಿಸುವ ಜತೆಗೆ ನಗರ ಪ್ರದೇಶದಲ್ಲಿ ತಯಾರಿಕೆ ಮತ್ತು ಮಾರಾಟಕ್ಕೆ ಅಗತ್ಯ ವೇದಿಕೆ ಕಲ್ಪಿಸಿ ಕೊಡಬೇಕು. ಈ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ಲಭ್ಯವಾಗುವಂತಾಗುತ್ತವೆ ಎಂಬುದು ಜಾಧವ್ ಒತ್ತಾಯವಾಗಿದೆ.